ಕಾಲು ಮೇಲೆತ್ತಿ ಕೀರ್ತನೆ ಹಾಡಿದ ಶ್ರಾವಣ ಭಾರ್ಗವಿ: ತಿರುಪತಿಗೆ ಬರಲು ಬಿಡಲ್ಲ ಅಂತ ವಾರ್ನಿಂಗ್!
ತಿರುಪತಿ ವೆಂಕಟೇಶ್ವರ ಸ್ವಾಮಿ ಮೇಲೆ ತಾಳ್ಳಪಾಕ ಅನ್ನಮಾಚಾರ್ಯರು ಬರೆದಿರುವ ಕೀರ್ತನೆಗೆ ತೆಲುಗು ಗಾಯಕಿ ಶ್ರಾವಣ ಭಾರ್ಗವಿ ಕೆಟ್ಟ ಹೆಸರು ತಂದಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಈ ವಿವಾದ ತಾರಕಕ್ಕೇರಿದ್ದು, ಗಾಯಕಿ ಸಾಕಷ್ಟು ಟೀಕೆಗಳನ್ನು, ಬೆದರಿಕೆಗಳನ್ನು ಎದುರಿಸುವಂತಾಗಿದೆ. ಸೂಪರ್ ಹಿಟ್ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸುತ್ತಿರುವ ಶ್ರಾವಣ ಭಾರ್ಗವಿ, ಕೆಲವು ದಿನಗಳಿಂದ ಯೂಟ್ಯೂಬ್ನಲ್ಲಿ ತಮ್ಮ ವೀಡಿಯೊಗಳ ಮೂಲಕವೂ ಮೋಡಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರಾವಣ ಭಾರ್ಗವಿ ತೆಲುಗಿನ ಖ್ಯಾತ ಕೀರ್ತನೆಕಾರ ಅನ್ನಮಯ್ಯ 'ಒಕಪರಿ ಕೊಕಾಪರಿ ವೈಯರಾಮೈ..' ಕೀರ್ತನೆಯನ್ನು ಹಾಡಿ ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಹಾಕಿದ್ದರು. ಈ ಆಲ್ಬಮ್ ವೀಡಿಯೊ ಸಾಂಗ್ನಲ್ಲಿ ಆಕೆ ತನ್ನ ಸೌಂದರ್ಯವನ್ನು ವರ್ಣಿಸುವಂತೆ ಕೀರ್ತನೆಯನ್ನು ಹಾಡಿದ್ದಾರೆ ಅನ್ನುವುದು ಕೆಲವರ ವಾದ. ಇದೇ ಕಾರಣಕ್ಕೆ ಸಾಕಷ್ಟು ಭಕ್ತರು ಹಾಗೂ ಅನ್ನಮಯ್ಯರ ವಂಶಸ್ಥರು ಈ ವಿಡಿಯೋ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಡಿಲೀಟ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಅನ್ನದ ಗಾಯಕಿ ಯಾವುದೇ ಕಾರಣಕ್ಕೂ ವಿಡಿಯೋ ತೆಗೆಯೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ಈ ಆಲ್ಬಮ್ ಸಾಂಗ್ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶ್ರಾವಣ ಭಾರ್ಗವಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನ್ನಮ್ಮಯ್ಯ ವಂಶಸ್ಥರು ಮುಂದಾಗಿದ್ದಾರೆ. ವಿಡಿಯೋ ತೆಗೆಯಲು ಒಪ್ಪದ ಗಾಯಕಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿರುಪತಿ ಈಸ್ಟ್ ಪೊಲೀಸ್ ಸ್ಟೇಷನ್ನಲ್ಲಿ ಅನ್ನಮಯ್ಯ ವಂಶಸ್ಥರಾದ ಹರಿನಾರಾಯಣ ಚಾರ್ಯ ದೂರು ನೀಡಿದ್ದಾರೆ. ನಾವು ಶ್ರಾವಣ ಭಾರ್ಗವಿಯನ್ನು ಸಂಪರ್ಕಿಸಿ, ಸಾಂಗ್ ಡಿಲೀಟ್ ಮಾಡುವಂತೆ ಹೇಳಿದಾಗ ಆಕೆ ಸರಿಯಾಗಿ ಸ್ಪಂದಿಸಲಿಲ್ಲ. ತಾನು ಮಾಡಿರುವುದರಲ್ಲಿ ತಪ್ಪೇನು ಇಲ್ಲ ಎಂದು ವಾದಿಸುತ್ತಿದ್ದಾರೆ ಅಂತ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇವಲ ಶ್ರಾವಣ ಭಾರ್ಗವಿ ಆಲ್ಬಮ್ ಸಾಂಗ್ ಮಾತ್ರವಲ್ಲ, ಸಿನಿಮಾಗಳಲ್ಲಿ ಅನ್ನಮಯ್ಯ ಕೀರ್ತನೆಗಳನ್ನು ಅಸಭ್ಯವಾಗಿ ಚಿತ್ರಿಸಿರುವುದಕ್ಕೆ ಆಕ್ಷೇಪ ಪಡಿಸುತ್ತಿದ್ದಾರೆ. ಇಂತಹ ಘಟನೆಗಳ ವಿರುದ್ಧ ಟಿಟಿಡಿ ಕ್ರಮ ಕೈಗೊಳ್ಳುವಂತೆ ಅನ್ನಮಯ್ಯ ವಂಶಸ್ಥರು ಮನವಿ ಮಾಡಿದ್ದಾರೆ.
ಭಕ್ತಿಯ ಭಾವಪರವಶತೆಯಲ್ಲಿ ತಲ್ಲೀನರಾಗುವಂತೆ ಅನ್ನಮಯ್ಯ ಆ ಕೀರ್ತನೆ ಬರೆದಿದ್ದಾರೆ. ಆದರೆ ಶ್ರಾವಣ ಭಾರ್ಗವಿ ಕೀರ್ತನೆಯನ್ನು ಅಸಭ್ಯವಾಗಿ ತಮ್ಮ ಸೌಂದರ್ಯವನ್ನು ಹೊಗಳಲು ಬಳಸಿಕೊಂಡಿದ್ದಾರೆ ಎಂದು ಸಾಕಷ್ಟು ಜನ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಶ್ರವಣ ಭಾರ್ಗವಿ ತಿರುಪತಿಗೆ ಕಾಲಿಡಲು ಬಿಡುವುದಿಇಲ್ಲ ಅಂತ ತಿರುಪತಿ ನಿವಾಸಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಆಕೆಯನ್ನು ದೇವರ ದರ್ಶನಕ್ಕೆ ಬಿಡೋದೇ ಇಲ್ಲ ಎಂದಿದ್ದಾರೆ.ಆಕೆ ಅನ್ನಮಯ್ಯ ವಂಶಸ್ಥರ ಕ್ಷಮೆಯಾಚಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳಿಂದ ಆಲ್ಬಮ್ ಸಾಂಗ್ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ವಿವಾದದ ಬಗ್ಗೆ ಟಿಡಿಪಿ ಪ್ರತಿಕ್ರಿಯಿಸಬೇಕು. ಇನ್ನು ಮುಂದೆ ಅನ್ನಮಯ್ಯ ಕೀರ್ತನೆಗಳಿಗೆ ಯಾರೂ ಅಪಪ್ರಚಾರ ಮಾಡದಂತೆ ಕಾನೂನು ತರಬೇಕೆಂದರು ಆಗ್ರಹಿಸಿದ್ದಾರೆ.

