ನಾನು ಅಲ್ಲು ಅರ್ಜುನ್ ಆಸ್ತಿಯಲ್ಲ ; ಗುಡುಗಿದ್ದೇಕೆ ನಟಿ - ಅಷ್ಟಕ್ಕೂ ಯಾರು ಈ ಚೆಲುವೆ ?
ಚಿತ್ರರಂಗದಲ್ಲಿ ಸಂಬಂಧ ಕೇವಲ ಚಿತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಬೆಳ್ಳಿಪರದೆಯ ಆಚೆಯೂ ಇಲ್ಲಿ ನಟ-ನಟಿಯರ ನಡುವೆ ಸ್ನೇಹ ಚಿಗುರೊಡೆದಿರುತ್ತೆ. ಜೊತೆಯಲ್ಲಿ ಆಕ್ಟ್ ಮಾಡಿರಲಿ, ಮಾಡದಿರಲಿ.. ಪರಸ್ಪರ ಗೌರವ ಇರುತ್ತೆ. ಬೆಂಬಲ ಇರುತ್ತೆ. ಆದರೆ ಇವರ ಈ ಆತ್ಮೀಯತೆಯನ್ನು ಕೂಡ ಅನುಮಾನದ ದೃಷ್ಟಿಯಿಂದ ನೋಡುವ ಒಂದು ವರ್ಗ ಈಗ ಹೆಚ್ಚುತ್ತಿದೆ.
ಅದರಲ್ಲಿಯೂ ನಾಯಕಿಯರು ಯಾರದಾದರೂ ನಾಯಕ ಜೊತೆ ಚೂರು ಆಪ್ತವಾಗಿ ನಡೆದುಕೊಂಡರೆ ಸಾಕು.. ! ಇನ್ಸ್ಟಾಗ್ರಾಮ್ನಲ್ಲಿ ಸೈಬರ್ ದಾಳಿ ಶುರುವಾಗುತ್ತೆ. ಹೊಲಸಾತಿ ಹೊಲಸು ಮಾತುಗಳಿಂದ ನಟಿಯರ ಕಾಮೆಂಟ್ ಸೆಕ್ಷನ್ ತುಂಬಿ ತುಳುಕುತ್ತೆ. ಹಾಗಂಥ ಅಂದಿದ್ದನ್ನೆಲ್ಲ ಸಹಿಸಿಕೊಳ್ಳಬೇಕು ಅಂತೇನು ಇಲ್ಲವಲ್ಲ. ಹೀಗಾಗಿಯೇ ಹಲವು ನಾಯಕಿಯರು ಅಲ್ಲಲ್ಲೇ ಗ್ರಹಚಾರ ಬಿಡಿಸುತ್ತಾರೆ. ಉದಾಹರಣೆಗೆ ಸೀರತ್ ಕಪೂರ್.

ಹೌದು, ಸೀರತ್ ಕಪೂರ್ ಹೇಳಿಕೊಳ್ಳಲು ಪಂಜಾಬ್ನ ಚೆಲುವೆ. ಆದರೆ ನೆಲೆಯೂರಿದ್ದು ದಕ್ಷಿಣದಲ್ಲಿ. ''ರನ್ ರಾಜಾ ರನ್''.. ''ಟೈಗರ್''.. ''ಕೊಲಂಬಸ್''.. ''ರಾಜು ಗಾರಿ ಗದಿ''..''ಒಕ್ಕ ಕ್ಷಣಂ''.. ಹೀಗೆ ಹಲವು ತೆಲುಗು ಚಿತ್ರಗಳ ಮೂಲಕ ಆಂಧ್ರ ಚಿತ್ರ ರಸಿಕರ ಹೃದಯ ಗೆದ್ದ ಸೀರತ್ ಡ್ಯಾನ್ಸ್ ಕೊರಿಯೋಗ್ರಾಫರ್ ಕೂಡ ಹೌದು. ಗಾಯಕಿ ಕೂಡ ಹೌದು.
ಇಂಥಾ ಸೀರತ್ ಕಪೂರ್ ಏಪ್ರಿಲ್ 8ರಂದು ತೆಲುಗು ನಾಡಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಅಲ್ಲು ಅರ್ಜುನ್ ಜೊತೆ ಪ್ರೈವೆಟ್ ಜೆಟ್ನಲ್ಲಿರುವ ಫೋಟೊ ಹಂಚಿಕೊಂಡು ಸಿನಿಮಾ ಇರಲಿ, ಸಂಬಂಧ ಇರಲಿ, ಎರಡನ್ನು ನೀವು ತುಂಬಾ ಚೆನ್ನಾಗಿ ನಿಭಾಯಿಸುತ್ತೀರಾ. ನಿಮ್ಮ ಈ ಸರಳತೆ ಮತ್ತು ಒಳ್ಳೆಯ ಗುಣ ನಮಗೆಲ್ಲ ಇಷ್ಟ. ತೆರೆಯ ಮೇಲೆ ಮತ್ತು ನಿಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ಯಶಸ್ಸು ನಿಮ್ಮದಾಗಲಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸಿದ್ದರು. ನನ್ನ ಬೆಂಬಲ ಸದಾ ನಿಮಗೆ ಎಂದು ಹೇಳಿದ್ದರು.
ಸೀರತ್ ಹಂಚಿಕೊಂಡ ಈ ಫೋಟೊವನ್ನು 7,70,000 ಜನ ಮೆಚ್ಚಿಕೊಂಡರು. ಹಲವರು ಫೋಟೊ ಕುರಿತು ಒಳ್ಳೆಯ ಮಾತುಗಳನ್ನೇ ಆಡಿದರು. ಆದರೆ ಒಬ್ಬ ವ್ಯಕ್ತಿ ಮಾತ್ರ ಸೀರತ್ ಹಂಚಿಕೊಂಡ ಮತ್ತೊಂದು ಫೋಟೊಗೆ ಕಾಮೆಂಟ್ ಮಾಡಿದ್ದಾನೆ. ''ಅಲ್ಲು ಅರ್ಜುನ್ ಆಸ್ತಿ'' ಎಂದು ಹೇಳಿದ್ದಾನೆ.
ಬೇರೆಯವರಾಗಿದ್ದರೆ ಕೊಚ್ಚೆ ಮೇಲೆ ಕಲ್ಲು ಎಸೆಯುವುದು ಬೇಡ ಎಂದುಕೊಂಡು ಸುಮ್ಮನಾಗುತ್ತಿದ್ದರೇನೋ..? ಅಥವಾ ಇಗ್ನೋರ್ ಮಾಡುತ್ತಿದ್ದರೇನೋ..? ಆದರೆ ಸೀರತ್ ಮಾತ್ರ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ತಿರುಗೇಟು ಕೊಟ್ಟಿದ್ದಾರೆ.

