ಅಬ್ಬಬ್ಬಾ.. ಭಯಾನಕವಾದ ಹಾರರ್ ಚಿತ್ರದಲ್ಲಿ ದಿಯಾ ಖುಷಿ: ನೋಡುಗರಿಗೆ ಭಯ ಹುಟ್ಟಿಸಿದ ಟೀಸರ್
ಸಣ್ಣ ಬಜೆಟ್ನಲ್ಲಿ ಮೂಡಿ ಬಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ 'ದಿಯಾ' ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ. ಆ ಚಿತ್ರದ ಟೈಟಲ್ ರೋಲ್ನಲ್ಲಿ ನಟಿಸಿದ್ದ ಖುಷಿ ಸಿನಿರಸಿಕರ ಗಮನ ಸೆಳೆದಿದ್ದರು. ಮೊದಲ ನೋಟದಲ್ಲಿ ಒಳ್ಳೆ ನಟನೆಯಿಂದ ಮೋಡಿ ಮಾಡಿದ್ದರು. ಇದೀಗ ಖುಷಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
'ಪಿಂಡಂ' ಎನ್ನುವ ಹಾರರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಖುಷಿ ರವಿ ನಟಿಸಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಬಹಳ ಸದ್ದು ಮಾಡ್ತಿದೆ. ಅತ್ಯಂತ ಭಯಾನಕವಾದ ಸಿನಿಮಾ ಎಂದು ಹೇಳಿ ಚಿತ್ರವನ್ನು ಪ್ರಚಾರ ಮಾಡಲಾಗುತ್ತಿದೆ. ಒಟ್ನಲ್ಲಿ ಟೀಸರ್ ಕೂಡ ಸಿನಿರಸಿಕರಿಗೆ ಭಯ ಹುಟ್ಟಿಸುವಂತಿದೆ. ಸಾಯಿ ಕಿರಣ್ ದೈದಾ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಕಾಂತ್ ಶ್ರೀರಾಮ್ ಮಡದಿ ಪಾತ್ರದಲ್ಲಿ ಖುಷಿ ನಟಿಸಿದ್ದಾರೆ.

ಈಶ್ವರಿ ರಾವ್, ರವಿವರ್ಮ, ಬೇಬಿ ಚೈತ್ರಾ 'ಪಿಂಡಂ' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕೃಷ್ಣ ಸೌರಬ್ ಸಂಗೀತ ಚಿತ್ರಕ್ಕೆ ಹೈಲೆಟ್ ಆಗುವಂತೆ ಕಾಣುತ್ತಿದೆ. "ಈವರೆಗೆ ನೋಡಿರದ ಭಯಂಕರವಾದ ಸಿನಿಮಾ" ಎನ್ನುವ ಟ್ಯಾಗ್ಲೈನ್ ಜೊತೆಗೆ 'ಪಿಂಡಂ' ಸಿನಿಮಾ ನಿರ್ಮಾಣವಾಗಿದೆ. ನಿಜಕ್ಕೂ ಟ್ಯಾಗ್ಲೈನ್ಗೆ ತಕ್ಕಂತೆ ಸಿನಿಮಾ ಪ್ರೇಕ್ಷಕರನ್ನು ಹೆದರಿಸುತ್ತಾ? ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ. ಕಲಾಹಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ಯಶವಂತ್ ದಗ್ಗುಮತಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನವೆಂಬರ್ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.
