ರಾಕಿಂಗ್ ಸ್ಟಾರ್ ಯಶ್ ಭಾಷಣವನ್ನು ಕೂಡ ಅಲ್ಲು ಅರ್ಜುನ್ ಕಾಪಿ ಮಾಡಿದ್ರಾ? ವೀಡಿಯೋ ವೈರಲ್
'ಪುಷ್ಪ'-2 ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮುಂದಿನ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್ ಕೂಡ ಜೋರಾಗಿದೆ. ಚೆನ್ನೈನಲ್ಲಿ ಗ್ರ್ಯಾಂಡ್ ಈವೆಂಟ್ ಮಾಡಿ ಚಿತ್ರತಂಡ ಸಕ್ಸಸ್ ಕಂಡಿದೆ.
ಚೆನ್ನೈ ಈವೆಂಟ್ನಲ್ಲೇ 'ಕಿಸ್ಸಿಕ್' ಸ್ಪೆಷಲ್ ಸಾಂಗ್ ಸಹ ರಿಲೀಸ್ ಆಗಿದೆ. ಪುಷ್ಪರಾಜ್ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಈ ಡ್ಯಾನ್ಸಿಗ್ ನಂಬರ್ಗೆ ಹೆಜ್ಜೆ ಹಾಕಿದ್ದಾರೆ. ಸಾಂಗ್ ಅಭಿಮಾನಿಗಳ ಗಮನ ಸೆಳೆದಿದೆ. ಆದರೂ 'ಊ ಅಂಟಾವ' ರೇಂಜ್ಗೆ ಇಲ್ಲ ಎನ್ನುವ ಚರ್ಚೆ ಕೂಡ ನಡೀತಿದೆ. ಇನ್ನು ಮೊದಲಿನಿಂದಲೂ ಕನ್ನಡದ 'KGF' ಸರಣಿ ಸಿನಿಮಾಗಳ ಜೊತೆಗೆ 'ಪುಷ್ಪ' ಸರಣಿ ಚಿತ್ರಗಳನ್ನು ಕೆಲವರು ಹೋಲಿಸುತ್ತಿದ್ದಾರೆ. ಕಥೆ, ಪೋಸ್ಟರ್ ಎಲ್ಲದರಲ್ಲೂ ಸಾಮ್ಯತೆ ಇದೆ ಎಂದು ಕೆಲವರು ಹೇಳುತ್ತಾ ಬರ್ತಿದ್ದಾರೆ.

'ಪುಷ್ಪ'-2 ಚಿತ್ರದ ಕೆಲ ಪೋಸ್ಟರ್ಗಳು 'KGF'-2 ಪೋಸ್ಟರ್ಗಳನ್ನು ನೆನಪಿಸುವಂತೆ ಇರುವುದು ಸುಳ್ಳಲ್ಲ. ಸ್ವತಃ ತೆಲುಗು ಸಿನಿರಸಿಕರು ಕೂಡ ಈ ಬಗ್ಗೆ ಟ್ರೋಲ್ ಮಾಡಿದ್ದರು. ಆದರೆ ಚಿತ್ರತಂಡ ಬೇಕೆಂದೇ ಈ ರೀತಿ ಕಾಪಿ ಪೇಸ್ಟ್ ಮಾಡುತ್ತಿದ್ಯಾ? ಎಂಬ ಅನುಮಾನವೂ ಕೆಲವರನ್ನು ಕಾಡಿದ್ದು ಸುಳ್ಳಲ್ಲ. ಪಾಸಿಟಿವ್ ಆದರೂ ನೆಗೆಟಿವ್ ಆದರೂ ಪ್ರಚಾರ ಸಿಗುತ್ತದೆ ಎಂದು ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಸದ್ಯ ಚೆನ್ನೈ ಈವೆಂಟ್ ವೇದಿಕೆಯಲ್ಲಿ ಅಲ್ಲು ಅರ್ಜುನ್ ಮಾತನಾಡಿದ ಮಾತುಗಳು ವೈರಲ್ ಆಗುತ್ತಿದೆ. ಅದರಲ್ಲೂ ತಮಿಳಿನಲ್ಲೇ ಮಾತನಾಡಿ ಅಲ್ಲಿನ ಅಭಿಮಾನಿಗಳ ಮನಗೆದ್ದಿದ್ದಾರೆ. ಅಲ್ಲು ಅರ್ಜುನ್ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲೇ. ಹಾಗಾಗಿ ಚೆನ್ನಾಗಿ ತಮಿಳು ಮಾತನಾಡುತ್ತಾರೆ. ಈ ಬಗ್ಗೆ ವೇದಿಕೆಯಲ್ಲಿ ಕೂಡ ಹೇಳಿದ್ದಾರೆ. ನಾವು ಎಲ್ಲೇ ಹೋದರೂ ಅಲ್ಲಿನ ಮಣ್ಣಿಗೆ ಬೆಲೆ ಕೊಡಬೇಕು. ಹಾಗಾಗಿ ನಾನು ತಮಿಳು ಮಾತನಾಡ್ತೀನಿ ಎಂದಿದ್ದಾರೆ.
