ಧನುಷ್ ಜೊತೆ ಶೇಖರ್ ಕಮ್ಮುಲ ಸಿನಿಮಾ ಸಾಧ್ಯವಾಗಿದ್ದು ಹೇಗೆ?
ಧನುಷ್ ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡುತ್ತಿದ್ದಾರೆ ಎಂದಾಗ ಎಲ್ಲರೂ ಹುಬ್ಬೇರಿಸಿದರು. ಇದೇನಿದು ಹೀಗಾಯಿತು, ಕಮ್ಮುಲ ನಿರ್ದೇಶನದ ಸ್ಟೈಲ್ಗೆ ಧನುಷ್ ಒಪ್ಪಿಕೊಂಡಿದ್ದು ಹೇಗೆ? ಎಂದು ಹಲವು ಸಿನಿ ಪ್ರೇಮಿಗಳ ಆಶ್ಚರ್ಯಪಟ್ಟುಕೊಂಡರು.
ಶೇಖರ್ ಕಮ್ಮುಲ ಯಾವ ಹೀರೋಯಿಸಮ್ ಸಹ ಇಲ್ಲದ ಸಿನಿಮಾ ಮಾಡುವವರು, ಅವರ ಸಿನಿಮಾದಲ್ಲಿ ಇಸಂಗಳು ತುಸುವೂ ಇರುವುದಿಲ್ಲ. ಇಷ್ಟು ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮಾಸ್ ಹೀರೋ ಎಂದು ಕರೆಸಿಕೊಂಡಿರುವ ಧನುಷ್, ಕಮ್ಮುಲ ಸಿನಿಮಾಕ್ಕೆ ಒಪ್ಪಿಕೊಂಡಿದ್ದು ಹಲವರಿಗೆ ಆಶ್ಚರ್ಯ ತರಿಸಿದೆ.
ಇದೀಗ ಕಮ್ಮುಲ ನಿರ್ದೇಶನದ 'ಲವ್ ಸ್ಟೋರಿ' ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರಕ್ಕಾಗಿ ಮಾಡಲಾದ ಸಂದರ್ಶನವೊಂದರಲ್ಲಿ ಧನುಷ್ ಜೊತೆಗೆ ಸಿನಿಮಾ ಸಾಧ್ಯವಾಗಿದ್ದು ಹೇಗೆ ಎಂದು ಶೇಖರ್ ಕಮ್ಮುಲ ಹೇಳಿದ್ದಾರೆ.
ನಾನು, ಧನುಷ್ ಸಿನಿಮಾ ಮಾಡುವುದು ಘೋಷಿಸಿದಾಗ ಹಲವರು ನಂಬಿರಲಿಲ್ಲ. ಅಷ್ಟೇ ಅಲ್ಲ ಧನುಷ್ ಒಪ್ಪಿಗೆ ನೀಡುವ ಮುನ್ನಾ ನಾನು ಸಹ ನಂಬಿರಲಿಲ್ಲ. ಆದರೆ ಅದು ಹೇಗೋ ಅಚಾನಕ್ಕಾಗಿ ಸಾಧ್ಯವಾಗಿಬಿಟ್ಟಿತು, ಇದು ಬಹುತೇಕ ಅದೃಷ್ಟವೆಂದೇ ಹೇಳಬೇಕು ಎಂದಿದ್ದಾರೆ ಶೇಖರ್ ಕಮ್ಮುಲ.

'ಕರ್ಣನ್' ಸಿನಿಮಾ ನೋಡುವಾಗ ಅನಿಸಿತು: ಶೇಖರ್ ಕಮ್ಮುಲ
ಲಾಕ್ಡೌನ್ ಅವಧಿಯಲ್ಲಿ ಧನುಷ್ ನಟನೆಯ 'ಕರ್ಣನ್' ಸಿನಿಮಾ ನೋಡುತ್ತಿದ್ದೆ. ನಾನೇಕೆ ಧನುಷ್ ಜೊತೆ ಸಿನಿಮಾ ಮಾಡಬಾರದು ಎನಿಸಿತು. ಅದಾಗಲೇ ನನ್ನ ಬಳಿ ಕತೆ ಇತ್ತು ಮತ್ತು ಕತೆಗೆ ನಿರ್ಮಾಪಕರೂ ಇದ್ದರು. ಕೂಡಲೇ ನಿರ್ಮಾಪಕರನ್ನು ಕೇಳಿದೆ ಧನುಷ್ ಅನ್ನು ಕೇಳಲು ಸಾಧ್ಯವಾಗುತ್ತದೆಯೇ ಎಂದು. ಅವರು ಹೌದೆಂದು ಧನುಷ್ ಅನ್ನು ಸಂಪರ್ಕಿಸಿದರು. ಧನುಷ್ ಆಗ ಲಾಸ್ ಏಂಜಲಿಸ್ನಲ್ಲಿದ್ದರು. ಎರಡು ದಿನ ಆದಮೇಲೆ ಇಂಥಹಾ ಸಮಯಕ್ಕೆ ಸಿಗುವುದಾಗಿ ಹೇಳಿದರು.

