Video viral: ಮತ್ತೆ ವೇದಿಕೆ ಏರಿದ ಶ್ರೀಲೀಲಾ; ಗೋದಾ ದೇವಿ ವೇಷದಲ್ಲಿ ಮೋಡಿ ಮಾಡುತ್ತಿರುವ ನಟಿ
ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಆಕೆ ನಟಿಸಿದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಆದರೆ ಶ್ರೀ ಡ್ಯಾನ್ಸ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ಕೂಡ ಆಕೆಯ ಡ್ಯಾನ್ಸ್ ಮೆಚ್ಚಿಕೊಂಡಿದ್ದರು.
ಅಮೆರಿಕಾದಲ್ಲಿ ಹುಟ್ಟಿದ ಶ್ರೀಲೀಲಾ ಓದಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಆಕೆಯ ತಾಯಿ ಸ್ವರ್ಣಲತಾ ಸ್ತ್ರೀರೋಗತಜ್ಞೆ. ಅಂದಹಾಗೆ ಶ್ರೀಲೀಲಾ ಚಿಕ್ಕಂದಿನಲ್ಲೇ ಭರತನಾಟ್ಯ ಕಲಿತಿದ್ದರು. ಅದು ಸಿನಿಮಾಗಳಲ್ಲಿ ಆಕೆಯ ಡ್ಯಾನ್ಸ್ಗೆ ಪ್ಲಸ್ ಆಗಿದೆ. ಬಹಳ ದಿನಗಳ ನಂತರ ಶ್ರೀಲೀಲಾ ಮತ್ತೆ ವೇದಿಕೆ ಏರಿ ಭರತನಾಟ್ಯ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದೆ.

ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಸಮತಾ ಕುಂಭ್ ಕಾರ್ಯಕ್ರಮದಲ್ಲಿ ಶ್ರೀಲೀಲಾ ಭಾಗಿ ಆಗಿದ್ದರು. ಅದರ ಭಾಗವಾಗಿ ಗೋದಾ ದೇವಿ ವೇಷದಲ್ಲಿ ಶ್ರೀಲೀಲಾ ಭರತನಾಟ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಆ ವಿಡಿಯೋ ವೈರಲ್ ಆಗಿ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. ಸತತ 10 ನಿಮಿಷಗಳ ಕಾಲ ಶ್ರೀಲೀಲಾ ಹೆಜ್ಜೆ ಹಾಕಿರುವುದು ವಿಶೇಷ.
ಶ್ರೀಲೀಲಾ ಚಿಕ್ಕಂದಿನಲ್ಲೇ ಭರತನಾಟ್ಯ ಪ್ರದರ್ಶನ ನೀಡಿರುವ ವೀಡಿಯೋಗಳು, ಫೋಟೊಗಳು ಕೆಲ ದಿನಗಳಿಂದ ವೈರಲ್ ಆಗುತ್ತಿದೆ. ಇದರ ನಡುವೆ ಇದೀಗ ಹೊಸದಾಗಿ ಆಕೆ ವೇದಿಕೆ ಏರಿ ನೃತ್ಯ ಮಾಡಿರುವ ವಿಡಿಯೋ ಸದ್ದು ಮಾಡುತ್ತಿದೆ. ಸದ್ಯ ಶ್ರೀಲೀಲಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕಾಲೇಜು ಪರೀಕ್ಷೆ ಹಿನ್ನೆಲೆ ಕೊಂಚ ಬಿಡುವು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಿಜ ಹೇಳಬೇಕು ಅಂದರೆ ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾಗೆ ಸಿಕ್ಕಷ್ಟು ಅವಕಾಶಗಳು ಮತ್ಯಾರಿಗೂ ಸಿಗಲಿಲ್ಲ. ಆದರೆ ಅದೃಷ್ಟ ಯಾಕೋ ಆಕೆಯ ಕೈ ಹಿಡಿಯಲಿಲ್ಲ. ರವಿತೇಜಾ, ಬಾಲಕೃಷ್ಣ, ಮಹೇಶ್ ಬಾಬುರಂತಹ ಸ್ಟಾರ್ ನಟರ ಜೊತೆಗೆ ನಟಿಸಿದರೂ ದೊಡ್ಡ ಬ್ರೇಕ್ ಸಿಗಲೇಯಿಲ್ಲ. ಇನ್ನು ವಿಜಯ್ ದೇವರಕೊಂಡ ಜೊತೆ ನಟಿಸಲು ಆಯ್ಕೆ ಆಗಿದ್ದರು. ಆ ಸಿನಿಮಾದಿಂದಲೂ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.
