ಸೈಮಾ ಬಗ್ಗೆ ದುನಿಯಾ ವಿಜಯ್ ಆರೋಪಕ್ಕೆ ಆಯೋಜಕ ವಿಷ್ಣುವರ್ಧನ್ ಇಂದೂರಿ ಪ್ರತಿಕ್ರಿಯೆ
ಇತ್ತೀಚೆಗೆ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಕಳೆದ ವರ್ಷ ಬಿಡುಗಡೆಯಾಗಿದ್ದ ದಕ್ಷಿಣ ಭಾರತದ 4 ಭಾಷೆಗಳ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿ ಕನ್ನಡ ಸಿನಿತಾರೆಯರು ಭಾಗಿ ಆಗಿದ್ದರು.
ಸೈಮಾ ವೇದಿಕೆಯಲ್ಲಿ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ನಟ, ನಿರ್ದೇಶಕ ದುನಿಯಾ ವಿಜಯ್ ಆರೋಪಿಸಿದ್ದರು. ಇನ್ನು ಮುಂದೆ ನಾನು ಸೈಮಾಗೆ ಪ್ರಶಸ್ತಿ ಸ್ವೀಕರಿಸಲ್ಲ ಎಂದು ವೇದಿಕೆಯಲ್ಲೇ ಹೇಳಿದ್ದರು. ಬೇಕಾಬಿಟ್ಟಿ ಕರೆದು ಕನ್ನಡ ಸಾಧಕರಿಗೆ ಪ್ರಶಸ್ತಿ ನೀಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇದೀಗ ಸೈಮಾ ಅವಾರ್ಡ್ ಸ್ಥಾಪಕ ವಿಷ್ಣುವರ್ಧನ್ ಇಂದೂರಿ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದಾರೆ.

ಪ್ರತಿ ಬಾರಿ ಎರಡು ದಿನ ಸೈಮಾ ಉತ್ಸವ ನಡೆಯುತ್ತದೆ. ಮೊದಲ ದಿನ ತೆಲುಗು ಹಾಗೂ ಕನ್ನಡ ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ನೀಡುತ್ತಾರೆ. ಆದರೆ ತೆಲುಗು ತಾರೆಯರಿಗೆ ಮೊದಲು ಪ್ರಶಸ್ತಿ ಕೊಟ್ಟಿದ್ದರು. ನಡುವೆ ಡ್ಯಾನ್ಸ್ ಪರ್ಫಾರ್ಮನ್ಸ್ಗಳಿದ್ದವು. ಅದೆಲ್ಲಾ ಮುಗಿಯುವ ವೇಳೆಗೆ ಸಾಕಷ್ಟು ಸಮಯ ಆಗಿತ್ತು. ಹಾಗಾಗಿ ಒಬ್ಬೊಬ್ಬರಾಗಿ ಆಡಿಟೋರಿಯಂನಿಂದ ಎದ್ದು ಹೊರಟುಬಿಟ್ಟರು. ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ಕೊಡುವ ವೇಳೆಗೆ ಆಡಿಟೋರಿಯಂ ಬಹುತೇಕ ಖಾಲಿಯಾಗಿತ್ತು. ಇದೇ ದುನಿಯಾ ವಿಜಯ್ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ರೀತಿ ಕಾಟಾಚಾರಕ್ಕೆ ಪ್ರಶಸ್ತಿ ಕೊಡುವುದು ಬೇಡ ಎಂದು ವೇದಿಕೆಯಲ್ಲೇ ಆಯೋಜಕರ ಬಗ್ಗೆ ಆಕ್ರೋಶ ಹೊರ ಹಾಕಿದ್ದರು.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈಮಾ ಅವಾರ್ಡ್ ಸ್ಥಾಪಕ ವಿಷ್ಣು ವರ್ಧನ್ ಇಂದೂರಿ "ಸೈಮಾದಲ್ಲಿ ಕನ್ನಡ ಇಂಡಸ್ಟ್ರಿಯನ್ನು ನಡೆಸಿಕೊಳ್ಳುವ ರೀತಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಕೆಲವು ಪೋಸ್ಟ್ಗಳನ್ನು ನಾನು ನೋಡಿದ್ದೇನೆ. ಸೈಮಾದಲ್ಲಿ, ನಾವು ಯಾವಾಗಲೂ ದಕ್ಷಿಣ ಭಾರತದ ನಾಲ್ಕು ಇಂಡಸ್ಟ್ರಿಗಳ ಬಗ್ಗೆ ಅಪಾರ ಗೌರವ, ಪ್ರೀತಿಯನ್ನು ಹೊಂದಿದ್ದೇವೆ. ಕಳೆದ 13 ಆವೃತ್ತಿಗಳಲ್ಲಿ ಎಲ್ಲರನ್ನು ಸಮಾನವಾಗಿ ನಡೆಸಿಕೊಂಡಿದ್ದೇವೆ" ಎಂದಿದ್ದಾರೆ.

