ಎನ್ಟಿಆರ್ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆ
ತೆಲುಗು ಚಿತ್ರರಂಗದ ಹಿರಿಯ ನಟ, ಮಾಜಿ ಸಿಎಂ ದಿವಂಗತ ಎನ್ಟಿಆರ್ ಕಿರಿಯ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್ನ ಜ್ಯೂಬಿಲಿ ಹಿಲ್ಸ್ನಲ್ಲಿ ವಾಸವಾಗಿದ್ದ ಉಮಾ ಮಹೇಶ್ವರಿ ತಮ್ಮ ಸಾವಿಗೀಡಾಗಿದ್ದಾರೆ.
ಮಾಸಿಕ ಒತ್ತಡದ ಕಾರಣದಿಂದ ಉಮಾ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಉಮಾ ಮಹೇಶ್ವರಿ ನಿಧನ ಸುದ್ದಿ ತಿಳಿಯುತ್ತಿದ್ದಂತೆ, ಟಿಡಿಪಿ ರಾಜಕೀಯ ಮುಖಂಡರು, ಎನ್ಟಿಆರ್ ಕುಟುಂಬ ಸದಸ್ಯರು ಉಮಾ ಮಹೇಶ್ವರಿ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.
ಉಮಾ ಮಹೇಶ್ವರಿ, ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ಉಮಾ ಮಹೇಶ್ವರಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಕೊಠಡಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಜ್ಯೂಬಿಲಿ ಹಿಲ್ಸ್ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಅಸಹಜ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿವಂಗತ ಎನ್ಟಿಆರ್ ಅವರಿಗೆ ಬರೋಬ್ಬರಿ 12 ಮಂದಿ ಮಕ್ಕಳು. ಎಂಟು ಮಂದಿ ಗಂಡು ಮಕ್ಕಳು, ನಾಲ್ಕರು ಹೆಣ್ಣು ಮಕ್ಕಳು. ಅದರಲ್ಲಿ ಕೊನೆಯವರು ಉಮಾ ಮಹೇಶ್ವರಿ.
ರಾಜಕೀಯ ಹಾಗೂ ಸಿನಿಮಾ ಎರಡರಿಂದಲೂ ದೂರವೇ ಇದ್ದ ಉಮಾ ಮಹೇಶ್ವರಿ, ಚಂದ್ರಬಾಬು ನಾಯ್ಡು ಪತ್ನಿ ನಾರಾ ಭುವನೇಶ್ವರಿಯ ಹೆಸರು ಹೇಳಿ ವಿಧಾನ ಸಭೆಯಲ್ಲಿ ಆಡಳಿತ ಪಕ್ಷದವರು ಅಪಮಾನಿಸಿದಾಗ ಎನ್ಟಿಆರ್ ಕುಟುಂಬಸ್ಥರು ಮಾಡಿದ್ದ ವಿಡಿಯೋದಲ್ಲಿ ಉಮಾ ಮಹೇಶ್ವರಿ ಕಾಣಿಸಿಕೊಂಡಿದ್ದರು. ಆಡಳಿತ ಪಕ್ಷದ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು. ಅದೇ ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು.
ಕೆಲವು ತಿಂಗಳ ಹಿಂದಷ್ಟೆ ಉಮಾ ಮಹೇಶ್ವರಿಯವರ ಮಗಳ ಮದುವೆ ಅದ್ಧೂರಿಯಾಗಿ ನಡೆಯಿತು. ಈ ವಿವಾಹಕ್ಕೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಗಮಿಸಿದ್ದರು.
ಉಮಾ ಮಹೇಶ್ವರಿ ಮೊದಲು ನರೇಂದ್ರ ರಾಜ್ ಹೆಸರಿನ ವ್ಯಕ್ತಿಯೊಟ್ಟಿಗೆ ವಿವಾಹವಾಗಿದ್ದರು. ಆದರೆ ಆತನೊಟ್ಟಿಗೆ ವಿಚ್ಛೇಧನ ಪಡೆದ ಉಮಾ ಆ ಬಳಿಕ ಕಂಟಮನೇನಿ ಶ್ರೀನಿವಾಸ್ ಪ್ರಸಾದ್ ಅವರನ್ನು ವಿವಾಹವಾಗಿ ಬಾಳ್ವೆ ನಡೆಸುತ್ತಿದ್ದರು.
ಉಮಾ ಮಹೇಶ್ವರಿಯ ಅಕ್ಕ ನಾರಾ ಭುವನೇಶ್ವರಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪತ್ನಿ, ಇನ್ನೊಬ್ಬ ಅಕ್ಕ ದಗ್ಗುಬಾಟಿ ಪುರಂದರೇಶ್ವರಿ ಕಾಂಗ್ರೆಸ್ ಪಕ್ಷದಿಂದ ಕೇಂದ್ರ ಸಚಿವೆ ಆಗಿದ್ದರು, ಪ್ರಸ್ತುತ ಬಿಜೆಪಿಯಲ್ಲಿದ್ದಾರೆ.


Click it and Unblock the Notifications











