ಸುಳ್ಳಿನ ಕಂತೆ ಎಂದು ಹೇಳಿದ್ದ ಪ್ರಕಾಶ್ ರಾಜ್ಗೆ ಹಿನ್ನಡೆ ; ವಂಗಾ-ಪ್ರಭಾಸ್ 'ಸ್ಪಿರಿಟ್'ದಿಂದ ಹೊರ ಬಂದ ಬಹುಭಾಷಾ ನಟ?
ಒಂದು ಚಿತ್ರಕ್ಕೆ ನಿರ್ದೇಶಕ-ನಿರ್ಮಾಪಕ ಮತ್ತು ತಂತ್ರಜ್ಞರನ್ನು ಹೊರತು ಪಡಿಸಿ ಕೇವಲ ನಾಯಕ- ನಾಯಕಿ ಮಾತ್ರ ಮುಖ್ಯ ಅಲ್ಲ. ಆ ಚಿತ್ರದ ಖಳನಾಯಕ ಕೂಡ ಮುಖ್ಯ, ಪೋಷಕ ಕಲಾವಿದರು ಕೂಡ ಮುಖ್ಯ. ಹೀಗಾಗಿ ಈ ವಿಚಾರವನ್ನು ಚೆನ್ನಾಗಿ ಅರಿತ ಹಲವರು ತಮ್ಮ ಚಿತ್ರದ ಸಪೋರ್ಟಿಂಗ್ ಕಾಸ್ಟ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿ ಪಾತ್ರಗಳನ್ನು ನೀಡುತ್ತಾರೆ.
ಹೀಗೆ ಒಲಿಯುವ ಪಾತ್ರಗಳಿಂದ ಕೆಲವು ಕಲಾವಿದರು ಆ ಚಿತ್ರದ ತೂಕವನ್ನು ಹೆಚ್ಚಿಸುವುದಲ್ಲದೆ, ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಇನ್ನೂ ಕೆಲ ಒಮ್ಮೆ ಆರಂಭದಲ್ಲಿ ವಿವಾದಕ್ಕೀಡಾಗುತ್ತಾರೆ. ಚರ್ಚೆಗೆ ಗ್ರಾಸವಾಗುತ್ತಾರೆ. ಉದಾಹರಣೆಗೆ ಪ್ರಕಾಶ್ ರಾಜ್ ಮತ್ತು ''ಸ್ಪಿರಿಟ್'' ಸುತ್ತಮುತ್ತದ ವಿವಾದ ಮತ್ತು ಸುದ್ದಿಯನ್ನೇ ತೆಗೆದುಕೊಳ್ಳಿ.

ಹೌದು, ಅಸಲಿಗೆ ಕೆಲ ದಿನಗಳ ಹಿಂದೆ ''ಸ್ಪಿರಿಟ್'' ಚಿತ್ರದಿಂದ ಪ್ರಕಾಶ್ ರಾಜ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಭಿನ್ನಾಭಿಪ್ರಾಯವೇ ಈ ನಿರ್ಧಾರಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅಂದು ಈ ಸುದ್ದಿ ಕೇಳಿ ಪ್ರಕಾಶ್ ರಾಜ್ ಕೆಂಡಾಮಂಡಲವಾಗಿದ್ದರು. ''ಸುಳ್ಳು ಸುದ್ದಿ'' ಹಬ್ಬಿಸಬೇಡಿ ಎಂದು ಹೇಳಿದ್ದ ಪ್ರಕಾಶ್ ರಾಜ್ ನನ್ನ ಪಾತ್ರದ ಚಿತ್ರೀಕರಣ ಇನ್ನೂ ಶುರುವಾಗಿಯೇ ಇಲ್ಲ ಎಂದು ಹೇಳಿದ್ದರು.
ಆದರೆ, ಈಗ ''ಸ್ಪಿರಿಟ್'' ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರಕಾಶ್ ರಾಜ್ ಚಿತ್ರದಿಂದ ಹೊರ ಬಂದಿದ್ದು ಸುಳ್ಳಲ್ಲ ಬದಲಿಗೆ ನೂರಕ್ಕೆ ನೂರು ನಿಜಾ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ''ಸ್ಪಿರಿಟ್'' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು ಚಿತ್ರದಲ್ಲಿನ ಕಲಾವಿದರ ಇನ್ಸ್ಟಾಗ್ರಾಮ್ ಖಾತೆಗಳನ್ನು ಟ್ಯಾಗ್ ಮಾಡಲಾಗಿದೆ. ಆದರೆ, ಪ್ರಕಾಶ್ ರಾಜ್ ಹೆಸರು ಮಾತ್ರ ಮಾಯವಾಗಿದೆ. ಇದು ಅನುಮಾನವನ್ನೂ ಹೆಚ್ಚಿಸಿದೆ.

