ಪರಿಚಯ ಮಾಡಿಕೊಳ್ತಾರೆ, ಬೇಕು ಬೇಕೆಂದೇ ಹತ್ತು ಸಲ ಮೈ ಮುಟ್ತಾರೆ ; ಕಹಿ ಅನುಭವ ಹಂಚಿಕೊಂಡ ಬಿಗ್ ಬಾಸ್ ಸ್ಫರ್ಧಿ !
ಬಣ್ಣದ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತದೆ. ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ.
ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾಮಕಾಂಡದ ಕುರಿತು ಕಳೆದ ವರ್ಷ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಪಾತ್ರಕ್ಕಾಗಿ ಪಲ್ಲಂಗದ ಬಿರುಗಾಳಿ ಎದ್ದಿದೆ.

ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ತೇಜಸ್ವಿ ಮಡಿವಾಡ ಮತ್ತೊಂದು ಉದಾಹರಣೆ.
ಹೌದು, ತೇಜಸ್ವಿ ಮಡಿವಾಡ, ಪಕ್ಕದ ಆಂಧ್ರದ ಚೆಲುವೆ. ಬಿಗ್ ಬಾಸ್ ನ ಎರಡನೇ ಸೀಸನ್ನಲ್ಲಿ ಕಾಣಿಸಿಕೊಂಡಿದ್ದ ತೇಜಸ್ವಿನಿ ಆ ನಂತರ ರಾಮ್ ಗೋಪಾಲ್ ವರ್ಮಾ ಅವರ ಐಸ್ಕ್ರೀಮ್ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಪಡ್ಡೆ ಹುಡುಗರ ಹೃದಯವನ್ನು ಗೆದ್ದಿದ್ದರು.
ಇಲ್ಲಿಂದಾಚೆ ಲವರ್ಸ್, ಸುಬ್ರಮಣ್ಯನ್ ಫಾರ್ ಸೇಲ್, ಅನುಕ್ಷಣಂ, ವಿಶ್ ಯು ಹ್ಯಾಪಿ ಬ್ರೇಕಪ್ ಹೀಗೆ ಒಂದಾದ ಮೇಲೊಂದು ಚಿತ್ರಗಳಲ್ಲಿ ಕಾಣಿಸಿಕೊಂಡ ತೇಜಸ್ವಿ ಮಡಿವಾಡ ಮಹೇಶ್ ಬಾಬು ಅಭಿನಯದ ಶ್ರೀಮಂತಡು ಚಿತ್ರದಲ್ಲಿ ಕೂಡ ಪಾತ್ರವನ್ನು ನಿರ್ವಹಿಸಿದ್ದರು.
ಇಂಥಾ ತೇಜಸ್ವಿ ಕೆಲ ದಿನಗಳ ಹಿಂದೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಸ್ಫರ್ಧಿ ಶಿವ ಅವರಿಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ತೆಲುಗು ಚಿತ್ರರಂಗ ನಾಯಕಿಯರನ್ನು ನೋಡುವ ದೃಷ್ಟಿಕೋನದ ಕುರಿತು ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ತೇಜಸ್ವಿ ತೆಲುಗು ಚಿತ್ರರಂಗದಲ್ಲಿ ಬದ್ದತೆಯ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಕೇವಲ ತೆಲುಗು ಚಿತ್ರರಂಗ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲಿ ಕೂಡ ಇದೇ ಸಮಸ್ಯೆ ಇದೆ ಎಂದಿದ್ದಾರೆ. ನಮ್ಮಲ್ಲಿ ಮೊದಲು ತಮ್ಮನ್ನು ಪರಿಚಯ ಮಾಡಿಕೊಂಡು ಕೈ ಕುಲುಕುತ್ತಾರೆ, ಆ ನಂತರ ಬೇಕು ಬೇಕಂತಲೇ ಹತ್ತು ಬಾರಿ ನಮ್ಮನ್ನು ಮುಟ್ಟುತ್ತಾರೆ ಎಂದಿರುವ ತೇಜಸ್ವಿ ನನ್ನ ವೃತ್ತಿ ಬದುಕಿನ ಆರಂಭದಲ್ಲಿ ನನಗೆ ಇಂತಹ ಹಲವು ಅನುಭವಗಳಾಗಿವೆ ಎಂದು ಹೇಳಿದ್ದಾರೆ.
ಇನ್ನು ಚಿತ್ರದ ಕುರಿತು ಮಾತನಾಡಲು ಹೋದರೆ ನಿರ್ಮಾಪಕರು, ನಿರ್ದೇಶಕರು, ಸಂಜೆಯ ನಂತರವೇ ಕರೆಯುತ್ತಾರೆ ಎಂದಿರುವ ತೇಜಸ್ವಿ ಅಲ್ಲಿ ಹೋದರೆ ಆ ನಂತರ ಸಿನಿಮಾದ ಕುರಿತು ಮಾತನಾಡದೇ ನಮ್ಮ ಜೊತೆ ನೀವು ಇವತ್ತು ರಾತ್ರಿ ಊಟ ಮಾಡಬೇಕೆಂದು ಹೇಳುತ್ತಾರೆ ಎಂದು ಹೇಳಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕರ ಈ ಮಾತುಗಳು ನನಗೆ ಆರಂಭದಲ್ಲಿ ಅರ್ಥವಾಗುತ್ತಿರಲಿಲ್ಲ ಆದರೆ ಆ ನಂತರ ನನಗೆ ಅವರ ಮಾತು ಅರ್ಥವಾಗಲು ಶುರುವಾಯ್ತು ಎಂದು ಹೇಳಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಟಾಲಿವುಡ್ನ ಹಿರಿಯ ಸ್ಟಾರ್ಗಳು ನನ್ನಂತಹ ಯುವ ನಟಿಯರಿಗೆ ಸಲಹೆಯನ್ನು ನೀಡುತ್ತಾರೆ ಎಂದಿರುವ ತೇಜಸ್ವಿ ನೀವು ಜಾಗರೂಕರಾಗಿದ್ದರೆ, ಪ್ರಾಮಾಣಿಕರಾಗಿದ್ದರೆ, ನಿಮ್ಮ ಕೆಲಸದ ಕಡೆ ನೀವು ಗಮನ ಹರಿಸಿದರೆ ಯಾರಿಂದನೂ ನಿಮಗೆ ಯಾವ ಹಾನಿಯಾಗುವುದಿಲ್ಲ, ಯಾರು ಏನೂ ಮಾಡಲು ಸಾಧ್ಯ ಇಲ್ಲ ಎಂದು ಹಿರಿಯ ನಟರು ನನ್ನಂತಹ ಯುವ ನಟಿಯರಿಗೆ ಹೇಳುತ್ತಾರೆ ಎಂದು ಹೇಳಿದ್ದಾರೆ.


Click it and Unblock the Notifications