ವ್ಯಕ್ತಿಯ ಕಾಮೆಂಟ್ಗೆ ಕೂಡಲೇ ರಿಪ್ಲೈ ಮಾಡಿರುವ ಸೀರತ್ ಕೇವಲ ಹೃದಯ ಎಮೋಜಿಯನ್ನು ಸೇರಿಸಿದ ಮಾತ್ರಕ್ಕೆ, ಅದು ಗೌರವಯುತವಾಗಿ ಕೇಳಿಸುವುದಿಲ್ಲ ಸರ್. ಮಹಿಳೆ ಯಾರ ಆಸ್ತಿಯೂ ಅಲ್ಲ, ಅವಳಿಗೆ ತನ್ನದೇ ಗುರುತು ಇದೆ, ಕನಸು ಇದೆ. ಅವಳು ಧ್ವನಿ ಹೊಂದಿರುವ ವ್ಯಕ್ತಿ. ಗೌರವದಿಂದ ಮೆಚ್ಚಿ, ಮಾಲೀಕತ್ವದಿಂದಲ್ಲ. ನಿಮಗೆ ಶುಭವಾಗಲಿ ಎಂದಿದ್ದಾರೆ.
ಸದ್ಯ ಸೀರತ್ ಅವರ ಈ ನಡೆ ಮತ್ತು ನುಡಿಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವರು ಸರಿಯಾಗಿ ಬುದ್ದಿ ಕಲಿಸಿದ್ದೀರಾ, ಸರಿಯಾಗಿ ಹೇಳಿದ್ದೀರಾ ಎಂದು ಸೀರತ್ ಅವರಿಗೆ ಚಪ್ಪಾಳೆ ಹೊಡೆಯುತ್ತಿದ್ದಾರೆ.
ಅಂದ್ಹಾಗೇ ಸೀರತ್ ಜನಿಸಿದ್ದು ಏಪ್ರಿಲ್ 3, 1993 ರಂದು. ಮುಂಬೈ ಇವರ ಜನ್ಮಸ್ಥಾನ. ಇವರ ತಂದೆ ವಿನೀತ್ ಕಪೂರ್ ಹೋಟೆಲ್ ಉದ್ಯಮ ನಡೆಸಿದರೆ, ತಾಯಿ ನೀನಾ ಸಿಹೋಟಾ ಕಪೂರ್ ಏರ್ ಇಂಡಿಯಾದ ಗಗನ ಸಖಿ. ನೃತ್ಯದ ಮೇಲಿನ ಇವರ ಆಸಕ್ತಿಯೇ ಅವರನ್ನು ಚಿತ್ರರಂಗಕ್ಕೆ ಕರೆತಂದಿತು. ''ಸೇವ್ ದಿ ಟೈಗರ್ಸ್'' ಇವರು ಅಭಿನಯದ ಇತ್ತೀಚಿನ ವೆಬ್ ಸರಣಿ. ಜೀಯೊ ಹಾಟ್ ಸ್ಟಾರ್ ನಲ್ಲಿ ಈ ಸರಣಿ ಲಭ್ಯ ಇದೆ.



Click it and Unblock the Notifications