ರಾಜಮೌಳಿ-ಮಹೇಶ್ ಬಾಬು ಸಿನಿಮಾ ಬಗ್ಗೆ ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?
ಟಾಲಿವುಡ್ನ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ 'ಆರ್ ಆರ್ ಆರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾಗಳ ಸರದಾರ ರಾಜಮೌಳಿ ಮುಂದಿನ ಸಿನಿಮಾ 'RRR' ಚಿತ್ರದ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಸದ್ಯ 'RRR' ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ.
ಕೆಲವೇ ದಿನಗಳಲ್ಲಿ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಲಿದೆ. ಈ ಸಿನಿಮಾ ಬಳಿಕ ರಾಜಮೌಳಿ ಮುಂದಿನ ಪ್ರಾಜೆಕ್ಟ್ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈಗಾಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ರಾಜಮೌಳಿ, ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಮಹೇಶ್ ಬಾಬು ಅಥವಾ ರಾಜಮೌಳಿ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.
ಆದರೆ ರಾಜಮೌಳಿ ಮುಂದಿನ ಸಿನಿಮಾದ ಬಗ್ಗೆ ಬರಹಗಾರ ವಿಜಯೇಂದ್ರ ಪ್ರಸಾದ್ ಬಹಿರಂಗ ಪಡಿಸಿದ್ದಾರೆ. ಆರ್ ಆರ್ ಆರ್ ಬಳಿಕ ರಾಜಮೌಳಿ, ಮಹೇಶ್ ಬಾಬು ಜೊತೆ ಸಿನಿಮಾ ಮಾಡುವ ಬಗ್ಗೆ ಆಂಗ್ಲ ವೆಬ್ ಪೋರ್ಟಲ್ ಜೊತೆ ಮಾತನಾಡಿ ಖಚಿತ ಪಡಿಸಿದ್ದಾರೆ.

"ಹೊಸ ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ನಮ್ಮ ತಲೆಯಲ್ಲಿ ಒಂದಿಷ್ಟು ಯೋಚನೆಗಳಿವೆ. ಆಫ್ರಿಕನ್ ಕಾಡಿನಲ್ಲಿ ಆಕ್ಷನ್ ಅಡ್ವೆಂಚರ್ ಸೆಟ್ ಹಾಕುವ ಪ್ಲಾನ್ ಕೂಡ ಇದೆ. ಇದನ್ನು ಹೇಗೆ ಸಾಧ್ಯವಾಗಿಸುವುದು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ" ಎಂದಿದ್ದರು. ಈ ಮೂಲಕ ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ಸದ್ಯ ಇಡೀ ತಂಡ ಆರ್ ಆರ್ ಆರ್ ಸಿನಿಮಾ ಬಿಡುಗಡೆ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಕೊರೊನಾ ಕಾರಣದಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಲೇ ಇದ್ದು, ಬಿಡುಗಡೆ ಕೂಡ ಮುಂದಕ್ಕೆ ಹೋಗುತ್ತಿದೆ. ಸದ್ಯ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ ಎಂದು ಅನೌನ್ಸ್ ಮಾಡಲಾಗಿತ್ತು. ಆದರೆ ಅಂದುಕೊಂಡ ದಿನಕ್ಕೆ ಸಿನಿಮಾ ಬಿಡುಗಡೆಯಾಗುವುದು ಅನುಮಾನವಾಗಿದೆ.


Click it and Unblock the Notifications











