ತೆಲುಗು ಚಿತ್ರತಂಡವೊಂದನ್ನು ಭೇಟಿ ಮಾಡಿ ಹೊಗಳಿ ಸಿನಿಮಾ ನೋಡುವಾಸೆ ವ್ಯಕ್ತಪಡಿಸಿದ ಶಿವಣ್ಣ
ಯುವ ನಿರ್ದೇಶಕ, ನಿರ್ಮಾಪಕ ಹಾಗೂ ಯುವ ನಟರು ಸೇರಿ ಸಿನಿಮಾಗಳನ್ನು ತಯಾರಿಸಿದಾಗ ಚಿತ್ರರಂಗದ ದಿಗ್ಗಜ ನಟರು ಆ ತಂಡಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿ ಬೆಂಬಲ ಸೂಚಿಸುವುದು ಕಾಮನ್. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೇ ಬಂದ ಯುವ ಕಲಾವಿದರ ತಂಡಕ್ಕೆ ಈ ರೀತಿಯ ಬೆಂಬಲ ಅತ್ಯಗತ್ಯ.
ಈ ರೀತಿ ಯುವ ತಂಡಗಳಿಗೆ ಸ್ಟಾರ್ ನಟರು ಬೆಂಬಲ ಸೂಚಿಸಿದರೆ ಆ ನಟನ ಅಭಿಮಾನಿಗಳು ಚಿತ್ರ ವೀಕ್ಷಿಸುತ್ತಾರೆ ಹಾಗೂ ಚಿತ್ರಕ್ಕೆ ಪ್ರಚಾರ ಸಿಗುತ್ತದೆ ಎಂಬುವುದು ಲೆಕ್ಕಾಚಾರ. ಇನ್ನು ಕಳೆದ ಶುಕ್ರವಾರ ( ಫೆಬ್ರವರಿ 3 ) ಬಿಡುಗಡೆಗೊಂಡ ತೆಲುಗು ಚಿತ್ರ 'ರೈಟರ್ ಪದ್ಮಭೂಷಣ್' ಸಹ ಈ ಸಾಲಿಗೆ ಸೇರ್ಪಡೆಗೊಂಡಿದೆ.
ಹೌದು, ಈ ಹಿಂದೆ ಕಲರ್ ಫೋಟೊ ರೀತಿಯ ಸೂಪರ್ ಹಿಟ್ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದ ನಟ ಸುಹಾಸ್ ಪಗೊಲು ನಾಯಕನಾಗಿ ಅಭಿನಯಿಸಿರುವ ರೈಟರ್ ಪದ್ಮಭೂಷಣ್ ಸಿನಿಮಾ ಸದ್ಯ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಸದ್ದು ಮಾಡುತ್ತಿದ್ದು, ಸಿನಿ ರಸಿಕರಿಂದ ದೊಡ್ಡ ಮಟ್ಟದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಯುವ ನಿರ್ದೇಶಕ ಷಣ್ಮುಖ ಪ್ರಶಾಂತ್ ನಿರ್ದೇಶನ ಈ ಚಿತ್ರಕ್ಕಿದ್ದು, ಚಂದ್ರು ಮನೋಹರನ್, ಅನುರಾಗ್ ರೆಡ್ಡಿ ಹಾಗೂ ಶರತ್ ಚಂದ್ರ ಈ ಮೂವರು ಯುವ ನಿರ್ಮಾಪಕರು ಈ ಪುಟ್ಟ ಬಜೆಟ್ನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದೇ ತಂಡ ಇದೀಗ ಹೈದರಾಬಾದ್ಗೆ ತೆರಳಿದ್ದ ಕನ್ನಡದ ಶಿವ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ ಚಿತ್ರವನ್ನು ಹೊಗಳಿ ಸಿನಿಮಾ ನೋಡುವಾಸೆ ವ್ಯಕ್ತಪಡಿಸಿದ್ದಾರೆ.