ಆಲ್ಬಮ್ ಸಾಂಗ್ ವಿವಾದ ಸೃಷ್ಟಿಸಿರೋದು ಏಕೆ?
ತೆಲುಗುತನಕ್ಕೆ ಒತ್ತು ನೀಡುವಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಶ್ರಾವಣ ಭಾರ್ವವಿ ಹಾಡಿನಲ್ಲಿ ದರ್ಶನ ಕೊಟ್ಟಿದ್ದಾರೆ. ಮೊದಲಿಗೆ ಗಾಯಕಿ ಅಂಗಾತ ಮಲಗಿ ಚಕ್ಕುಲಿ, ನಿಪ್ಪಟ್ಟು ತಿನ್ನುತ್ತಿರುವಂತೆ, ಪುಸ್ತಕ ಓದುವಂತೆ ಹಾಡು ಶುರುವಾಗುತ್ತದೆ. ಮತ್ತೊಂದು ಫ್ರೇಮ್ನಲ್ಲಿ ಗಾಯಕಿ ಕಾಲುಗಳನ್ನು ಮೇಲಕ್ಕೆತ್ತಿ ಆಡಿಸುವುದನ್ನು ತೋರಿಸಲಾಗಿದೆ. ಇದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಅನ್ನಮಯ್ಯ ಕೀರ್ತನೆಯನ್ನು ಹಾಡುತ್ತಾ ಅಸಭ್ಯವಾಗಿ ಕಾಣಿಸಿಕೊಂಡು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಅಂತ ಆರೋಪಿಸಲಾಗುತ್ತಿದೆ.