ಒಂದು ಒಂಟಿ ಮನೆ. ಅದರೊಳಗೊಂದು ಕುಟುಂಬ, ಆ ಕುಟುಂಬಸ್ಥರನ್ನು ಭಯಪಡಿಸುವ ಆತ್ಮ.. ಇದರ ಸುತ್ತಾ 'ಪಿಂಡಂ' ಸಿನಿಮಾ ಕತೆ ಸುತ್ತುತ್ತದೆ ಅನ್ನೋದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಈ ಚಿತ್ರದಲ್ಲಿ ಈಶ್ವರಿ ರಾವ್ ಆತ್ಮಗಳನ್ನು ಬಂಧಿಸುವ ಮಾಟಗಾತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರೀರಾಮ್ ತಮ್ಮ ಕುಟುಂಬವನ್ನು ಆತ್ಮದಿಂದ ರಕ್ಷಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಟಗಾತಿ ತನ್ನ ಜೀವನದಲ್ಲಿ ತಾನು ಕಂಡ ಅತ್ಯಂತ ಭಯಾನಕ ಆತ್ಮದ ಬಗ್ಗೆ ಹೇಳುತ್ತಿದ್ದಂತೆ ಟೀಸರ್ ಶುರುವಾಗುತ್ತದೆ. 'ಪಿಂಡಂ' ಸಿನಿಮಾ ಮೂರು ಟೈಮ್ಲೈನ್ಗಳಲ್ಲಿ ಕಾಣಿಸುತ್ತದೆ. ವರ್ತಮಾನದ ಜೊತೆಗೆ 1930 ಮತ್ತು 1990 ರ ದಶಕದ ಕಥೆಯನ್ನು ಚಿತ್ರದಲ್ಲಿ ತೆರೆಗೆ ತರಲಾಗುತ್ತಿದೆ. ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಎಂದು ಟೀಸರ್ನಲ್ಲಿ ಹೇಳಿರುವುದು ಗಮನಾರ್ಹ.
"ಕಣ್ಣಿಗೆ ಕಾಣಿಸುವ ಭೌತಿಕ ಪ್ರಪಂಚ ಬಹಳ ಚಿಕ್ಕದು. ಅದರ ಮಿತಿಗಳು ನಮಗೆ ಅರ್ಥವಾಗುತ್ತದೆ. ಆದರೆ ಒಳಗಿನ ಪ್ರಪಂಚದಲ್ಲಿ ಯಾವುದೇ ಮಿತಿಗಳು ಇರುವುದಿಲ್ಲ. ಅದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ" ಎನ್ನುವ ಡೈಲಾಗ್ ಕುತೂಹಲ ಮೂಡಿಸವಂತಿದೆ. ಇನ್ನು ಚಿಕ್ಕ ಹುಡುಗಿ ದೇಹದಲ್ಲಿ ಆತ್ಮ ಆಹ್ವಾಹಿಸಿಕೊಂಡಂತೆ ತೋರಿಸಿರುವ ದೃಶ್ಯ, ಅದಕ್ಕಿರುವ ಹಿನ್ನೆಲೆ ಸಂಗೀತ ಭಯಹುಟ್ಟಿಸುವಂತಿದೆ.
'ಪಿಂಡಂ' ಸಿನಿಮಾ ಟೀಸರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ವೇದಿಕೆಯಲ್ಲಿ ಮಾತನಾಡಿದ ನಟಿ ಖುಷಿ "ನಾನು ತೆಲುಗು ಚಿತ್ರದಲ್ಲಿ ನಟಿಸುತ್ತೇನೆ ಎಂದುಕೊಂಡಿರಲಿಲ್ಲ. ನಾನು ಕರ್ನಾಟಕದಲ್ಲಿ ರಂಗಭೂಮಿ ಕಲಾವಿದೆ ಆಗಿದ್ದೆ. ಹಾಗಾಗಿ ನಾನು ಕನ್ನಡ ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದೆ. ನೀವು 'ದಿಯಾ' ಚಿತ್ರವನ್ನು ಬಹಳ ಚೆನ್ನಾಗಿ ಆದರಿಸಿದ್ದಿರಿ. ಅದೇ ರೀತಿಯ ಪ್ರೋತ್ಸಾಹ 'ಪಿಂಡಂ' ಚಿತ್ರಕ್ಕೂ ಬೇಕು ಎಂದು ಕೇಳಿಕೊಳ್ಳುತ್ತೇನೆ. ನನಗೆ ಆರಂಭದಲ್ಲಿ ಭಯವಾಗಿತ್ತು. ಸಾಕಷ್ಟು ತೆಲುಗು ಸಂಭಾಷಣೆ ಇತ್ತು. ಸಹ ನಿರ್ದೇಶಕರು ನನಗೆ ತೆಲುಗು ಕಲಿಸಿದರು. ಎಲ್ಲರಿಗೂ ಧನ್ಯವಾದ" ಎಂದಿದ್ದಾರೆ.


Click it and Unblock the Notifications











