ಟಾಲಿವುಡ್ನಲ್ಲೂ ಶುರುವಾಯ್ತು ಸಂಕಷ್ಟ; ಶುಕ್ರವಾರದಿಂದ 400ಕ್ಕೂ ಅಧಿಕ ಥಿಯೇಟರ್ಗಳು ಬಂದ್!
ಕೋವಿಡ್ ಲಾಕ್ಡೌನ್ ಬಳಿಕ ಮತ್ತೆ ಚಿತ್ರರಂಗಕ್ಕೆ ಸಂಕಷ್ಟ ಎದುರಾಗಿದೆ. ದೊಡ್ಡ ಸಿನಿಮಾಗಳು ಇಲ್ಲದೇ ಪ್ರೇಕ್ಷಕರು ಬರದೇ ಥಿಯೇಟರ್ಗಳು ಬಣಗುಡುತ್ತಿವೆ. ಕರ್ನಾಟಕದಲ್ಲಿ ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ನೆಲಸಮವಾಗಿವೆ. ಎಲೆಕ್ಷನ್, ಐಪಿಎಲ್ ಕಾರಣಕ್ಕೆ ದೊಡ್ಡ ಸಿನಿಮಾಗಳು ಬರದೇ ಮತ್ತೆ ಸಮಸ್ಯೆ ಎದುರಾಗಿದೆ.
ಜನ ಬರದಿದ್ದರೆ ಮಾಲೀಕರು ಚಿತ್ರಮಂದಿರಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಕರೆಂಟ್ ಬಿಲ್, ಸಿಬ್ಬಂದಿ ಸಂಬಳ ಸೇರಿದಂತೆ ಸಾಕಷ್ಟು ಹಣ ವ್ಯಯಿಸಬೇಕು. ಐದು ಜನ, 10 ಜನ ಸಿನಿಮಾ ನೋಡಲು ಬಂದರೆ ಕಲೆಕ್ಷನ್ ಆಗುವುದಿಲ್ಲ. ಸದ್ಯಕ್ಕೆ ಜನ ಥಿಯೇಟರ್ಗೆ ಬರಲು ಒಳ್ಳೆ ಸಿನಿಮಾಗಳೇ ಇಲ್ಲ ಎನ್ನುವಂತಾಗಿದೆ. ಸ್ಟಾರ್ ನಟರು ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ವರ್ಷಕ್ಕೆ ಒಂದು ಸಿನಿಮಾ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ.

ಓಟಿಟಿ ಭರಾಟೆ, ಟಿಕೆಟ್ ದರ ಹೆಚ್ಚಳ ಹೀಗೆ ಸಾಕಷ್ಟು ವಿಚಾರಗಳು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದನ್ನು ತಡೆಯುತ್ತಿದೆ. ಅದನ್ನೆಲ್ಲಾ ಮೀರಿ ಬರಬೇಕು ಅಂದ್ರೆ ದೊಡ್ಡ ನಟರ ಸಿನಿಮಾಗಳು ಬೇಕಿದೆ. ಇದು ಬರೀ ಕರ್ನಾಟಕದಲ್ಲಿರುವ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಸಮಸ್ಯೆ ಅಲ್ಲ. ದೇಶಾದ್ಯಂತ ಹಲವೆಡೆ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.