ಸಿನಿಮಾಗೆ ಬಜೆಟ್ ಮುಖ್ಯವಲ್ಲ
ಚಿತ್ರದ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಶಿವಣ್ಣ ಅವರನ್ನು ಭೇಟಿ ಮಾಡಿರುವ ಸಂದರ್ಭದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊದಲ್ಲಿ ಮಾತನಾಡಿರುವ ಶಿವಣ್ಣ "ರೈಟರ್ ಪದ್ಮಭೂಷಣ್ ಸಿನಿಮಾ ಬಗ್ಗೆ ಸಾಕಷ್ಟು ರಿವ್ಯೂಗಳನ್ನು ಕೇಳಿದ್ದೇನೆ. ಇಂತಹ ಸುಂದರ ಸಿನಿಮಾವನ್ನು ಎಲ್ಲರೂ ಸ್ವೀಕರಿಸುತ್ತಿದ್ದಾರೆ. ಚಿತ್ರ ಪ್ರಿ ರಿಲೀಸ್ ಪ್ರದರ್ಶನದ ವಿಡಿಯೊ ತುಣುಕುಗಳನ್ನು ನೋಡಿದೆ, ಅದರಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೆ ಮನ ಮುಟ್ಟುವಂತಿತ್ತು. ಈ ರೀತಿಯ ಬೆಂಬಲ ಯುವ ಪ್ರತಿಭೆಗಳಿಗೆ ಮುಂದೆ ಬಂದು ಮತ್ತಷ್ಟು ಸಿನಿಮಾಗಳನ್ನು ಮಾಡಲು ಸ್ಪೂರ್ತಿಯನ್ನು ನೀಡುತ್ತದೆ. ಬಜೆಟ್ ಎಷ್ಟು ಎನ್ನುವುದು ಲೆಕ್ಕಕ್ಕೆ ಬರುವುದಿಲ್ಲ, ಚಿತ್ರದ ಕಂಟೆಂಟ್ ಜನರ ಮನಸ್ಸನ್ನು ಮುಟ್ಟುವುದಷ್ಟೇ ಮುಖ್ಯ. ಈ ಚಿತ್ರ ಆ ಕೆಲಸವನ್ನು ಮಾಡಿದೆ" ಎಂದು ಹೇಳಿಕೊಂಡರು.

ಚಿತ್ರ ನೋಡುವಾಸೆ ವ್ಯಕ್ತಪಡಿಸಿದ ಶಿವಣ್ಣ
ಇನ್ನೂ ಮುಂದುವರಿದು ಮಾತನಾಡಿದ ಶಿವ ರಾಜ್ಕುಮಾರ್ ಚಿತ್ರ ಎಲ್ಲರ ಮನಸ್ಸನ್ನು ಮುಟ್ಟುತ್ತಿದ್ದು, ಚಿತ್ರ ನೋಡದ ತನ್ನ ಮನಸ್ಸನ್ನೂ ಮುಟ್ಟಿದೆ, ರಿವ್ಯೂಗಳನ್ನು ಕೇಳಿ ಚಿತ್ರ ನೋಡಲು ಕಾತರನಾಗಿದ್ದೇನೆ, ಆದಷ್ಟು ಬೇಗ ಸಿನಿಮಾ ನೋಡುತ್ತೇನೆ ಎಂದಿದ್ದಾರೆ. ಇನ್ನು ಶಿವ ರಾಜ್ಕುಮಾರ್ ತಮ್ಮ ನಟನೆಯ ವೇದ ಚಿತ್ರದ ತೆಲುಗು ವರ್ಷನ್ ಶಿವ ವೇದ ಸಿನಿಮಾ ತೆಲುಗು ರಾಜ್ಯಗಳಲ್ಲಿ ಬಿಡುಗಡೆಯಾದ ಸಲುವಾಗಿ ಅದಕ್ಕೆ ಪ್ರಚಾರಕ್ಕಾಗಿ ಹೈದರಾಬಾದ್ಗೆ ತೆರಳಿದ್ದಾಗ ಈ ಭೇಟಿ ನಡೆದಿದೆ.

ರೈಟರ್ ಪದ್ಮಭೂಷಣ್ ಕಲೆಕ್ಷನ್
ಇನ್ನು ಈ ರೈಟರ್ ಪದ್ಮಭೂಷಣ್ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಚಿತ್ರ ನಿರ್ಮಾಪಕರು ಮೊದಲ ಆರು ದಿನಗಳಲ್ಲಿ ಚಿತ್ರ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿದೆ. ಚಿತ್ರ ಆರು ದಿನಗಳಲ್ಲಿ 7.29 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ವಾರಕ್ಕಿಂತ ಎರಡನೇ ವಾರ ಹೆಚ್ಚು ಚಿತ್ರಮಂದಿರಗಳನ್ನು ಈ ಚಿತ್ರ ಪಡೆದುಕೊಂಡಿದ್ದು, ಯುಎಸ್ ಬಾಕ್ಸ್ ಆಫೀಸ್ನಲ್ಲಿ 300000 ಡಾಲರ್ಗೂ ಹೆಚ್ಚು ಗಳಿಕೆ ಮಾಡಿದೆ.


Click it and Unblock the Notifications











