ಜಾಹ್ನವಿ ಕಪೂರ್ ಬಲವಂತದ ಚುಂಬನಕ್ಕಾಗಿ ಇರುವ ಗೊಂಬೆಯಂತೆ ; ಪೆದ್ದಿ ವಿರುದ್ಧ ಖ್ಯಾತ ಗಾಯಕಿಯ ಆಕ್ರೋಶ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸಂ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಎನ್ನುವ ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ. ಉದಾಹರಣೆಗೆ ''ಪೆದ್ದಿ'' ಚಿತ್ರತಂಡವನ್ನೇ ತೆಗೆದುಕೊಳ್ಳಿ.
ಹೌದು. ರಾಮ್ ಚರಣ್ ಅಭಿನಯದ ''ಪೆದ್ದಿ'' ಬಿಡುಗಡೆಯಾಗಿದೆ. ಬಾಕ್ಸಾಫೀಸ್ನಲ್ಲಿ ಹಣವನ್ನು ಕೂಡ ದೋಚುತ್ತಿದೆ. ಆದರೆ ಇದೇ ಸಮಯದಲ್ಲಿ ಹಲವರ ಕೆಂಗಣ್ಣಿಗೆ ಕೂಡ ಈ ಚಿತ್ರ ಗುರಿಯಾಗಿದೆ. ಅದಕ್ಕೆ ಕಾರಣ ಜಾಹ್ನವಿ ಕಪೂರ್ ಅವರನ್ನು ಚಿತ್ರತಂಡ ಬಳಸಿಕೊಂಡಿರುವ ರೀತಿ.

ಇಡೀ ಚಿತ್ರದಲ್ಲಿ ಕ್ಯಾಮರಾ ಜಾಹ್ನವಿ ಕಪೂರ್ ಅವರ ಮುಖಚಹರೆಯ ಮೇಲಿಲ್ಲ. ಬದಲಿಗೆ ಅವರ ಅಂಗಾಂಗಗಳ ಮೇಲೆಯೇ ಕ್ಯಾಮರಾ ಕಣ್ಣಿದೆ. ಇನ್ನು ನಾಯಕಿಯ ಒಪ್ಪಿಗೆ ಇಲ್ಲದೇ, ಮುತ್ತು ಕೊಡುವ ದೃಶ್ಯವೂ ಕೂಡ ಚಿತ್ರದಲ್ಲಿದೆ. ಚಿತ್ರವನ್ನು ನೋಡುತ್ತಿದ್ದರೆ ಜಾಹ್ನವಿ ಕಪೂರ್ ಅವರನ್ನು ಚಿತ್ರದಲ್ಲಿ ಲೈಂ*ಗಿಕ ಆಕರ್ಷಣೆಯ ಸಾಧನವಾಗಿ ತೋರಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ.
ಹೀಗಾಗಿ ಹಲವರು ಕೆರಳಿದ್ಧಾರೆ. ನಿರ್ದೇಶಕ ಬುಚ್ಚಿ ಬಾಬು ವಿರುದ್ಧ ಕೆಂಡ ಕಾರುತ್ತಿದ್ದಾರೆ. ಇನ್ನು ''ರೆಕಮೆಂಡೇಷನ್ ಕಮ್ಯುನಿಟಿ'' ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ಕುರಿತು ಹಂಚಿಕೊಳ್ಳಲಾದ ಆಕ್ರೋಶ ಭರಿತ ಪೋಸ್ಟ್ವೊಂದಕ್ಕೆ ಖುದ್ದು ಜಾಹ್ನವಿ ಕಪೂರ್ ಲೈಕ್ ಮಾಡಿದ್ಧಾರೆ ಎನ್ನುವ ಸುದ್ದಿ ಕೂಡ ಇದೆ. ಇದರಿಂದ ಉರಿಯುವ ಬೆಂಕಿಗೆ ಇನ್ನೂ ತುಪ್ಪ ಸುರಿದಂತಾಗಿದೆ.
ಹೀಗಿರುವಾಗ ಇದೀಗ ''ನಿಲುವದ್ದಂ ನಿನ್ನೆ''..''ನುವ್ವುಂಟೆ''..''ಮೆಲ್ಲಗ ಕರಗನಿ''.. ''ನಾಥೋ ವಸ್ತಾವಾ''.. ''ಕಾಟ್ಟು ಕಾಟ್ಟು''..ಸೇರಿದಂತೆ ಹತ್ತಾರು ಚಾರ್ಟ್ಬಸ್ಟರ್ ಹಾಡುಗಳನ್ನು ಹಾಡಿರುವ ಗಾಯಕಿ ಸುಮಂಗಲಿ ಅರಿಯನಾಯಗಮ್ ಕೂಡ ''ಪೆದ್ದಿ'' ತಂಡದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ಧಾರೆ. ಜಾಹ್ನವಿ ಕಪೂರ್ ಅವರನ್ನು ಚಿತ್ರದಲ್ಲಿ ಕೇವಲ ಒಂದು ವಸ್ತುವಿನಂತೆ ಬಳಸಿಕೊಳ್ಳಲಾಗಿದೆ ಎಂದು ಕಿಡಿ ಕಾರಿದ್ಧಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಬರೆದುಕೊಂಡಿರುವ ಸುಮಂಗಲಿ, ಅಧಿಕಾರವಿಲ್ಲದವರ ಮೇಲೆ ನಡೆಯುವ ದೌರ್ಜನ್ಯದ ಕುರಿತು ಕಥೆ ಬರೆಯಲು ಪ್ರಭಾವಶಾಲಿ ಪುರುಷರು ಒಂದೆಡೆ ಸೇರಿದರು. ಆದರೆ ಅದೇ ಸಮಯದಲ್ಲಿ, ಅವರು ಜಾಹ್ನವಿ ಕಪೂರ್ ಅವರ ಪಾತ್ರವನ್ನು ಕ್ಯಾಮೆರಾ ಮುಂದೆ ಕೇವಲ ಒಂದು ವಸ್ತುವನ್ನಾಗಿ ಮಾಡಿದರು ಎಂದು ಹೇಳಿದ್ದಾರೆ.