ಇದಕ್ಕೆ ಪೂರಕವಾಗಿ ''ಹಿಂದೂಸ್ತಾನ್ ಟೈಮ್ಸ್'' ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಿದ್ದು, ಪ್ರಕಾಶ್ ರಾಜ್ ಆರಂಭದಲ್ಲಿ "ಸುಳ್ಳು ಸುದ್ದಿ" ಎಂದು ನಿರಾಕರಿಸಿದ್ದರೂ ಕೂಡ, ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಸೃಜನಾತ್ಮಕವಾದ ಭಿನ್ನಾಭಿಪ್ರಾಯಗಳಿಂದ ಚಿತ್ರದಿಂದ ಹೊರ ಬಂದಿದ್ದಾರೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ.
ಈ ಬಾರಿ ಹಬ್ಬಿರುವ ಈ ಸುದ್ದಿಗೆ ಪ್ರಕಾಶ್ ರಾಜ್ ಸದ್ಯದವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮೌನಂ ಸಮ್ಮತಿ ಲಕ್ಷಣಂ ಎಂದು ಹಲವರು ಅಂದುಕೊಂಡಿದ್ದಾರೆ. ಸೋಶೀಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಮಾಡುತ್ತಿದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೆಲಸದ ವಿಚಾರದಲ್ಲಿ ರಾಜಿಯಾಗುವ ವ್ಯಕ್ತಿಯಲ್ಲ. ಪ್ರಕಾಶ್ ರಾಜ್ ಅವರು ಕೂಡ ಕೆಲಸದ ವಿಚಾರಕ್ಕೆ ಬಂದರೆ ನಟ ರಾಕ್ಷಸ. ಈ ಹಿನ್ನೆಲೆ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯ ಮೂಡಿರಬಹುದು ಎನ್ನುವ ಅಭಿಪ್ರಾಯವನ್ನು ಸದ್ಯ ಹಲವರು ವ್ಯಕ್ತಪಡಿಸುತ್ತಿದ್ದಾರೆ.
ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ನಾಯಕ-ನಾಯಕಿಯಾಗಿರುವ ಈ ಚಿತ್ರ ಮುಂದಿನ ವರ್ಷ ಮಾರ್ಚ್ನಲ್ಲಿ ತೆರೆಗೆ ಬರಲಿದ್ದು, ಈ ಚಿತ್ರದ ಮೇಲೆ ಪ್ರಭಾಸ್ ಅಭಿಮಾನಿಗಳಿಗೆ ವಿಪರೀತವಾದ ನಿರೀಕ್ಷೆಗಳಿವೆ. ಇನ್ನು ವಂಗಾ ಅವರ ಈ ''ಸ್ಪಿರಿಟ್'' ಚಿತ್ರದಿಂದ ಹೊರ ಬಂದವರಲ್ಲಿ ಪ್ರಕಾಶ್ ರಾಜ್ ಮೊದಲಿಗರೇನಲ್ಲ. ಈ ಹಿಂದೆ ಚಿತ್ರಕ್ಕೆ ನಾಯಕಿಯಾಗಿದ್ದ ದೀಪಿಕಾ ಪಡುಕೋಣೆ ಕೂಡ ಸಂದೀಪ್ ರೆಡ್ಡಿ ವಂಗಾ ಕಾರ್ಯವೈಖರಿಯನ್ನು ಕಂಡು ದೀರ್ಘ ದಂಡ ನಮಸ್ಕಾರ ಹಾಕಿ ಚಿತ್ರದಿಂದ ಹೊರ ಬಂದಿದ್ದರು. ಪ್ರಕಾಶ್ ರಾಜ್ ಅವರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ..? ಹಬ್ಬಿರುವ ಈ ಸುದ್ದಿಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











