"ನನ್ನ ಸಿನಿಮಾಗಳು ಸೋಲಬೇಕೆಂದು ಅವರೆಲ್ಲಾ ಕಾಯ್ತಿದ್ರು"; ನಟಿ ಕೃತಿ ಶೆಟ್ಟಿ ಆವೇದನೆ
ಹಾಸನದಲ್ಲಿ ಹುಟ್ಟಿ ಮುಂಬೈನಲ್ಲಿ ಓದಿ ಬೆಳೆದ ನಟಿ ಕೃತಿ ಶೆಟ್ಟಿ ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಂಟರ ಮನೆ ಹುಡುಗಿ ಕೃತಿ ನಾಯಕಿಯಾಗಿ ನಟಿಸಿದ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಆದರೆ ಬಳಿಕ ಆಕೆ ನಟಿಸಿದ ಸಿನಿಮಾಗಳು ಗೆಲ್ಲಲೇಯಿಲ್ಲ. ಈ ಬಗ್ಗೆ ಆಕೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸದ್ಯ ತಮಿಳಿನ ಮೂರು ಸಿನಿಮಾಗಳಲ್ಲಿ ಕೃತಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಒಂದು ಮಲಯಾಳಂ ಸಿನಿಮಾ ಕೂಡ ಕೈಯಲ್ಲಿದೆ. 'ಉಪ್ಪೆನ' ಚಿತ್ರದಲ್ಲಿ ನಟಿಸಿ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ಆಕೆ ಬಳಿಕ ಸೈಲೆಂಟ್ ಆಗಿಬಿಟ್ಟರು. ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಸಿಕ್ಕರೂ ಬಾಕ್ಸಾಫೀಸ್ನಲ್ಲಿ ಸಿನಿಮಾಗಳು ಸದ್ದು ಮಾಡಲಿಲ್ಲ.

2019ರಲ್ಲಿ ಬಂದ 'ಸೂಪರ್ 30' ಚಿತ್ರದಲ್ಲಿ ಮೊದಲಿಗೆ ಕೃತಿ ಶೆಟ್ಟಿ ಬಣ್ಣ ಹಚ್ಚಿದ್ದರು. ಹೃತಿಕ್ ರೋಷನ್ ನಟನೆಯ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು. ಬಳಿಕ ಬುಚ್ಚಿಬಾಬು ನಿರ್ದೇಶನದ 'ಉಪ್ಪೆನಾ' ಚಿತ್ರಕ್ಕೆ ಆಯ್ಕೆ ಆಗಿದ್ದರು. ನಂತರ ಶ್ಯಾಮ್ ಸಿಂಗ್ ರಾಯ್ ಚಿತ್ರದಲ್ಲೂ ಮಿಂಚಿದರು. ಮುಂದೆ ನಟಿಸಿದ ಸಿನಿಮಾಗಳೆಲ್ಲಾ ಸೋಲಿನ ಹಾದಿ ಹಿಡಿದವು.
ಸಂದರ್ಶನದಲ್ಲಿ ಮಾತನಾಡಿರುವ ಕೃತಿ ಶೆಟ್ಟಿ "ಉಪ್ಪೆನ ಬಿಗ್ ಹಿಟ್ ಆಯಿತು. ಆದರೆ ಕೆಲವರು ಮಾತ್ರ ನನಗೆ ಫ್ಲಾಪ್ ಎದುರಾಗುತ್ತದೆ ಕಾಯ್ತಿದ್ದರು. ಒಂದು ವರ್ಗದ ಜನ ನನಗೆ ಫ್ಲಾಪ್ ಬಂದರೆ ಬೊಟ್ಟು ಮಾಡಿ ತೋರಿಸಬೇಕೆಂದು ಅಂದುಕೊಂಡರು. ಆದರೆ ನಾನು ಹಿಟ್ಸ್, ಫ್ಲಾಪ್ಸ್ ಎರಡನ್ನೂ ಒಂದೇ ರೀತಿ ಸ್ವೀಕರಿಸುತ್ತೇನೆ. ಕಾರಣ ನನ್ನ ಮೊದಲ ಸಿನ್ಮಾ ಗೆಲ್ತು. ನಾನು ಟೋಟಲ್ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಆದ್ದರಿಂದ ಫ್ಲಾಪ್ ಬಂದಾಗ ಕೂಡ ಪೂರ್ಣ ಕ್ರೆಡಿಟ್ ತೆಗೆದುಕೊಳ್ಳಲ್ಲ" ಎಂದಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಎಲ್ಲೆಲ್ಲಿ ತಪ್ಪಾಯಿತು ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಗೆಲುವಿಗಿಂತ ಸೋಲಿನಲ್ಲೇ ಹೆಚ್ಚು ವಿಷಯಗಳನ್ನು ಕಲಿತಿದ್ದೇನೆ. ಸಿನಿಮಾ ಸೋಲು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಸಿನಿಮಾಗಳು ಯಾಕೆ ಗೆಲ್ಲಲಿಲ್ಲ ಎನ್ನುವ ವಿಶ್ಲೇಷಣೆ ನನಗೆ ಸಹಕಾರಿಯಾಯಿತು. ಟೀಕೆಗಳನ್ನು ಎದುರಿಸಿ ನಿಲ್ಲಲು ನೆರವಾಯಿತು ಎಂದು ಕೃತಿ ಶೆಟ್ಟಿ ಹೇಳಿದ್ದಾರೆ.

