ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಮುಖಕ್ಕೆ 'ಪ್ಲಾಸ್ಟಿಕ್' ಸರ್ಜರಿ...?
ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ ಉತ್ತರ ಭಾರತದಲ್ಲಿ ಕೂಡ ಅಪಾರವಾದ ಅಭಿಮಾನಿ ಬಳಗವನ್ನೊಂದಿರುವವರು ಅಲ್ಲು ಅರ್ಜುನ್. ಇದಕ್ಕೆ ಬಿಹಾರದಲ್ಲಿ ಪುಷ್ಪ -02 ಜಾತ್ರೆಗೆ ನೋಡಲು ಹರಿದು ಬಂದ ಮಹಾಸಾಗರ ಸಾಕ್ಷಿ.
ಇನ್ನೂ ಪುಷ್ಪ 2 ಕ್ರೇಜ್ ನಿಮಗೆ ಗೊತ್ತು. ಕೇವಲ ಆಂಧ್ರ, ಬಿಹಾರ್ ಮಾತ್ರ ಅಲ್ಲ ಅಖಂಡ ಭಾರತದೆಲ್ಲೆಡೆ ಪುಷ್ಪ 02 ಜ್ವರ ಆವರಿಸಿಕೊಂಡಿದೆ. ನಿಜಾ, ಕನ್ನಡಿಗರು ಅಲ್ಲು ಅರ್ಜುನ್ ಅವರ ನಡೆ ಮತ್ತು ನುಡಿಯಿಂದ ಕೆಂಡ ಕಾರುತ್ತಿದ್ದಾರೆ. ಆದರೆ, ಎಲ್ಲರಿಗೆ ಗೊತ್ತು, ಕನ್ನಡಿಗರು ವಿಶಾಲ ಹೃದಯದವರು. ಎಷ್ಟೇ ಕೋಪ ಇದ್ದರೂ ಕೂಡ ಬಯ್ಕೊಂಡೇ ನೋಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಬೆಂಗಳೂರಿನಲ್ಲಿ ಅನೇಕ ಚಿತ್ರಮಂದಿರದ ಮುಂದೆ ಆಗಲೇ ಹೌಸ್ಫುಲ್ ಬೋರ್ಡ್ ಬಿದ್ದಿದೆ. ಇರಲಿ, ಸದ್ಯದ ವಿಚಾರ ಅಂದರೆ.. ಪುಷ್ಪ 2 ಮೂಲಕ ಬಿಡುಗಡೆಗೆ ಮುನ್ನವೇ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಅಲ್ಲು ಅರ್ಜುನ್ ತಮ್ಮ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ. ಪುಷ್ಪ 2 ಚಿತ್ರದ ಬಿಡುಗಡೆ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಚರ್ಚೆ ಶುರುವಾಗಿದೆ.

ಹೌದು, ಅಸಲಿಗೆ ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಐಶ್ವರ್ಯ ರೈ ಅವರಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ನಯನತಾರ ಅವರಿಂದ ನಾಗಚೈತನ್ಯ ಅವರ ಮಡದಿ ಶೋಭಿತಾ ಅವರ ಮೇಲೆ ಈ ತರಹದ ಆರೋಪ ಇದೆ. ಇವರೆಲ್ಲ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ಧಾರೆ ಎನ್ನುವ ಅನುಮಾನ ಅನೇಕರಲ್ಲಿದೆ. ಈ ಸಾಲಿಗೆ ಈಗ ಅಲ್ಲು ಅರ್ಜುನ್ ಅವರನ್ನು ಸೇರಿಸುತ್ತಿದ್ದಾರೆ. ಹಿಂದೊಮ್ಮೆ ಖ್ಯಾತ ಕಾಸ್ಮೆಟಿಕ್ ಸರ್ಜನ್ ಡಾ.ರಾಜಶೇಖರ ಗೊಲ್ಲು ಹೇಳಿದ್ದ ಹೇಳಿಕೆಯನ್ನು ಆಧರಿಸಿ ಅಲ್ಲು ಅರ್ಜುನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಹೌದು, ಖ್ಯಾತ ಕಾಸ್ಮೆಟಿಕ್ ಸರ್ಜನ್ ಡಾ.