ಮುಂದುವರೆದು ಬಲವಂತದ ಚುಂಬನಕ್ಕಾಗಿ ಇರುವ ಗೊಂಬೆಯಂತೆ ಜಾಹ್ನವಿ ಕಪೂರ್ ಅವರನ್ನು ಬಳಸಿಕೊಳ್ಳಲಾಗಿದೆ ಎಂದು ಕಿಡಿ ಕಾರಿರುವ ಸುಮಂಗಲಿ, ಚಿತ್ರತಂಡಕ್ಕೆ ಮಾನವೀಯ ಘನತೆ ಬೇಕಿರಲಿಲ್ಲ ಎಂದು ಅನಿಸುತ್ತೆ, ಸಿನಿಮಾದಲ್ಲಿ ಮಹಿಳೆಯರನ್ನು ಹಾಡುಗಳು ಮುಗಿದ ನಂತರ ಎಸೆಯುವ ವಸ್ತುವಿನಂತೆ ಬಳಸಿಕೊಂಡಿದ್ದಾರೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಘನತೆ ಮತ್ತು ಗೌರವಕ್ಕೆ ಮಹಿಳೆ ಅರ್ಹಳಲ್ಲ ಅಂತ ಅವರೇ ನಿರ್ಧಾರ ಮಾಡಿಬಿಟ್ರು ಎಂದು ಹೇಳಿದ್ಧಾರೆ.
ಸದ್ಯ ''ಪೆದ್ದಿ'' ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಜನಸಾಮಾನ್ಯರನ್ನು ಬಿಡಿ ಚಿತ್ರರಂಗದಲ್ಲಿಯೇ ಹಲವರು ನಿರ್ದೇಶಕ ಬುಚ್ಚಿಬಾಬು ಮತ್ತು ತಂಡದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇತ್ತೀಚಿನ ದಿನಗಳಲ್ಲಿ ಮಹಿಳೆಗೆ ಮಾಡಿರುವ ಅತಿದೊಡ್ಡ ಅವಮಾನ ಇದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇದೇ ವೇಳೆ ಜಾಹ್ನವಿ ಕಪೂರ್ ತಮ್ಮ ದೃಶ್ಯಗಳ ಕುರಿತು ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ನಿರ್ದೇಶಕ ಬುಚ್ಚಿ ಬಾಬು ಅವರಲ್ಲಿ ಪ್ರಶ್ನೆಯನ್ನು ಕೇಳಿದ್ದರು. ತಕರಾರು ಮಾಡಿದ್ದರು. ಆದರೆ, ಜಾಹ್ನವಿ ಅವರ ಮಾತುಗಳಿಗೆ ಅವತ್ತು ನಿರ್ದೇಶಕರು ತಲೆ ಕೆಡಿಸಿಕೊಳ್ಳಲಿಲ್ಲ, ಕಿಮ್ಮತ್ತು ಕೊಡಲಿಲ್ಲ ಎನ್ನುವ ಸುದ್ದಿ ಬೇರೆ ಸದ್ಯ ಇದೆಲ್ಲದರ ನಡುವೆ ಹಬ್ಬಿದೆ. ಮಾಧ್ಯಮದವರು ಈ ಕುರಿತು ಕೇಳಿದ ಪ್ರಶ್ನೆಗೆ ಜಾಹ್ನವಿಯ ದೃಶ್ಯಗಳನ್ನು ಜನ ಇಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದಷ್ಟೇ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.



Click it and Unblock the Notifications