ನನ್ನ ಸೋಲಿಗಾಗಿ ಒಂದು ವರ್ಗ ಕಾಯುತ್ತಿದೆ ಎಂದು ಹೇಳಿದ ಕೃತಿ ಶೆಟ್ಟಿ ಅವರು ಯಾರು ಎನ್ನುವುದನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಅಭಿಮಾನಿಗಳು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಯಾರಪ್ಪಾ ಅದು ಕೃತಿ ಶೆಟ್ಟಿ ಸೋಲು ನೋಡಲು ಕಾಯುತ್ತಿರುವ ಮಹಾನುಭಾವರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಅಜಾಯನ್ತೇ ರಂದಂ ಮೋಷನಮ್' ಎನ್ನುವ ಮಲಯಾಳಂ ಚಿತ್ರದಲ್ಲಿ ಕೃತಿ ನಟಿಸುತ್ತಿದ್ದಾರೆ. ಟೊವಿನೋ ಥಾಮಸ್ ಹೀರೊ ಆಗಿ ನಟಿಸುತ್ತಿರುವ ಈ ಸಿನಿಮಾ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಲಕ್ಷ್ಮಿ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರ್ತಿದೆ. ಹೊಂಬಾಳೆ ಫಿಲ್ಮ್ಸ್ ಕರ್ನಾಟಕದ ವಿತರಣೆ ಹಕ್ಕು ಕೊಂಡುಕೊಂಡಿದೆ.
ಸೆಪ್ಟೆಂಬರ್ 12ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಅಜಾಯನ್ತೇ ರಂದಂ ಮೋಷನಮ್' ಸಿನಿಮಾ ತೆರೆಗೆ ಬರಲಿದೆ. 'ವಾ ವಾಥಿಯಾರ್', 'ಲವ್ ಇನ್ಸುರೆನ್ಸ್ ಕಂಪೆನಿ' ಹಾಗೂ 'ಜೆನ್ನೀ' ಮೂರು ತಮಳು ಸಿನಿಮಾಗಳು ಕೃತಿ ಶೆಟ್ಟಿ ಕೈಯಲ್ಲಿವೆ. ಕಾರ್ತಿ, ಪ್ರದೀಪ್ ರಂಗನಾಥನ್ ಹಾಗೂ ಜಯಂ ರವಿ ಜೊತೆ ನಟಿಸೋ ಅವಕಾಶ ಪಡೆದುಕೊಂಡಿದ್ದಾರೆ.


Click it and Unblock the Notifications