ರಾಜಶೇಖರ ಗೊಲ್ಲು ಹಿಂದೊಮ್ಮೆ ಸಂದರ್ಶನದಲ್ಲಿ ಪ್ಲಾಸ್ಟಿಕ್ ಸರ್ಜರಿ ಮೇಲೆ ಸೆಲೆಬ್ರಿಟಿಗಳಿಗೆ ಇರುವ ಮೋಹದ ಬಗ್ಗೆ ಮಾತನಾಡಿದ್ದರು. ದುಲ್ಕರ್ ಸಲ್ಮಾನ್ ಅವರ ಅಂದು ಮತ್ತು ಇಂದಿನ ಫೋಟೊಗಳ ನಡುವೆ ಇರುವ ವ್ಯತ್ಯಾಸ ಹೇಳಿದ್ದರು. ದುಲ್ಕರ್ ಸಲ್ಮಾನ್ ಮೂಗಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದರು. ಇನ್ನೂ ದೀಪಿಕಾ ಪಡುಕೋಣೆಯ ಫೋಟೋಗಳನ್ನು ಕೂಡ ನೋಡಿ ವ್ಯತ್ಯಾಸ ಹೇಳಿದ್ದ ಡಾ.ರಾಜಶೇಖರ ಗೊಲ್ಲು ದೀಪಿಕಾ ಕೂಡ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.
ಆ ನಂತರ ಅಲ್ಲು ಅರ್ಜುನ್ ಅವರ ಗಂಗೋತ್ರಿ ಚಿತ್ರದ ಸಮಯದಲ್ಲಿನ ಫೋಟೊ ಮತ್ತು ಈಗಿನ ಫೋಟೊಗಳನ್ನು ಹೋಲಿಸಿ ಅಲ್ಲು ಅರ್ಜುನ್ ಕೂಡ ಮೂಗಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದಾರೆ. ಈ ವಿಚಾರ ಎಲ್ಲರಿಗೆ ಗೊತ್ತು. ಆದರೆ ಅವರ ಅಂದಿನ ತುಟಿಗೂ ಇಂದಿನ ತುಟಿಗೂ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ ಅಲ್ಲು ಅರ್ಜುನ್ ಮೂಗಿನ ಜೊತೆ ತುಟಿಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿರಬಹುದು ಎಂದು ತಮ್ಮ ಅನುಭವದ ಆಧಾರದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಡಾ.ರಾಜಶೇಖರ್ ಗೊಲ್ಲು ಅವರ ಈ ವಿಡಿಯೋವನ್ನು ಪುಷ್ಪ 2 ಚಿತ್ರದ ಬಿಡುಗಡೆಯ ಸಮಯದಲ್ಲಿ ಅನೇಕರು ಹೆಕ್ಕಿ ತೆಗೆದಿದ್ದಾರೆ. ಅಲ್ಲು ಅರ್ಜುನ್ ಅವರನ್ನು ನಿಂದಿಸುತ್ತಿದ್ದಾರೆ. ಇದಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಉತ್ತರ ನೀಡಲು ಶುರು ಮಾಡಿದ್ದಾರೆ. ಈ ಚರ್ಚೆಯನ್ನು ಗಮನಿಸಿದ ಆಂಧ್ರ ಚಿತ್ರರಂಗದ ಅನೇಕರು ಇದು ಅಲ್ಲು ಅರ್ಜುನ್ ಅವರ ವಿರೋಧಿ ಬಣದ ಕೆಲಸ ಎಂದು ಸದ್ಯ ಮಾತನಾಡುತ್ತಿದ್ದಾರೆ. ಪುಷ್ಪ 2 ಬಿಡುಗಡೆ ಸಮಯದಲ್ಲಿ ಬೇಕು ಬೇಕಂತಲೇ ಈ ತರಹದ ಚರ್ಚೆಗಳಿಂದ ಅಲ್ಲು ಅರ್ಜುನ್ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸುಖಾ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎನ್ನುತ್ತಿದ್ದಾರೆ.


Click it and Unblock the Notifications