ಅರ್ಧಗಂಟೆ ಅಷ್ಟೆ ಕತೆ ಹೇಳಿದೆ: ಕಮ್ಮುಲ
ನಾನೂ ಸಹ ಸಿದ್ದನಾಗಿ ಹೋದೆ ಸಮಯಕ್ಕೆ ಸರಿಯಾಗಿ ಅವರು ಬಂದಿದ್ದರು. ಅರ್ಧ ಗಂಟೆಗಳ ಕಾಲ ಕತೆಯನ್ನು ನರೇಟ್ ಮಾಡಿದೆ. ಮೌನವಾಗಿ ಕೇಳಿಸಿಕೊಂಡ ಧನುಷ್, ಸರಿ ನಾನು ಸಿನಿಮಾ ಮಾಡುತ್ತೇನೆ. ಡೇಟ್ಸ್ ಇತರೆ ಮಾಹಿತಿಗಳನ್ನು ಯಾರ ಬಳಿ ಮಾತನಾಡಬೇಕು ಎಂದರು. ಆ ಕ್ಷಣ ನನಗೇ ಆಶ್ಚರ್ಯವಾಗಿಬಿಟ್ಟಿತು. ನಾನು ಹಲವು ಹೀರೋಗಳಿಗೆ ಕತೆ ಹೇಳಿದ್ದೇನೆ, ಹಲವರು ಬೇಡವೆಂದಿದ್ದಾರೆ, ಇದೂ ಹಾಗೆಯೇ ಆಗುತ್ತದೆ ಎಂದುಕೊಂಡಿದ್ದೆ ಆದರೆ ಧನುಷ್ ಒಪ್ಪಿಕೊಂಡು ಬಿಟ್ಟರು ಎಂದಿದ್ದಾರೆ ಕಮ್ಮುಲ.

ಧನುಷ್ ಒಬ್ಬ ಪರಿಪೂರ್ಣ ನಟ: ಕಮ್ಮುಲ
ಧನುಷ್ ಒಂದು ರೀತಿ ಪರಿಪೂರ್ಣ ನಟ. ಅವರನ್ನು ನೀವು ಯಾವ ಪಾತ್ರಕ್ಕೆ ಬೇಕಾದರೂ ಹಾಕಬಹುದು ಅವರು ಎಲ್ಲ ಪಾತ್ರಕ್ಕೂ ಸೂಟ್ ಆಗುತ್ತಾರೆ. ಗ್ಯಾಂಗ್ಸ್ಟರ್, ಕೊಲೆಗಾರ, ರಾಜಕಾರಣಿ, ಮಾಸ್ ಹಿರೋ, ರೌಡಿ, ಎಂಜಿನಿಯರ್, ಬಡವ, ಶ್ರೀಮಂತ ಹೀಗೆ ಎಲ್ಲ ಪಾತ್ರಗಳಿಗೂ ಅವರು ಒಗ್ಗುತ್ತಾರೆ. ಅವರಿಗೆ ಇಂಥಹುದೇ ಆದ ಇಸಂ ಇಲ್ಲ. ಹಾಗಾಗಿ ನನ್ನ ಸಿನಿಮಾಕ್ಕೆ ಅವರು ಸರಿಯಾಗಿ ಸೂಟ್ ಆಗುತ್ತಾರೆ ಎನಿಸಿ ಅವರನ್ನು ಅಪ್ರೋಚ್ ಮಾಡಿದೆವು'' ಎಂದರು ಕಮ್ಮುಲ.

ಧನುಷ್ ಜೊತೆ ಮಾಡುತ್ತಿರುವ ಸಿನಿಮಾದ ಕತೆ ಏನು?
ಧನುಷ್ ಜೊತೆ ಮಾಡುತ್ತಿರುವ ಸಿನಿಮಾ ಪೊಲಿಟಿಕಲ್ ಥ್ರಿಲ್ಲರ್ ಆಗಿದೆ. ಅದು ರಾಜಕಾರಣ ಮತ್ತು ಸಾಮಾನ್ಯ ವ್ಯಕ್ತಿಯ ನಡುವಿನ ಸಂಘರ್ಷದ ಮಾದರಿಯ ಕತೆಯನ್ನು ಹೊಂದಿರಲಿದೆ. ಸಿನಿಮಾವು ಪ್ಯಾನ್ ಇಂಡಿಯಾ ಮಾದರಿಯಲ್ಲಿದ್ದು, ಕತೆಯೂ ಸಹ ಪ್ಯಾನ್ ಇಂಡಿಯಾಗೆ ಹೊಂದಿಕೆ ಆಗುವಂತೆಯೇ ಇದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. 'ಲೀಡರ್' ನಂತರ ಬಹಳ ವರ್ಷಗಳ ನಂತರ ರಾಜಕೀಯ ಕಥಾವಸ್ತುವುಳ್ಳ ಸಿನಿಮಾ ಮಾಡುತ್ತಿದ್ದೇನೆ'' ಎಂದಿದ್ದಾರೆ ಶೇಖರ್ ಕಮ್ಮುಲ.


Click it and Unblock the Notifications