ಸೈಮಾದಲ್ಲಿ, ಮೊದಲ ದಿನ ತೆಲುಗು ಮತ್ತು ಕನ್ನಡಕ್ಕೆ ಮತ್ತು ಎರಡನೇ ದಿನ ತಮಿಳು ಮತ್ತು ಮಲಯಾಳಂ ಇಂಡಸ್ಟ್ರಿಗೆ ಪ್ರಶಸ್ತಿ ನೀಡಲಾಗುತ್ತದೆ. ಛಾಯಾಗ್ರಹಣದಿಂದ ಹಿಡಿದು ಅತ್ಯುತ್ತಮ ನಟನೆವರೆಗೆ ಎಲ್ಲಾ ಭಾಷೆಗಳಲ್ಲಿ ಪ್ರತಿಯೊಂದು ಪ್ರಶಸ್ತಿ ವಿಭಾಗವನ್ನು ಅನುಕ್ರಮವಾಗಿ ವಿತರಿಸಲಾಗುತ್ತದೆ. ಸಾಕಷ್ಟು ಸವಾಲುಗಳ ಹೊರತಾಗಿಯೂ, ವರ್ಷದಿಂದ ವರ್ಷಕ್ಕೆ 4 ದಕ್ಷಿಣ ಭಾರತದ ಭಾಷೆಗಳನ್ನು ಸೈಮಾ ಗೌರವಿಸಿದೆ ಎಂದು ತಿಳಿಸಿಸಿದ್ದಾರೆ.
ಸೈಮಾ ಕನ್ನಡ ಇಂಡಸ್ಟ್ರಿಯನ್ನು ಹಲವು ವಿಧಗಳಲ್ಲಿ ಬೆಂಬಲಿಸಿದೆ. ಮೊದಲ ಜೀವಮಾನ ಸಾಧನೆ ಪ್ರಶಸ್ತಿ ಅಂಬರೀಷ್ ಅವರಿಗೆ ಕೊಟ್ಟಿದ್ದೆವು, ಪುನೀತ್ ನಮಗೆ ಬೆಂಬಲವಾಗಿದ್ದು. ಅವರ ನಿಧನದ ಬಳಿಕೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೆವು. ಯಶ್ ಕೂಡ ಸೈಮಾ ಭಾಗವಾಗಿದ್ದಾರೆ. 'ಕೆಜಿಎಫ್' ಚಿತ್ರವನ್ನು ಪ್ರಚಾರ ಮಾಡಿದ್ವಿ, ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಾರದ ದರ್ಶನ್ ಕೂಡ ಸೈಮಾಗೆ ಬಂದಿದ್ರು. ಶಿವಣ್ಣನ 50 ವರ್ಷಗಳ ಸಿನಿಜರ್ನಿ ಆಚರಿಸಿದ್ದೆವು. ಸುದೀಪ್ ಈ ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಉಪೇಂದ್ರ ಭಾಗಿ ಆಗಿ ಬೆಂಬಲ ಸೂಚಿಸಿದ್ದಾರೆ ಎಂದು ವಿವರಿಸಿದ್ದಾರೆ.
ಬಳಿಕ ದುನಿಯಾ ವಿಜಯ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ "ದುನಿಯಾ ವಿಜಯ್ ಬಗ್ಗೆಯೂ ಗೌರವ ಇದೆ. ನಾನು ಈಗಾಗಲೇ ಪ್ರಸಾರ ವಾಹಿನಿಗೆ ಅವರ ಭಾಷಣ ಮತ್ತು ನಿರೂಪಕರ ಸಂಭಾಷಣೆಯನ್ನು ಸಂಪೂರ್ಣವಾಗಿ, ಯಾವುದೇ ಕಟ್ ಇಲ್ಲದೇ ಪ್ರಸಾರ ಮಾಡಲು ವಿನಂತಿಸಿದ್ದೇನೆ. ಪ್ರತಿ ವರ್ಷ ಇಂತಹ ಪ್ರದರ್ಶನವನ್ನು ಆಯೋಜಿಸುವುದು ಒತ್ತಡ ಮತ್ತು ಸವಾಲಿನ ಸಂಗತಿಯಾಗಿದೆ, ಆದರೆ ನಾವು ಅದನ್ನು ಸಿನಿಮಾದ ಮೇಲಿನ ಪ್ರೀತಿ ಮತ್ತು ನಮ್ಮ ಉದ್ಯಮಗಳನ್ನು ಜಾಗತಿಕವಾಗಿ ಪ್ರದರ್ಶಿಸುವ ಹೆಮ್ಮೆಯಿಂದ ಮಾಡುತ್ತೇವೆ. ನಮ್ಮನ್ನು ಬೆಂಬಲಿಸಿದ ಕನ್ನಡ ಇಂಡಸ್ಟ್ರಿ ಹಾಗೂ ಅಭಿಮಾನಿಗಳಿಗೆ ಧನ್ಯವಾದ" ಎಂದು ವಿಷ್ಣು ವರ್ಧನ್
ಇಂದೂರಿ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.


Click it and Unblock the Notifications











