'ವಾರಣಾಸಿ' ಚಿತ್ರಕ್ಕೆ ರಾಜಮೌಳಿ ಸಂಭಾವನೆ ಕೇಳಿದವರು ಶಾಕ್; ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ
ಭಾರತೀಯ ಸಿನಿಮಾಗಳಲ್ಲಿ ನಾಯಕ ನಟನಿಗೆ ಮೊದಲ ಆದ್ಯತೆ. ಸ್ಟಾರ್ ವ್ಯಾಲ್ಯೂ ಬಹಳ ಇಂಪಾರ್ಟೆಂಟ್. ಹೀರೊ ಮುಖ ನೋಡಿ ಜನ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರ್ತಾರೆ. ಆದರೆ ಕೆಲ ನಿರ್ದೇಶಕರು ಈ ಮಾತನ್ನು ಸುಳ್ಳಾಗಿಸಿವುದು ಇದೆ. ಚಿತ್ರದ ಸಾರಥಿಯನ್ನು ನಂಬಿ ಪ್ರೇಕ್ಷಕರು ಸಿನಿಮಾ ನೋಡಲು ಮನಸ್ಸು ಮಾಡುವುದು ಇದೆ. ಸೋಲಿಲ್ಲದ ಸರದಾರ ರಾಜಮೌಳಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.
ರಾಜಮೌಳಿ ಮುಟ್ಟಿದ್ದೆಲ್ಲಾ ಹಿಟ್ ಎನ್ನುವಂತಾಗಿದೆ. ಜಕ್ಕಣ್ಣ ನಿರ್ದೇಶನದ ಎಲ್ಲಾ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಚಿತ್ರದಿಂದ ಚಿತ್ರಕ್ಕೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಚಿತ್ರದ ನಾಯಕನನ್ನು ಮೀರಿ ಇದು ನನ್ನ ಸಿನಿಮಾ ಎನ್ನುವ 'ಮಾರ್ಕ್' ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆಗೆ 'ವಾರಣಾಸಿ' ಸಿನಿಮಾ ನಿರ್ಮಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗ್ತಿದೆ. 1300 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ತಯಾರಾಗುತ್ತಿದೆ ಎಂದು ವರದಿ ಆಗ್ತಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ. ಈಗಾಗಲೇ ಬರೀ ಓಟಿಟಿ ರೈಟ್ಸ್ 650 ಕೋಟಿ ರೂ.ಗೂ ಮಾರಾಟವಾಗಿದೆ ಎನ್ನಲಾಗ್ತಿದೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ತೆರೆಗಪ್ಪಳಿಸಲಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಿಗಾಗಿ ಚಿತ್ರವನ್ನು ಜಕ್ಕಣ್ಣ ಸಿದ್ಧಪಡಿಸುತ್ತಿದ್ದಾರೆ.
ವರ್ಷಕ್ಕೂ ಮುನ್ನ 'ವಾರಣಾಸಿ' ಸಿನಿಮಾ ಪ್ರಮೋಷನ್ ಶುರುವಾಗಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ. ಹಣವನ್ನು ನೀರಿನಂತೆ ಚೆಲ್ಲಿ ಪ್ರತಿ ದೃಶ್ಯವನ್ನು ಸೆರೆಹಿಡಿಯಲಾಗ್ತಿದೆ. ಆಫ್ರಿಕಾ ಕಾಡುಗಳಲ್ಲಿ ಕೂಡ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಚಿತ್ರಕ್ಕಾಗಿ ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕ ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.