ವಿವಾದದ ಬಗ್ಗೆ ಗಾಯಕಿ ಹೇಳಿದ್ದೇನು?
ತಮ್ಮ ಆಲ್ಬಮ್ ಸಾಂಗ್ಗೆ ಬರುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರೋ ಗಾಯಕಿ ಶ್ರಾವಣ ಭಾರ್ಗವಿ 'ಆ ವಿಡಿಯೋದಲ್ಲಿ ಅಶ್ಲೀಲತೆ ಎಲ್ಲಿದೆ ? ಆ ಹಾಡನ್ನು ನಾನು ಎಷ್ಟು ಭಕ್ತಿಯಿಂದ ಹಾಡಿದ್ದೇನೆ ಅನ್ನುವುದು ನನಗೆ ಗೊತ್ತು. ಹಾಡಿನಲ್ಲಿ ತೆಲುಗುತನ ಬಿಟ್ಟು ಬೇರೆ ಏನಾದರೂ ಕಂಡರೆ ಅದು ನಿಮ್ಮ ದೃಷ್ಟಿಯ ತಪ್ಪು. ಇದು ನನ್ನ ಸಮಸ್ಯೆಯಲ್ಲ, ನಿಮಗೆ ದೃಷ್ಟಿ ಕೆಟ್ಟಿದ್ದರೆ, ಕಂಬಳಿ ಹೊದ್ದು ಕೂತರೂ ಅಸಭ್ಯವಾಗಿ ಕಾಣುತ್ತದೆ. ನಾನು ಸಾಹಿತ್ಯ ಬದಲಿಸಿ ಕೀರ್ತನೆ ಹಾಡಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಅನ್ನುವುದು ನನ್ನ ಅಂತರಂಗಕ್ಕೆ ಗೊತ್ತಿತ್ತು. ನಿಜಕ್ಕೂ ತಪ್ಪು ಇದ್ದರೆ ದೇವರೇ ಹಾಡು ತೆಗೆಸುತ್ತಾನೆ. ಪುರುಷ ಗಾಯಕರು ಆಲ್ಬಂಗಳನ್ನು ಬಿಡುಗಡೆ ಮಾಡುವಾಗ ಯಾವುದೇ ವಿವಾದಗಳು ಸೃಷ್ಟಿ ಆಗುವುದಿಲ್ಲ. ಅದೇ ಮಹಿಳೆಯರ ಹಾಡು ಬಿಡುಗಡೆಯಾದಾಗ ಮಾತ್ರ ಇಂತಹ ವಿವಾದಗಳನ್ನು ಸೃಷ್ಟಿಸುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.

ಡಿವೋರ್ಸ್ಗೆ ಮುಂದಾದ್ರಾ ಹೇಮಚಂದ್ರ- ಶ್ರಾವಣ ಭಾರ್ಗವಿ?
ತೆಲುಗು ಚಿತ್ರರಂಗದಲ್ಲಿ ಶ್ರಾವಣ ಭಾರ್ಗವಿ ಬಹುಬೇಡಿಕೆಯ ಗಾಯಕಿ. ತಮ್ಮ ಹಸ್ಕಿ ವಾಯ್ಸ್ನಿಂದ ಸಂಗೀತ ಪ್ರೇಮಿಗಳ ಮನಗೆದ್ದ ಗಾಯಕಿ, 2013ರಲ್ಲಿ ಗಾಯಕ ಹೇಮಚಂದ್ರ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇಬ್ಬರ ಪ್ರೀತಿಯ ಸಂಕೇತವಾಗಿ ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಕೆಲ ದಿನಗಳಿಂದ ಇಬ್ಬರ ದಾಂಪತ್ಯದಲ್ಲಿ ವೈಮನಸ್ಸು ಮೂಡಿದ್ದು, ಡೈವೋರ್ಸ್ಗೆ ಮುಂದಾಗಿದ್ದಾರೆ ಅನ್ನುವ ಗುಸುಗುಸು ಕೇಳಿ ಬರುತ್ತಿದೆ. ಆದರೆ ಬಗ್ಗೆ ಇಬ್ಬರು ಪ್ರತಿಕ್ರಿಯೆ ನೀಡಿಲ್ಲ.

ಶ್ರಾವಣ ಭಾರ್ಗವಿ ಹಾಡಿರುವ ಹಿಟ್ ಸಾಂಗ್ಸ್
ಹೇಮಚಂದ್ರ ಮತ್ತು ಶ್ರಾವಣ ಭಾರ್ಗವಿ ದಂಪತಿ ಗಾಯಕರಾಗಿ ಮಾತ್ರವಲ್ಲದೇ ಕಂಠದಾನ ಕಲಾವಿದರಾಗಿಯೂ ಗುರ್ತಿಸಿಕೊಂಡಿದ್ದಾರೆ. ಸಾಕಷ್ಟು ನಟ-ನಟಿಯರಿಗೆ ವಾಯ್ಸ್ ಡಬ್ಬಿಂಗ್ ಮಾಡಿದ್ದಾರೆ. 'ಸನ್ ಆಫ್ ಸತ್ಯಮೂರ್ತಿ' ಚಿತ್ರದ ಸೂಪರ್ ಮಚ್ಚಿ, 'ರೆಬೆಲ್' ಚಿತ್ರದ ಗೂಗಲ್ ಸರ್ಚುಲೊನಾ, ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ 'ನಿನ್ನಿಂದಲೇ' ಚಿತ್ರದಲ್ಲಿ ಬೋಲೊ ಭಮ್ ಭಮ್ ಸೇರಿದಂತೆ ಸಾಕಷ್ಟು ಹಿಟ್ ಗೀತೆಗಳನ್ನು ಶ್ರಾವಣ ಭಾರ್ಗವಿ ಹಾಡಿದ್ದಾರೆ.


Click it and Unblock the Notifications











