ಕನ್ನಡಿಗರಿಗೆ ರಾಜಮೌಳಿ ಭಾರೀ ಬ್ರೇಕಿಂಗ್ ನ್ಯೂಸ್

ರಾಜಮೌಳಿ ನಿರ್ದೇಶನ, ಸುದೀಪ್ ನಟನೆಯ ತೆಲುಗಿನ 'ಈಗ' ಹಾಗೂ ತಮಿಳಿನ 'ನಾನ್ ಈ' ಚಿತ್ರ ಬರುವ ತಿಂಗಳು, ಅಂದರೆ ಜುಲೈ 6, 2012 ರಂದು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭರ್ಜರಿಯಾಗಿ ಬಿಡುಗಡೆ ಕಾಣಲಿವೆ. ಕರ್ನಾಟಕದಲ್ಲಿ ಕೂಡ ಸುಮಾರು 100 ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಇದೇ ವೇಳೆ ಕನ್ನಡಿಗರು ಪುಳಕಗೊಳ್ಳುವಂತ ಹೊಸದೊಂದು ಸುದ್ದಿ ಸ್ಪೋಟವಾಗಿದೆ.
ಹೌದು, ಕನ್ನಡಿಗರು ಆಶ್ಚರ್ಯಪಡುವಂತ ಬ್ರೇಕಿಂಗ್ ನ್ಯೂಸ್ ಇದು. ಯಶಸ್ವಿ ನಿರ್ದೇಶಕ ರಾಜಮೌಳಿ ಕನ್ನಡದಲ್ಲೊಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ವಿಷಯವನ್ನು ಈಗ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ರಾಜಮೌಳಿ, ಸ್ವತಃ ಬಹಿರಂಗಪಡಿಸಿದ್ದಾರೆ. ಶ್ರೀಕೃಷ್ಣ ದೇವರಾಯ ಹೆಸರಿನಲ್ಲಿ ವಿಜಯನಗರ ಸಾಮ್ರಾಜ್ಯದ ಕಥೆಯನ್ನು ಆ ಚಿತ್ರ ಹೊಂದಿದೆಯಂತೆ.
"ನನ್ನ ಈ ಹಿಂದಿನ ಎಲ್ಲಾ ಎಂಟು ಚಿತ್ರಗಳನ್ನೂ ಕರ್ನಾಟಕದ ಪ್ರೇಕ್ಷಕರು ಸ್ವೀಕರಿಸಿದ್ದಾರೆ. ತಾಯಿ ಭುವನೇಶ್ವರಿಯ ಆಶೀರ್ವಾದ ನನ್ನ ಮೇಲಿರುವುದರಿಂದ ಸದ್ಯದಲ್ಲಿಯೇ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲು ನಾನು ಯೋಚಿಸಿದ್ದೇನೆ. ಇದು ನನ್ನ ಬಹುದಿನದ ಕನಸು ಹಾಗೂ ಮಹತ್ವಾಕಾಂಕ್ಷೆ" ಎಂದಿದ್ದಾರೆ ಕನ್ನಡ ಮೂಲಗ ತೆಲುಗು ನಿರ್ದೇಶಕ ರಾಜಮೌಳಿ. ಆದರೆ ಆ ಚಿತ್ರಕ್ಕೆ ನಾಯಕರಾರು ಎಂಬ ಗುಟ್ಟನ್ನು ಹಾಗೇ ಉಳಿಸಿಕೊಂಡಿದ್ದಾರೆ.
"ಶ್ರೀಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯವನ್ನು ಆಳುವಾಗಿನ ಕಥೆ ನನ್ನ ತಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸುತ್ತುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನರಿಗೆ ತುಂಬಾ ಹತ್ತಿರವಾದ ಕಥೆ ಇದು. ಹೀಗಾಗಿ, ಕನ್ನಡ ಮತ್ತು ತೆಲುಗಿನಲ್ಲಿ ಇದನ್ನು ಏಕಕಾಲದಲ್ಲಿ ನಿರ್ಮಿಸುವ ಯೋಚನೆ ನನ್ನದು. ಕನ್ನಡದಲ್ಲಿ ಮೊದಲ ಬಾರಿ ಮಾಡುತ್ತಿರುವುದರಿಂದ ಅದು ವಿಶೇಷವಾಗಿರಬೇಕು" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