ಜಕ್ಕಣ್ಣ ನೇರವಾಗಿ ಸಂಭಾವನೆ ಮೊತ್ತ ಪಡೆಯದೇ ಓವರ್ಸೀಸ್ ರೈಟ್ಸ್ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಅಂದಾಜು 150ರಿಂದ 160 ಕೋಟಿ ರೂ.ಗೆ ರೈಟ್ಸ್ ಮಾರಾಟವಾಗುವ ಅಂದಾಜಿದೆ. ಅಷ್ಟು ಮೊತ್ತ ಮೌಳಿಗೆ ಸಂಭಾವನೆಯಾಗಿ ಸಿಗುತ್ತದೆ ಎನ್ನುವ ಚರ್ಚೆ ಫಿಲ್ಮ್ ನಗರ್ನಲ್ಲಿ ನಡೀತಿದೆ. ಕ್ರೇಜ್ಗೆ ತಕ್ಕಂತೆ ಇದು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಭಾರತೀಯ ಚಿತ್ರರಂಗದಲ್ಲಿ ಪ್ರಭಾಸ್, ದಳಪತಿ ವಿಜಯ್, ಅಲ್ಲು ಅರ್ಜುನ್, ರಜನಿಕಾಂತ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತಿದೆ. ಸದ್ಯ ಜಕ್ಕಣ್ಣ ಕೂಡ ಅವರ ಲಿಸ್ಟ್ ಸೇರಿಕೊಳ್ಳಲಿದ್ದಾರೆ.
ನಿರ್ದೇಶಕನಿಗೆ 150 ಕೋಟಿ ರೂ. ಸಂಭಾವನೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಎನ್ನಲಾಗ್ತಿದೆ. ಆ ಮೂಲಕ ಜಕ್ಕಣ್ಣ ಹೊಸ ದಾಖಲೆ ನಿರ್ಮಿಸಿದ್ದಾರೆ. ಮಹೇಶ್ ಬಾಬು ಕೂಡ ಲಾಭದಲ್ಲಿ ಪಾಲು ಪಡೆಯುವ ಲೆಕ್ಕಾಚಾರದಲ್ಲಿದ್ದು 150-200 ಕೋಟಿ ರೂ. ಸಂಭಾವನೆಯಾಗಿ ಸಿಗಬಹುದು ಎನ್ನಲಾಗ್ತಿದೆ. ಕೆ ಎಲ್ ನಾರಾಯಣ ಹಾಗೂ ರಾಜಮೌಳಿ ಪುತ್ರ
ಎಸ್.ಎಸ್. ಕಾರ್ತಿಕೇಯ 'ವಾರಣಾಸಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಗನೇ ನಿರ್ಮಾಪಕ ಎಂದಮೇಲೆ ರಾಜಮೌಳಿ ಸಂಭಾವನೆ ಪಡೆಯುವ ಮಾತು ಎಲ್ಲಿಂದ ಬಂತು. ಸಿನಿಮಾ ಗಳಿಕೆಯಲ್ಲಿ ಅರ್ಧದಷ್ಟು ಅವರ ಕುಟುಂಬಕ್ಕೆ ಸಿಗುತ್ತದೆ ಎನ್ನುವ ಲೆಕ್ಕಾಚಾರ ಕೆಲವರದ್ದು.
ಚಿತ್ರದಲ್ಲಿ ರುದ್ರ ಎನ್ನುವ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ವಿಲನ್ ಕುಂಭ ಆಗಿ ಪೃಥ್ವಿರಾಜ್ ಅಬ್ಬರಿಸಲಿದ್ದಾರೆ. ಮಂದಾಕಿನಿಯಾಗಿ ಪ್ರಿಯಾಂಕಾ ಮೋಡಿ ಮಾಡಲಿದ್ದಾರೆ. ಪಿ. ಎಸ್ ವಿನೋದ್ ಛಾಯಾಗ್ರಹಣ, ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ದೇಶ ವಿದೇಶಗಳಲ್ಲಿ ಚಿತ್ರದ ಕತೆ ಸಾಗಲಿದೆ. ಶ್ರೀರಾಮನ ಅವತಾರದಲ್ಲಿ ಕೂಡ ಮಹೇಶ್ ಬಾಬು ತೆರೆಮೇಲೆ ದರ್ಶನ ಕೊಡಲಿದ್ದಾರೆ.


Click it and Unblock the Notifications











