ಬಿಗ್ಬಾಸ್ ಆಫರ್ ತಿರಸ್ಕರಿಸಿದ ಗಾಯಕಿ ಮಂಗ್ಲಿ: ಕಾರಣ?
ಇತ್ತೀಚೆಗೆ ತನ್ನ ಹಾಡುಗಳಿಂದ ಗಾಯಕಿ ಮಂಗ್ಲಿ ತೆಲುಗು ರಾಜ್ಯಗಳಲ್ಲಿ ಮಾತ್ರವೇ ಅಲ್ಲದೆ ಕನ್ನಡ, ತಮಿಳಿನಲ್ಲಿಯೂ ಸಖತ್ ಖ್ಯಾತಿ ಪಡೆದಿದ್ದಾರೆ. ಕನ್ನಡದ 'ರಾಬರ್ಟ್' ಸಿನಿಮಾದ ತೆಲುಗು ಅವತರಣಿಕೆಯಲ್ಲಿ ಮಂಗ್ಲಿ ಹಾಡಿದ 'ಕಣ್ಣೇ ಅಧಿರಿಂದಿ' ಹಾಡಂತೂ ದೊಡ್ಡ ಹಿಟ್ ಆಗಿಬಿಟ್ಟಿದೆ.
2018ರಲ್ಲಿ ಬಿಡುಗಡೆ ಆದ 'ಶೈಲಜಾ ರೆಡ್ಡಿ ಅಲ್ಲುಡು' ಸಿನಿಮಾದ 'ಶೈಲಜ ರೆಡ್ಡಿ ಅಲ್ಲುಡು ಚೂಡೆ' ಹಾಡಿನಿಂದ ಸಿನಿಮಾ ಹಿನ್ನೆಲೆ ಗಾಯಕಿಯಾದ ಮಂಗ್ಲಿಗೆ ಮೊದಲ ಹಾಡೆ ಬಹಳ ಖ್ಯಾತಿ ತಂದುಕೊಟ್ಟಿತು. ಆ ನಂತರ 'ಅಲಾ ವೈಕುಂಟಪುರಂಲೊ' ಸಿನಿಮಾದ 'ರಾಮುಲೊ ರಾಮುಲಾ' ಹಾಡು ಸಹ ಸಖತ್ ಖ್ಯಾತಿ ತಂದುಕೊಟ್ಟಿತು. ಆ ನಂತರ 'ರಾಬರ್ಟ್' ಸಿನಿಮಾದ 'ಕಣ್ಣೇ ಅಧಿರಿಂದಿ', 'ಲವ್ ಸ್ಟೂರಿ' ಸಿನಿಮಾದ 'ಸಾರಂಗ ಧರಿಯಾ' ಹಾಡಂತೂ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಮಂಗ್ಲಿಗೆ ಜನಪ್ರಿಯ ಹಿನ್ನೆಲೆ ಗಾಯಕಿ ಪಟ್ಟ ತಂದುಕೊಟ್ಟಿತು.
'ರಾಬರ್ಟ್' ನಂತರ ಕನ್ನಡದಲ್ಲೇ ಎರಡು ಸಿನಿಮಾಗಳಿಗೆ ಮಂಗ್ಲಿ ಹಾಡುಗಳನ್ನು ಹಾಡುತ್ತಿದ್ದಾರೆ. ತೆಲುಗು, ತಮಿಳಿನಲ್ಲೂ ಸಾಕಷ್ಟು ಅವಕಾಶಗಳಿವೆ. ಸಿನಿಮಾದ ಹೊರತಾಗಿ ಇತರೆ ಆಲ್ಬಂ ಹಾಡುಗಳು, ದೇವರ ಹಾಡುಗಳನ್ನು ಹಾಡಿಯೂ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪುತ್ತಿದ್ದಾರೆ. ಇದೇ ಸಮಯದಲ್ಲಿ ತೆಲುಗು ಬಿಗ್ಬಾಸ್ ನವರು ಮಂಗ್ಲಿಯನ್ನು ತಮ್ಮ ಶೋಗೆ ಆಹ್ವಾನ ನೀಡಿದ್ದಾರೆ.
ತೆಲುಗು ಬಿಗ್ಬಾಸ್ 5 ಇದೀಗಷ್ಟೆ ಆರಂಭವಾಗಿದ್ದು ಮಂಗ್ಲಿಯನ್ನು ಸ್ಪರ್ಧಿಯನ್ನಾಗಿ ಚಾನೆಲ್ನವರು ಆಹ್ವಾನಿಸಿದ್ದಾರೆ. ಆದರೆ ಚಾನೆಲ್ ನೀಡಿದ ಆಹ್ವಾನವನ್ನು ಮಂಗ್ಲಿ ತಿರಸ್ಕರಿಸಿದ್ದಾರೆ. ದಿನಕ್ಕೆ ಲಕ್ಷಾಂತರ ಹಣ ಸಂಭಾವನೆಯಾಗಿ ಕೊಡುತ್ತೇನೆಂದರೂ ಸಹ ಗಾಯಕಿ ಮಂಗ್ಲಿ ಬಿಗ್ಬಾಸ್ನಲ್ಲಿ ಪಾಲ್ಗೊಂಡಿಲ್ಲ.

