ಎಸ್ಪಿಬಿಗೆ 'ಭಾರತ ರತ್ನ' ಕೊಡಿ: ಮೋದಿಗೆ ಪತ್ರ ಬರೆದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ
ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಚಿತ್ರರಂಗಕ್ಕೆ ಹಾಗೂ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವ 'ಭಾರತ ರತ್ನ' ನೀಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. 5 ದಶಕಗಳ ಕಾಲ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾನ ಗಂಧರ್ವನಿಗೆ ದೇಶದ ಅತ್ಯುನ್ನತ ಗೌರವ ಸಿಗಲೇಬೇಕು ಎಂಬ ಅಭಿಪ್ರಾಯ ಜೋರಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಪರೆದಿದ್ದು, ಖ್ಯಾತ ಗಾಯಕ ಸಾಧನೆಯನ್ನು ಗೌರವಿಸಿ 'ಭಾರತ ರತ್ನ' ಘೋಷಿಸಬೇಕು ಎಂದು ವಿನಂತಿಸಿದ್ದಾರೆ. ಹಾಗಾದ್ರೆ, ಆಂಧ್ರ ಸಿಎಂ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಏನಿದೆ? ಮುಂದೆ ಓದಿ...

ಆರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ
ಆಂಧ್ರಪ್ರದೇಶ ನೆಲ್ಲೂರಿನ ಮೂಲದ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಸುಮಾರು 50 ವರ್ಷಗಳ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅತ್ಯುತ್ತಮ ಗಾಯನಕ್ಕಾಗಿ ಆರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಸಿಎಂ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಕರ್ನಾಟಕ-ತಮಿಳುನಾಡಿನಲ್ಲು ಪ್ರಶಸ್ತಿ
25 ನಂದಿ ಪ್ರಶಸ್ತಿ (ಆಂಧ್ರಪ್ರದೇಶ ರಾಜ್ಯ ಪ್ರಶಸ್ತಿ) ಹಾಗೂ ಕರ್ನಾಟಕ, ತಮಿಳುನಾಡಿನಲ್ಲು ಹಲವು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಫಿಲಂ ಫೇರ್ ಪ್ರಶಸ್ತಿ, ದಕ್ಷಿಣ ಫಿಲಂ ಫೇರ್ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಹಾಗೂ ಪದ್ಮ ಭೂಷಣ ಗೌರವಕ್ಕೆ ಸಹ ಪಾತ್ರರಾಗಿದ್ದಾರೆ ಎಂದು ಆಂಧ್ರ ಸಿಎಂ ತಿಳಿಸಿದ್ದಾರೆ.

ಸಂಗೀತ ಕ್ಷೇತ್ರಕ್ಕೆ ಭಾರತ ರತ್ನ ನೀಡಲಾಗಿದೆ
ಈ ಹಿಂದೆ ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್, ಭೂಪೇನ್ ಹಜರೀಕಾ, ಎಂಎಸ್ ಸುಬ್ಬುಲಕ್ಷ್ಮಿ, ಬಿಸ್ಮಿಲ್ಲಾ ಖಾನ್, ಭೀಮ್ಸೇನ್ ಜೋಶಿ ಅವರಿಗೆ 'ಭಾರತ ರತ್ನ' ನೀಡಲಾಗಿದೆ ಎಂದು ಜಗನ್ ಮೋಹನ್ ರೆಡ್ಡಿ ಸ್ಮರಿಸಿದ್ದಾರೆ.
Recommended Video

ದೇಶದ ಅತ್ಯುನ್ನತ ಗೌರವ ನೀಡಬೇಕು
ಈ ಹಿನ್ನೆಲೆ ಸುಮಾರು 5 ದಶಕಗಳ ಕಾಲ ಸಂಗೀತ ಹಾಗೂ ಕಲೆಗೆ ಅಮೋಘ ಸೇವೆ ನೀಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದೇಶದ ಅತ್ಯುನ್ನತ ಗೌರವ ನೀಡಬೇಕು ಎಂದು ಪತ್ರದ ಮೂಲಕ ವಿನಂತಿಸಿದ್ದಾರೆ. ಎಸ್ಪಿಬಿ ಅವರು ಸೆಪ್ಟೆಂಬರ್ 25 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.


Click it and Unblock the Notifications