ತೆಲುಗಿನಲ್ಲಿ ಸ್ಟಾರ್ ನಟರ ಸಂಖ್ಯೆ ಹೆಚ್ಚಿದೆ. ದೊಡ್ಡ ದೊಡ್ಡ ಸಿನಿಮಾಗಳು ಆಗಾಗ್ಗೆ ಬರುತ್ತವೆ. ಆದರೆ ಎಲೆಕ್ಷನ್, ಐಪಿಎಲ್ ಎಫೆಕ್ಟ್ ಆಂಧ್ರ, ತೆಲಂಗಾಣದಲ್ಲಿರುವ ಥಿಯೇಟರ್ಗಳ ಮೇಲೂ ಆಗಿದೆ. ದೊಡ್ಡ ಸಿನಿಮಾಗಳಿಲ್ಲದೇ ಅಲ್ಲೂ ಥಿಯೇಟರ್ಗಳು ಖಾಲಿ ಹೊಡೆಯುತ್ತಿದೆ. ನಿರ್ವಹಣೆ ಸಾಧ್ಯವಾಗದೇ ಥಿಯೇಟರ್ಗಳನ್ನು ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತೆಲಂಗಾಣದ 400ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳನ್ನು ಇದೇ ಶುಕ್ರವಾರ(ಮೇ 17)ದಿಂದ 10 ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ. ಒಳ್ಳೆ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಸದ್ಯ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳ ಬಗ್ಗೆ ಪ್ರೇಕ್ಷಕರಿಗೆ ಆಸಕ್ತಿ ಇಲ್ಲ. ಹಾಗಾಗಿ ಅಲ್ಲಿನ ಥಿಯೇಟರ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಪ್ರತಿವರ್ಷ ಸಮ್ಮರ್ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿದ್ದವು. ಶಾಲಾ, ಕಾಲೇಜು ರಜೆ ಹಿನ್ನೆಲೆಯಲ್ಲಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಇತ್ತು. ಆದರೆ ಈ ಬಾರಿ ಅದು ಸುಳ್ಳಾಗಿದೆ. ಸಮ್ಮರ್ನಲ್ಲೇ ಎಲೆಕ್ಷನ್, ಐಪಿಎಲ್ ನಡೀತಿದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಒಳ್ಳೆಯದಲ್ಲ ಎಂದು ಸ್ಟಾರ್ ನಟರು, ನಿರ್ಮಾಪಕರು ಅಂದುಕೊಳ್ಳುತ್ತಿದ್ದಾರೆ. ಆದರೆ ಮಲಯಾಳಂನಲ್ಲಿ ಮಾತ್ರ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಒಳ್ಳೆ ಸಿನಿಮಾ ಮಾಡಿ ಧೈರ್ಯವಾಗಿ ಬಿಡುಗಡೆ ಮಾಡಿದರೆ ಯಾವುದೂ ಸಮಸ್ಯೆ ಆಗಲ್ಲ. ಒಳ್ಳೆ ಚಿತ್ರವನ್ನು ಪ್ರೇಕ್ಷಕರು ಕೈ ಹಿಡಿದೇ ಹಿಡಿಯುತ್ತಾರೆ ಎನ್ನುವ ವಾದವೂ ಇದೆ. ಆದರೂ ಯಾಕೋ ಯಾರು ಧೈರ್ಯ ಮಾಡುತ್ತಿಲ್ಲ. ತೆಲುಗಿನಲ್ಲಿ ಸದ್ಯ 'ಕಲ್ಕಿ', 'ಪುಷ್ಪ'-2 ಸೇರಿದಂತೆ ಕೆಲ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಮೇ 9ಕ್ಕೆ 'ಕಲ್ಕಿ' ಬಿಡುಗಡೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಚುನಾವಣೆ ಹಿನ್ನೆಲೆ ರಿಲೀಸ್ ಮುಂದೂಡಲಾಯಿತು.
ಕನ್ನಡದಲ್ಲಿ ಮೂರ್ನಾಲ್ಕು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಬೇಕಿದೆ. ಧ್ರುವ ಸರ್ಜಾ 'ಮಾರ್ಟಿನ್', ಉಪೇಂದ್ರ 'ಯುಐ', ದುನಿಯಾ ವಿಜಯ್ 'ಭೀಮ' ಸಿನಿಮಾಗಳ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಲು ಕೂಡ ಹಿಂದುಮುಂದು ನೋಡುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ 'ಕಾವೇರಿ' ಚಿತ್ರಮಂದಿರ ನೆಲಸಮವಾಯಿತು. ಆಗಲೂ ಮಾಲೀಕರು ಸ್ಟಾರ್ ನಟರ ಸಿನಿಮಾಗಳು ಕಮ್ಮಿ ಆಗಿರುವುದೇ ನಮಗೆ ನಷ್ಟವಾಗಲು ಕಾರಣ ಎಂದಿದ್ದರು. ಸದ್ಯಕ್ಕೆ ತೆಲಂಗಾಣದಲ್ಲಿ 10 ದಿನಗಳ ಕಾಲ ಥಿಯೇಟರ್ಗಳ ಬಾಗಿಲು ಬಂದ್ ಆಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತದೆ ಎಂದು ಹೇಳುವುದು ಕಷ್ಟ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೆ ಥಿಯೇಟರ್ಗಳು ಇಲ್ಲದೇ ಓಟಿಟಿಯಲ್ಲೇ ಸಿನಿಮಾಗಳನ್ನು ನೋಡಬೇಕಾದ ಸ್ಥಿತಿ ನಿರ್ಮಾಣವಾಗಬಹುದು.


Click it and Unblock the Notifications