ಸಾಕಷ್ಟು ಅವಕಾಶಗಳು ಮಂಗ್ಲಿ ಕೈಯಲ್ಲಿವೆ
ಗಾಯಕಿಯಾಗಿ ಸಾಕಷ್ಟು ಅವಕಾಶಗಳು ಮಂಗ್ಲಿ ಬಳಿ ಈಗ ಇವೆ. ಪ್ರತಿದಿನವೂ ರೆಕಾಡ್ರಿಂಗ್ನಲ್ಲಿ ಮಂಗ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಿಗೆ ಹಾಡು ಹಾಡುವುದಾಗಿ ಒಪ್ಪಿಕೊಂಡಿದ್ದೂ ಆಗಿದೆ ಮಂಗ್ಲಿ. ಅಲ್ಲದೆ ಹಬ್ಬದ ಸಮಯ ಹತ್ತಿರ ಬಂದಿದೆ. ಈ ಸಮಯದಲ್ಲಿ ಸಾಕಷ್ಟು ವೇದಿಕೆ ಕಾರ್ಯಕ್ರ, ಲೈವ್ ಶೋ ಆಫರ್ಗಳು ಮಂಗ್ಲಿಗೆ ಬರುತ್ತಿರುತ್ತವೆ. ಇಂಥಹಾ ಸಮಯದಲ್ಲಿ ಬಿಗ್ಬಾಸ್ ಮನೆಯಲ್ಲಿ ಹೋಗಿ ಕುಳಿತುಕೊಳ್ಳುವುದು ಥರವಲ್ಲವೆಂದು ಮಂಗ್ಲಿ ಬಿಗ್ಬಾಸ್ ಆಫರ್ ಅನ್ನು ತಿರಸ್ಕರಿಸಿದ್ದಾರೆ.

ಆಂಕರ್ ವರ್ಷಿಣಿ ಸಹ ಭಾಗವಹಿಸುತ್ತಿಲ್ಲ
ಕೇವಲ ಮಂಗ್ಲಿ ಮಾತ್ರವೇ ಅಲ್ಲದೆ ತೆಲುಗಿನ ಜನಪ್ರಿಯ ಟಿವಿ ಆಂಕರ್ ವರ್ಷಿಣಿ ಸಹ ಬಿಗ್ಬಾಸ್ ಆಫರ್ ಅನ್ನು ತಿರಸ್ಕರಿಸಿದ್ದಾರೆ. ವರ್ಷಿಣಿಗೆ ಸಿನಿಮಾ ಅವಕಾಶ ಅರಸಿ ಬಂದಿದ್ದು, ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿರುವ ಕಾರಣ ಅವರು ಬಿಗ್ಬಾಸ್ ಅವಕಾಶವನ್ನು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಏನೇ ಆಗಲಿ ತೆಲುಗು ರಾಜ್ಯಗಳಲ್ಲಿ ಗಾಯಕಿ ಮಂಗ್ಲಿ ಹಾಗೂ ಆಂಕರ್ ವರ್ಷಿಣಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದರು ಈ ಇಬ್ಬರೂ ಬಿಗ್ಬಾಸ್ಗೆ ಬರದೇ ಇರುವುದು ಚಾನೆಲ್ಗೆ ತುಸು ನಷ್ಟವೆಂದೇ ಹೇಳಬಹುದು.