'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ಶ್ರೀಲೀಲಾ ಟಾಲಿವುಡ್ ಪ್ರವೇಶಿಸಿದ್ದರು. 'ಧಮಾಕ' ಚಿತ್ರದಲ್ಲಿ ರವಿತೇಜಾ ಜೋಡಿಯಾಗಿ ಕೊಂಚಮಟ್ಟಿಗೆ ಸದ್ದು ಮಾಡಿದ್ದರು. ಆ ಚಿತ್ರದಲ್ಲೂ ಶ್ರೀ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ 'ಸ್ಕಂದ' ಚಿತ್ರದಲ್ಲಿ ರಾಮ್ ಪೋತಿನೇನಿಗೆ ಜೊತೆಯಾದರು. ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತು.
ಬಾಲಕೃಷ್ಣ ಮಗಳ ಪಾತ್ರದಲ್ಲಿ ನಟಿಸಿದ್ದ 'ಭಗವಂತ್ ಕೇಸರಿ' ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಚಿತ್ರದಲ್ಲಿ ವಿಜಯಲಕ್ಷ್ಮಿ ಪಾತ್ರದಲ್ಲಿ ಶ್ರೀ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಸಿನಿಮಾ ಮಾತ್ರ ಗೆಲ್ಲಲಿಲ್ಲ. ನಿತಿನ್ ಜೊತೆ ನಟಿಸಿದ 'ಎಕ್ಸ್ಸ್ಟ್ರಾಡಿನರಿ ಮ್ಯಾನ್' ಸಿನಿಮಾ ಒಂದೇ ವಾರಕ್ಕೆ ಥಿಯೇಟರ್ಗಳಿಂದ ಎತ್ತಂಗಡಿಯಾಗಿ ಭಾರೀ ನಷ್ಟ ತಂದಿತ್ತು.
ಸಂಕ್ರಾಂತಿ ಸಂಭ್ರಮದಲ್ಲಿ ಬಂದ 'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಈ ಸಿನಿಮಾ ಕೂಡ ಪ್ರೇಕ್ಷಕರ ನಿರೀಕ್ಷೆ ತಲುಪಲಿಲ್ಲ. ಚಿತ್ರದಲ್ಲಿ ಶ್ರೀ ನಟನೆಗೂ ಹೆಚ್ಚಿನ ಅವಕಾಶ ಇರಲಿಲ್ಲ. ಬರೀ ಒಂದೆರಡು ಸನ್ನಿವೇಶ ಹಾಗೂ ಹಾಡುಗಳಿಗೆ ಕುಣಿದು ಸುಮ್ಮನಾಗಿದ್ದರು.
ಸದ್ಯ ಪವನ್ ಕಲ್ಯಾಣ್ ಜೊತೆ 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ. ಪವರ್ ಸ್ಟಾರ್ ಮುಂದಿನ ಆಂಧ್ರ ವಿಧಾನಸಭೆ ಚುನಾವಣೆ ಕಡೆ ಮುಖ ಮಾಡಿದ್ದು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಚುನಾವಣೆ ಮುಗಿದು ಫಲಿತಾಂಶ ಬಂದಮೇಲೆ 'ಉಸ್ತಾದ್ ಭಗತ್ ಸಿಂಗ್' ಕಥೆ ಏನಾಗುತ್ತದೆ ಎನ್ನುವುದು ಗೊತ್ತಾಗುತ್ತದೆ. ಮತ್ತೆ ಸಿನಿಮಾಗಳಲ್ಲಿ ಪವನ್ ಮುಂದುವರೆಯುತ್ತಾರಾ? ಇಲ್ವಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











