ಅಧಿಕೃತವಾಗಿ ಆರ್ಆರ್ಆರ್ ಬಿಡುಗಡೆ ಮುಂದಕ್ಕೆ: ಹೊಸ ದಿನಾಂಕ ಯಾವುದು?
ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಮೆಗಾ ಸಿನಿಮಾ ಆರ್ಆರ್ಆರ್ ಬಿಡುಗಡೆ ಯಾವಾಗ ಎನ್ನುವುದು ಈಗ ಕಾಡುತ್ತಿರುವ ದೊಡ್ಡ ಪ್ರಶ್ನೆ. ಇದಕ್ಕೂ ಮುಂಚೆ ಘೋಷಿಸಿದಂತೆ ಅಕ್ಟೋಬರ್ 13ಕ್ಕೆ ಆರ್ಆರ್ಆರ್ ಸಿನಿಮಾ ಬರಬೇಕಿತ್ತು. ಆದರೆ, ಕೋವಿಡ್ ಮೂರನೇಯ ಭೀತಿಯಿಂದ ಎದುರಾದ ಸಂಕಷ್ಟದ ಪರಿಣಾಮ ಆ ದಿನಾಂಕಕ್ಕೆ ಬರಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಪ್ರಕಟಿಸಿದ ದಿನಕ್ಕೆ ಸಿನಿಮಾ ಬರುತ್ತಾ ಅಥವಾ ಬರಲ್ವಾ ಎಂಬ ಚರ್ಚೆ ಬಹಲ ದಿನಗಳಿಂದಲೂ ಸದ್ದು ಮಾಡ್ತಿದೆ.
ಮತ್ತೊಂದೆಡೆ ರಿಲೀಸ್ ಬಗ್ಗೆ ರಾಜಮೌಳಿ ಮತ್ತು ತಂಡ ಯಾವುದೇ ಸ್ಪಷ್ಟನೆ ಕೊಡುತ್ತಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ಹಾಗೂ ಇತರೆ ಸಿನಿಮಾಗಳಿಗೆ ತಲೆಬಿಸಿ ಮಾಡಿದೆ. ಈ ಕುರಿತು ಈಗ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ...

ಆರ್ಆರ್ಆರ್ ಮುಂದಕ್ಕೆ
ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ಬಿಡುಗಡೆಯಾಗಲ್ಲ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ ಎಂದು ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಶೀಘ್ರದಲ್ಲಿ ಹೊಸ ದಿನಾಂಕ ಘೋಷಿಸುವುದಾಗಿಯೂ ಚಿತ್ರ ಹೇಳಿದೆಯಂತೆ.

ಸಂಕ್ರಾಂತಿ ಹಬ್ಬ ಟಾರ್ಗೆಟ್?
ಅಕ್ಟೋಬರ್ನಿಂದ ಮುಂದಕ್ಕೆ ಹೋದ ಆರ್ಆರ್ಆರ್ ಸಿನಿಮಾ ಮುಂದಿನ ವರ್ಷಕ್ಕೆ ತೆರೆಮೇಲೆ ನೋಡಬಹುದು ಎನ್ನಲಾಗಿದೆ. ಪೋಸ್ಟ್ಪೋನ್ ಸುದ್ದಿ ವರದಿಯಾಗುತ್ತಿದ್ದಂತೆ ಹೊಸ ದಿನಾಂಕದ ಬಗ್ಗೆ ಚರ್ಚೆ ಜೋರಾಗಿದೆ. ಈಗಾಗಲೇ ಹಲವು ವೆಬ್ಸೈಟ್ಗಳು ವರದಿ ಮಾಡಿರುವಂತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆರ್ಆರ್ಆರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಅಧಿಕೃತ ಘೋಷಣೆ ಮಾಡಬೇಕಿದೆ.

ಸ್ಟಾರ್ ನಟರ ಚಿತ್ರಗಳು ಲೈನ್-ಅಪ್ ಆಗಿದೆ
ಸಂಕ್ರಾಂತಿ ಹಬ್ಬಕ್ಕೆ ಈಗಾಗಲೇ ಹಲವು ನಿರೀಕ್ಷೆಯ ಚಿತ್ರಗಳು ಘೋಷಣೆಯಾಗಿದೆ. ತೆಲುಗು ಮತ್ತು ತಮಿಳಿನ ಸ್ಟಾರ್ ನಟರ ಚಿತ್ರಗಳು ಪೊಂಗಲ್ಗೆ ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ', ಪ್ರಭಾಸ್ ಅಭಿನಯದ 'ರಾಧೆಶ್ಯಾಮ್', ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ ಭೀಮ್ಲಾ ನಾಯ್ಕ್, ವೆಂಕಟೇಶ್ ನಟನೆಯ 'ಎಫ್ 3 'ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬರುವುದಾಗಿ ಪ್ರಕಟಿಸಿಕೊಂಡಿದೆ.

ಶೂಟಿಂಗ್ ಮುಕ್ತಾಯ
ರಾಜಮೌಳಿಯ ಆರ್ಆರ್ಆರ್ ಇತ್ತೀಚಿಗಷ್ಟೆ ವಿದೇಶಿ ಚಿತ್ರೀಕರಣ ಮುಗಿಸಿತ್ತು. ಈ ಮೂಲಕ ಐತಿಹಾಸಿಕ ಚಿತ್ರದ ಟಾಕಿ ಪೋಷನ್ ಸಂಪೂರ್ಣವಾಗಿದೆ. ಕೆಲವು ಸಣ್ಣ-ಪುಟ್ಟ ಕೆಲಸಗಳು ಮಾತ್ರ ಬಾಕಿಯಿದೆ ಎಂದು ತಿಳಿದು ಬಂದಿದೆ. ಪ್ರಮುಖ ಕಲಾವಿದರಾದ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಎಲ್ಲರ ಶೂಟಿಂಗ್ ಮುಗಿಸಿದ್ದಾರೆ. ರಾಮ್ ಚರಣ್ ಇತ್ತೀಚಿಗಷ್ಟೆ ಶಂಕರ್ ಜೊತೆ ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾರೆ.

450 ಕೋಟಿ ಬಜೆಟ್?
ಅಂದ್ಹಾಗೆ, ಆರ್ಆರ್ಆರ್ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮ್ಮರನ್ ಭೀಮ್ ಮತ್ತು ಅಲ್ಲುರಿ ಸೀತಾರಾಮರಾಜು ಅವರ ಸುತ್ತ ಕಥೆ ಮಾಡಲಾಗಿದ್ದು, ಜೂ ಎನ್ಟಿಆರ್ ಮತ್ತು ರಾಮ್ ಚರಣ್ ತೇಜ ನಟಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಪಾತ್ರದಲ್ಲಿ ಹಿಂದಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಹಾಲಿವುಡ್ ಕಲಾವಿದರು ಚಿತ್ರದಲ್ಲಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸುಮಾರು 450 ಕೋಟಿಗೂ ಅಧಿಕ ಬಜೆಟ್ ಆಗಿದೆ ಎಂದು ಹೇಳಲಾಗಿದೆ.


Click it and Unblock the Notifications











