ಶಿವಣ್ಣ, ರಾಮ್ಚರಣ್ ಸಿನಿಮಾ ಒಪ್ಪಿಕೊಳ್ಳಲು 'ಜೈಲರ್' ಕಾರಣ ಅಲ್ಲ, ಮತ್ತೇನು?
ಕನ್ನಡ ಚಿತ್ರರಂಗದಲ್ಲಿ ಬಹಳ ಬ್ಯುಸಿ ಇರುವ ನಟ ಶಿವರಾಜ್ಕುಮಾರ್. ಸದಾ ಐದಾರು ಸಿನಿಮಾಗಳು ಶಿವಣ್ಣ ಕೈಯಲ್ಲಿರುಯತ್ತವೆ. ವಯಸ್ಸು 60 ದಾಟಿದ್ರು ಶಿವಣ್ಣ ಎನರ್ಜಿ ಮಾತ್ರ ಮೆಚ್ಚಲೇಬೇಕು. ಇನ್ನು ಇಷ್ಟು ದಿನ ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದ ಶಿವಣ್ಣ ಇದೀಗ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದಾರೆ.
'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಶಿವಣ್ಣ ಆರ್ಭಟ ನೋಡಿ ಪರಭಾಷಾ ಸಿನಿರಸಿಕರು ಫಿದಾ ಆಗಿದ್ದರು. ಸೆಂಚುರಿ ಸ್ಟಾರ್ ಸ್ವಾಗ್, ಸ್ಟೈಲ್, ಲುಕ್ ನೋಡಿ ಕಳೆದೋಗಿದ್ದರು. ಇದೇ ಕಾರಣಕ್ಕೆ ಈಗ ತೆಲುಗು, ತಮಿಳಿನಿಂದ ಸಾಕಷ್ಟು ಅವಕಾಶಗಳು ಹ್ಯಾಟ್ರಿಕ್ ಹೀರೊನ ಅರಸಿ ಬರುತ್ತಿದೆ. ರಾಮ್ಚರಣ್ ಮುಂದಿನ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಆ ಸಿನಿಮಾ ಮೂಹೂರ್ತ ನೆರವೇರಿದೆ.

ಬುಚ್ಚಿಬಾಬು ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ರಾಮ್ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಎ. ಆರ್ ರಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹೈದರಾಬಾದ್ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮುಹೂರ್ತ ನೆರವೇರಿದೆ. ನಟ ಚಿರಂಜೀವಿ, ನಿರ್ದೇಶಕ ಶಂಕರ್, ನಿರ್ಮಾಪಕ ಅಲ್ಲು ಅರವಿಂದ್, ಜಾನ್ವಿ ತಂದೆ ಬೋನಿ ಕಪೂರ್ ಸೇರಿದಂತೆ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.
ಇದು ರಾಮ್ಚರಣ್ ನಟನೆಯ 16ನೇ ಸಿನಿಮಾ. ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಹಾಗಾಗಿ ಸದ್ಯಕ್ಕೆ RC16 ಅಂತ್ಲೇ ಸದ್ಯಕ್ಕೆ ಕರೆಯಲಾಗುತ್ತಿದೆ. 'ಜೈಲರ್' ಚಿತ್ರದಲ್ಲಿ ನರಸಿಂಹ ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕ ಬಳಿಕ ಶಿವಣ್ಣನಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಎಲ್ಲವನ್ನು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಅಳೆದು ತೂಗಿ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. RC16 ಸಿನಿಮಾ ಪಾತ್ರ ಯಾಕೆ ಒಪ್ಪಿಕೊಂಡೆ ಎಂದು ಶಿವಣ್ಣ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಂದರ್ಶನವೊಂದರಲ್ಲಿ RC16 ಸಿನಿಮಾ ಪಾತ್ರದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. "ನಿರ್ದೇಶಕ ಬುಚ್ಚಿಬಾಬು ಈ ಸಿನಿಮಾ ಕಥೆ ತಂದಾಗ ಶಾಕ್ ಆಗಿದ್ದೆ. ಇದು ನಿಜಕ್ಕೂ ಮತ್ತೊಂದು ಲೆವೆಲ್ ಸಿನಿಮಾ. ಆತ ಹೇಗೆ ಈ ಪಾತ್ರವನ್ನು ಕಲ್ಪಿಸಿಕೊಂಡ ಎನ್ನುವುದೇ ನನಗೆ ಅಚ್ಚರಿ ತಂದಿತ್ತು. ಆ ಪಾತ್ರಕ್ಕೆ ಒಂದು ಉದ್ದೇಶ ಇದೆ. ನಾನು ಮಾಡುವುದರಲ್ಲಿ ಕೂಡ ಒಂದು ಅರ್ಥ ಇದೆ. ರಾಮ್ಚರಣ್ ಕೂಡ ಥ್ರಿಲ್ಲ ಆಗಿದ್ದರು. ಶಿವಣ್ಣ ಮಾಡ್ತಾರಾ? ಅವರಂದ್ರೆ ನನಗೆ ಬಹಳ ಇಷ್ಟ ಎಂದರು. ನನಗೂ ಅವರಂದ್ರೆ ಇಷ್ಟ. ಅವರು ಒಳ್ಳೆಯ ವ್ಯಕ್ತಿ. ಅದ್ಭುತ ನಟ. ಪಾತ್ರದಲ್ಲಿ ಒಂದು ವಿಭಿನ್ನತೆ ಇದೆ" ಎಂದು ಶಿವಣ್ಣ ಹೇಳಿದ್ದಾರೆ.
'ಜೈಲರ್' ಚಿತ್ರದಲ್ಲಿ ತಮ್ಮ ಪಾತ್ರವನ್ನು ಪ್ರೇಕ್ಷಕರು ಒಪ್ಪಿದರು ಎನ್ನುವ ಕಾರಣಕ್ಕೆ ಶಿವಣ್ಣ ಎಲ್ಲಾ ಕಥೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನಿಜಕ್ಕೂ ಆ ಪಾತ್ರಕ್ಕೆ ತಾವು ಬೇಕು, ನಟಿಸಬೇಕು ಎನಿಸುವ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಅರ್ಥವಾಗುತ್ತಿದೆ. ಸಹಜವಾಗಿಯೇ RC16 ಸಿನಿಮಾ ಬಗ್ಗೆಯೂ ನಿರೀಕ್ಷೆ ಮೂಡಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ RC16 ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದಲ್ಲಿ ಹಳ್ಳಿ ಹಿನ್ನೆಲೆಯ ಕಥೆಯನ್ನು ಹೇಳುತ್ತಿದ್ದು ರಾಮ್ಚರಣ್ ಕಬ್ಬಡ್ಡಿ ಆಟಗಾರನ ಪಾತ್ರ ಮಾಡುತ್ತಾರೆ ಎನ್ನಲಾಗ್ತಿದೆ. ಆತನ ಗುರು ಸಮಾನವಾದ ಪಾತ್ರಕ್ಕೆ ಶಿವಣ್ಣ ಬಣ್ಣ ಹಚ್ಚುತ್ತಾರೆ ಎನ್ನುವ ಊಹಾಪೋಹವಿದೆ. ಇನ್ನು ಚಿತ್ರಕ್ಕೆ 'ಪೆದ್ದಿ' ಎನ್ನುವ ಟೈಟಲ್ ಪರಿಶೀಲನೆ ನಡೆಯುತ್ತಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ಕೂಡ ನಟಿಸಲಿದ್ದಾರೆ.


Click it and Unblock the Notifications