ಅತ್ಯಾಚಾರ ಆರೋಪಿ ಸ್ಪರ್ಧಿ!?
ತೆಲುಗು ಬಿಗ್ಬಾಸ್ 5ನಲ್ಲಿ ಅತ್ಯಾಚಾರ ಆರೋಪಿ ಫನ್ ಬಕೆಟ್ ಭಾರ್ಗವ್ ಸಹ ಸ್ಪರ್ಧಿಯಾಗಿರಲಿದ್ದಾನೆ ಎಂಬ ಗಾಳಿ ಸುದ್ದಿ ತುಸು ಜೋರಾಗಿ ಹರಿದಾಡಿತ್ತು. ಒಂದೊಮ್ಮೆ ಫನ್ ಬಕೆಟ್ ಭಾರ್ಗವ್ ಸ್ಪರ್ಧಿಯಾಗಿ ಕಾಣಿಸಿಕೊಂಡರೆ ಶೋ ಅನ್ನು ಬಾಯ್ಕಾಟ್ ಮಾಡುವುದಾಗಿ, ಚಾನೆಲ್ಗೆ, ಬಿಗ್ಬಾಸ್ ಸೆಟ್ಗೆ ಮುತ್ತಿಗೆ ಹಾಕುವುದಾಗಿ ವೀಕ್ಷಕರು ಹಾಗೂ ಕೆಲವು ಸಂಘಟನೆಗಳವರು ಎಚ್ಚರಿಕೆ ನೀಡಿದ್ದರು. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಚಾನೆಲ್, 'ಅತ್ಯಾಚಾರ ಆರೋಪಿ ಫನ್ ಬಕೆಟ್ ಭಾರ್ಗವ್ ಬಿಗ್ಬಾಸ್ 5ನ ಸ್ಪರ್ಧಿ ಅಲ್ಲ. ನಾವು ಆತನನ್ನು ಸಂಪರ್ಕಿಸಿಲ್ಲ' ಎಂದಿತು.

ಬಿಗ್ಬಾಸ್ 4 ಕೆಲ ತಿಂಗಳ ಹಿಂದಷ್ಟೆ ಮುಗಿದಿತ್ತು
ತೆಲುಗು ಬಿಗ್ಬಾಸ್ 5 ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಐದನೇ ಸೀಸನ್ ಅನ್ನು ಸಹ ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಬಿಗ್ಬಾಸ್ 4 ಮುಗಿದಿದ್ದು ಅಭಿಜಿತ್ ದುದ್ದಲ ವಿನ್ನರ್ ಆಗಿ ಹೊರಹೊಮ್ಮಿದ್ದರು. ಬಿಗ್ಬಾಸ್ 5 ನಲ್ಲಿ ಕಾಸ್ಕೊ ಸುನಿಲ್, ಪ್ರಿಯಾಂಕಾ ನಿಗ್, ಲೋಬೊ, ಆಂಕರ್ ವರ್ಷಿಣಿ, ಪ್ರಿಯಾ ರಾಮನ್, ಶ್ರೀ ಹನುಮಂತ, ಷಣ್ಮುಖ್ ಜಸ್ವಂತ್, ಆಂಕರ್ ರವಿ, ಆರ್ಜೆ ಕಾಜಲ್, ಜಸ್ವಂತ್ ಪಡಾಲ, ವಿಜಿ ಸನ್ನಿ, ನವ್ಯಾ ಸಾಮಿ ಇನ್ನೂ ಕೆಲವರು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಕ್ರಮದ ಪ್ರೋಮೊ ಬಿಡುಗಡೆ ಆಗಿದೆ.


Click it and Unblock the Notifications











