ಮಗಳು ದೊಡ್ಡವಳಾದ್ಲಾ? ಅಂತ ಸಾಲ ಕೊಟ್ಟವರು ನಮ್ಮ ಅಮ್ಮನ ಬಳಿ ಕೇಳ್ತಿದ್ರು- ಸೌಮ್ಯ ರಾವ್ ಭಾವುಕ
ಕನ್ನಡ ನಟಿ, ನಿರೂಪಕಿ ಸೌಮ್ಯ ರಾವ್ ತೆಲುಗು ಕಿರುತೆರೆಯಲ್ಲಿ ಹೆಚ್ಚು ಗುರ್ತಿಸಿಕೊಂಡಿದ್ದಾರೆ. 'ಜಬರ್ದಸ್ತ್' ಕಾಮಿಡಿ ಶೋ ನಿರೂಪಕಿಯಾಗಿ ಗಮನ ಸೆಳೆದಿದ್ದರು. ಇದೀಗ ಬೇರೆ ಬೇರೆ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ತಾವು ಈ ಹಂತಕ್ಕೆ ಹೇಳಿರುವುದಾಗಿ ಸೌಮ್ಯ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಬಣ್ಣದ ಜಗತ್ತಿಗೆ ಬಂದ ಆರಂಭದಲ್ಲಿ ಎದುರಿಸಿದ ಅವಮಾನ, ಕಹಿ ಅನುಭವಗಳ ಬಗ್ಗೆಯೂ ಈ ಹಿಂದೆ ಮಾತನಾಡಿದ್ದಾರೆ. ಆದರೆ ಚಿಕ್ಕಂದಿನಿಂದಲೂ ಇಂತಹ ಸಾಕಷ್ಟು ಕಹಿ ಅನುಭವಗಳಾಗಿರುವ ಬಗ್ಗೆ ಆಕೆ ಮಾತನಾಡಿದ್ದಾರೆ. ಹುಟ್ಟಿದರೆ ಶ್ರೀಮಂತರ ಮನೆಯಲ್ಲಿ ಹುಟ್ಟಬೇಕು. ಕೊನೆಪಕ್ಷ ಕೊಂಚ ಸ್ಥಿತಿವಂತರ ಮನೆಯಲ್ಲಾದರೂ ಹುಟ್ಟಬೇಕು. ಇಲ್ಲದಿದ್ದರೆ ಬಹಳ ಕಷ್ಟ ಎಂದು ತೆಲುಗು ಬಿಗ್ ಟಿವಿ ಪ್ಲಸ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

ಶಿವಮೊಗ್ಗ ಮೂಲದ ಸೌಮ್ಯ ರಾವ್ ತಂದೆ ಬಗ್ಗೆ ಏನು ಮಾತನಾಡಲು ಇಷ್ಟವಿಲ್ಲ ಎಂದಿದ್ದಾರೆ. ತಂದೆ ಕಾರಣಕ್ಕೆ ಸಾಕಷ್ಟು ಕಷ್ಟ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಬಡತನ. ಹಣ ಇಲ್ಲ ಎನ್ನುವ ಕಾರಣಕ್ಕೆ ನಮ್ಮನ್ನು ನಿಕೃಷ್ಟವಾಗಿ ನೋಡುತ್ತಿದ್ದರು. ನಮ್ಮ ತಾಯಿ ನಮ್ಮನ್ನು ಸಾಕಿ ಬೆಳೆಸಿದರು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಳ್ಳುವ ಸಮಯಕ್ಕೆ ಹಾಸಿಗೆ ಹಿಡಿದರು. ಅವರಿಗೆ ಬ್ರೈನ್ ಕ್ಯಾನರ್ ಆಗಿತ್ತು ಎಂದು ಸೌಮ್ಯ ಹೇಳಿದ್ದಾರೆ.