'KGF' ಚಾಪ್ಟರ್-1 ಪ್ರಚಾರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹೈದರಾಬಾದ್ಗೆ ತೆರಳಿದ್ದರು. ಆ ಸಮಯದಲ್ಲಿ ವೇದಿಕೆ ಮಾತನಾಡುತ್ತಾ ಮೊದಲಿಗೆ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಯಶ್ ಮಾತು ಆರಂಭಿಸಿದ್ದರು. ನಾನು ತೆಲುಗಿನಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ. ಯಾಕಂದ್ರೆ, ನಾನು ಸದಾ ಒಂದು ಮಾತನ್ನು ನಂಬುತ್ತೇನೆ. ನಾವು ಎಲ್ಲೇ ಹೋದರೂ ಅಲ್ಲಿನ ನೆಲದ ಸಂಸ್ಕೃತಿಗೆ, ಅಲ್ಲಿನ ಭಾಷೆಗೆ ಗೌರವ ಕೊಡಬೇಕು. ಆಗ ಮಾತ್ರ ನೀವು ನಿಜವಾದ ವ್ಯಕ್ತಿ ಅನ್ನಿಸ್ತೀರಾ. ನಮ್ಮ ನೆಲದಲ್ಲಿ ನಾನು ಇದ್ದರೆ ಅದನ್ನೇ ಬಯಸುತ್ತೇನೆ. ಇನ್ನೂ ಜನ ಅದನ್ನೇ ಬಯಸುತ್ತಾರೆ. ಹಾಗಾಗಿ ನನಗೆ ಗೊತ್ತಿರುವ ತೆಲುಗಿನಲ್ಲಿ ಮಾತನಾಡುತ್ತೇನೆ. ತಪ್ಪಿದ್ದರೆ ಕ್ಷಮಿಸಿ ಎಂದಿದ್ದರು.
ಇದೀಗ ಅಲ್ಲು ಅರ್ಜುನ್ ಮಾತನಾಡಿ "ನಾನು ಇಲ್ಲಿ ತಮಿಳಿನಲ್ಲೇ ಮಾತನಾಡ್ತೀನಿ. ಯಾಕಂದರೆ ಅದು ಈ ಮಣ್ಣಿಗೆ ನಾವು ಕೊಡುವ ಗೌರವ ಅದು. ನಾವು ಯಾವ ಜಾಗದಲ್ಲಿ ಇದ್ದೀವೋ ಸಾಧ್ಯವಾದರೆ ಅದೇ ಭಾಷೆಯಲ್ಲಿ ಮಾತನಾಡಬೇಕು. ನಾನು ದುಬೈಗೆ ಹೋದರೆ ಅಲ್ಲಿನ ಭಾಷೆ ಮಾತನಾಡ್ತೀನಿ, ಕೇರಳಗೆ ಹೋದರೆ ಮಲಯಾಳಂನಲ್ಲಿ ಮಾತನಾಡ್ತೀನಿ. ನಾವು ಯಾವುದೇ ನೆಲದಲ್ಲಿ ಇದ್ದರೂ ಆ ನೆಲಕ್ಕೆ ಗೌರವ ಕೊಡಬೇಕು" ಎಂದಿದ್ದಾರೆ.
ಸದ್ಯ ಎರಡೂ ವಿಡಿಯೋಗಳನ್ನು ಸೇರಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಬರೀ ಯಶ್ ನಟಿಸಿದ 'KGF' ಚಿತ್ರವನ್ನು ಮಾತ್ರ 'ಪುಷ್ಪ' ಚಿತ್ರದಲ್ಲಿ ಕಾಪಿ ಮಾಡಲಿಲ್ಲ. ಕೊನೆಗೆ ಯಶ್ ಭಾಷಣವನ್ನು ಕೂಡ ಅಲ್ಲು ಅರ್ಜುನ್ ಕಾಪಿ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗ್ತಿದೆ. ಮತ್ತೊಂದು ಕಡೆ ಅಭಿಮಾನಿಗಳು ಈ ಮಾತನ್ನು 9 ವರ್ಷಗಳ ಹಿಂದೆ ಸೈಮಾ ವೇದಿಕೆಯಲ್ಲಿ ಅಲ್ಲು ಅರ್ಜುನ್ ಹೇಳಿದ್ದರು. ಸುಮ್ಮನೆ ಏನೇನೋ ಮಾತನಾಡಬೇಡಿ ಎಂದು ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.
ಅಲ್ಲು ಅರ್ಜುನ್ ಹೇಳಿಕೆಗೆ ಕನ್ನಡಿಗರು ಕೂಡ ಕಾಮೆಂಟ್ ಮಾಡಿದ್ದಾರೆ. ಮುಂದೆ ಬೆಂಗಳೂರಿನಲ್ಲಿ ಈವೆಂಟ್ ಮಾಡ್ತೀರಾ? ಆಗ ನೀನು ಯಾವ ಭಾಷೆ ಮಾತನಾಡುತ್ತೀಯಾ? ನಾವು ನೋಡ್ತೀವಿ ಎಂದಿದ್ದಾರೆ.


Click it and Unblock the Notifications