ಒಂದೊತ್ತಿನ ಊಟಕ್ಕೂ ಕಷ್ಟಪಟ್ಟಿದ್ದೇವೆ. ನಮ್ಮ ತಂದೆ ಬಹಳ ಸಾಲ ಮಾಡಿದ್ರು. ಆ ಹಣ ಏನು ಮಾಡಿದ್ರೋ ಗೊತ್ತಿಲ್ಲ. ಸಾಲ ಕೊಟ್ಟವರು ಬಂದು ಕಿರುಕುಳ ಕೊಡುತ್ತಿದ್ದರು. ಸಾಲ ತಗೊಂಡಿದ್ದು ತಂದೆ, ಕೊಟ್ಟವರು ಅವ್ರು. ಆದ್ರೆ ನಮ್ಮ ತಾಯಿಗೆ ಹಿಂಸೆ ಕೊಡುತ್ತಿದ್ದರು. ಮನೆಗೆ ಬಂದು ಸಾಲು ಕೊಡುವಂತೆ ಪೀಡಿಸುತ್ತಿದ್ದರು. ಮಗಳಿದ್ದಾಳಾ? 8ನೇ ಕ್ಲಾಸ್ ಓದುತ್ತಿದ್ದಾಳಾ? ದೊಡ್ಡವಳಾಗಿದ್ದಾಳಾ? ಅಂತೆಲ್ಲಾ ಕೇಳುತ್ತಿದ್ರು. ಇದನ್ನೆಲ್ಲಾ ನೋಡಿ ನೋಡಿ ಸಾಕಾಗಿ ನಮ್ಮಮ್ಮ ನಮ್ಮನ್ನು ಕರ್ಕೊಂಡು ತಿರುಪತಿಗೆ ಕರ್ಕೊಂಡು ಹೋಗಿಬಿಟ್ರು" ಎಂದು ಸೌಮ್ಯ ನೋವು ತೋಡಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ಸೌಮ್ಯ "ಅವತ್ತು ತಿರುಪತಿಗೆ ಹೋದಾಗ ನಮ್ಮ ತಾಯಿ ಬಳಿ 100 ರೂ. ಮಾತ್ರ ಇತ್ತು. ನಾನು, ನಮ್ಮ ಅಮ್ಮ, ನಮ್ಮ ತಮ್ಮ ಬಸ್ಸ್ಟ್ಯಾಂಡ್ನಲ್ಲಿ ರಾತ್ರಿ ಮಲಗಿದ್ದೆವು. ಊಟಕ್ಕಿಲ್ಲದೇ ಕಷ್ಟಪಟ್ಟೆವು. ದೇವಸ್ಥಾನಕ್ಕೆ ಹೋಗಿ ದೇವರ ದರ್ಶನಕ್ಕಿಂತ ಪ್ರಸಾದ ಯಾವಾಗ ಕೊಡ್ತಾರೆ? ಯಾವಾಗ ತಿನ್ನಬಹುದು ಎಂದು ಕಾಯುವಂತಾಗಿತ್ತು ನಮ್ಮ ಸ್ಥಿತಿ. ನಮ್ಮ ತಂದೆ ಸಾಲ ಮಾಡಿದ್ದರಿಂದ ನಾವು ಕಷ್ಟಪಡುವಂತಾಯಿತು. ಆ ಜೀವನ ಯಾರಿಗೂ ಬೇಡ" ಎಂದು ಬೇಸರ ಹೊರ ಹಾಕಿದ್ದಾರೆ.
ಕಾಲೇಜು ದಿನಗಳಲ್ಲೇ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದೆ. ಆ ಸಮಯಲ್ಲೇ ಲಾಯರ್ ಒಬ್ಬರ ಬಳಿ ಕೆಲಸಕ್ಕೆ ಸೇರಿದ್ದೆ. ಆತ ಕೂಡ ಕೆಟ್ಟದಾಗಿ ನೋಡುತ್ತಿದ್ದ ಎಂದು ಸೌಮ್ಯ ಹೇಳಿದ್ದಾರೆ. "ಎಲ್ಲಿಯೂ ನಮ್ಮ ಅಸಹಾಯಕತೆ ತೋರಿಸಬಾರದು. ಆಗ ನಮ್ಮನ್ನು ಬಳಸಿಕೊಳ್ಳಲು ನೋಡುವವರೆ ಹೆಚ್ಚು. ಆ ಲಾಯರ್ ನನ್ನ ಮೇಲೆ ಕೈ ಹಾಕುವುದು, ಕೈ ಹಿಡಿದುಕೊಳ್ಳೋದು ಮಾಡ್ತಿದ್ದ. ಆತನ ಮನೆಯಲ್ಲೇ ಆಫೀಸ್. ಅವರ ತಾಯಿ, ಪತ್ನಿ ಮನೆಯಿಂದ ಹೊರಗೆ ಹೋದರೆ ಅವನ ಕುಚೇಷ್ಟೆ ಶುರುವಾಗುತ್ತಿತ್ತು" ಎಂದು ಸೌಮ್ಯ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
ತಂದೆ ಮಕ್ಕಳಿಗೆ ಹೀರೊ. ಆದರೆ ಒಳ್ಳೆ ತಂದೆ ಸಿಗುವುದು ಅದೃಷ್ಟ. ನಾನು ಈಗ ನಮ್ಮ ತಂದೆ ಬಗ್ಗೆ ಏನೋ ಹೇಳಿದರೆ ನಾನು ವಿಲನ್ ಆಗಿಬಿಡ್ತೀನಿ. ನಿಮ್ಮ ಕುಡಿತ, ಜೂಜು, ದುಶ್ಚಟಗಳಿಗೆ ಮಡದಿ ಮಕ್ಕಳನ್ನು ಬಲಿಕೊಡಬೇಡಿ ಎಂದು ಸೌಮ್ಯ ಮನವಿ ಮಾಡಿದ್ದಾರೆ.


Click it and Unblock the Notifications











