ಕಾಲ್ತುಳಿತ ಪ್ರಕರಣ; ವಿಚಾರಣೆ ವೇಳೆ ಅಲ್ಲು ಅರ್ಜುನ್ಗೆ ಪೊಲೀಸರು ಕೇಳಿದ ಪ್ರಶ್ನೆಗಳು ಏನು?
ತೆಲುಗು ನಟ ಅಲ್ಲು ಅರ್ಜುನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 'ಪುಷ್ಪ'-2 ಪ್ರೀಮಿಯರ್ ಶೋ ಪ್ರದರ್ಶನದ ವೇಳೆ ಹೈದರಾಬಾದ್ನಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಅಲ್ಲು ಅರ್ಜುನ್ ಬಂಧನವಾಗಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದರು. ಇವತ್ತು(ಡಿಸೆಂಬರ್ 24) ಮಧ್ಯಾಹ್ನ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ನಿಮಯಗಳನ್ನು ಮೀರಿ ಅಲ್ಲು ಅರ್ಜುನ್ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಚಿತ್ರಮಂದಿರದಲ್ಲಿದ್ದ ಸಿಸಿಟಿವಿ ಫುಟೆಜ್ ಸೇರಿ ವಿವಿಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಇನ್ನು ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಹೈದರಾಬಾದ್ ಪೊಲೀಸರು ಚರ್ಚಿಸುತ್ತಿದ್ದಾರೆ.

ಕಾಲ್ತುಳಿತ ಪ್ರಕರಣದ ಸಂಬಂಧ 18 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಎ11 ಆಗಿದ್ದಾರೆ. ಡಿಸೆಂಬರ್ 13ರಂದು ಅವರ ನಿವಾಸಕ್ಕೆ ಪೊಲೀಸರು ತೆರಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಷ್ಟರಲ್ಲಿ ವಕೀಲರ ಮೂಲಕ ಮಧ್ಯಂತರ ಜಾಮೀನು ಪಡೆದರು. ಆದರೂ ಸಮಯ ಮೀರಿದ್ದರಿಂದ ಒಂದು ರಾತ್ರಿ ಚಂಚಲಗೂಡ್ ಜೈಲಿನಲ್ಲಿ ಕಳೆಯುವಂತಾಯಿತು.
ಸದ್ಯ ಅಲ್ಲು ಅರ್ಜುನ್ ತಮ್ಮ ವಕೀಲರ ಜೊತೆ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಪೊಲೀಸರು ಏನೆಲ್ಲಾ ಪ್ರಶ್ನೆಗಳು ಕೇಳಿರಬಹುದು ಎನ್ನುವ ಚರ್ಚೆ ನಡೀತಿದೆ. ಸಂಭಾವ್ಯ ಪ್ರಶ್ನೆಗಳು ಏನೆಲ್ಲಾ ಇರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.
1. ಯಾರ ಅನುಮತಿ ಪಡೆದು ಅಂದು 'ಪುಷ್ಪ'-2 ಚಿತ್ರದ ಪ್ರೀಮಿಯರ್ ಶೋಗೆ ಸಂಧ್ಯಾ ಚಿತ್ರಮಂದಿರಕ್ಕೆ ಬಂದಿದ್ರಿ?
2. ಪೊಲೀಸರು ಅನುಮತಿ ನೀಡಿದ್ದಾರೆ ಎಂದು ನಿಮಗೆ(ಅಲ್ಲು ಅರ್ಜುನ್) ಯಾರು ಹೇಳಿದರು?
3. ಪೊಲೀಸರು ಪ್ರೀಮಿಯರ್ ಶೋಗೆ ಅನುಮತಿ ಕೊಟ್ಟಿಲ್ಲ ಎಂದು ನಿಮಗೆ ಸಂಧ್ಯಾ ಚಿತ್ರಮಂದಿರದ ಮ್ಯಾನೇಜ್ಮೆಂಟ್ ತಿಳಿಸಿತ್ತಾ?
4. ಕಾಲ್ತುಳಿತ ಘಟನೆಯಲ್ಲಿ ರೇವತಿ ಮೃತಪಟ್ಟ ವಿಚಾರ ನೀವು ಚಿತ್ರಮಂದಿರದಲ್ಲಿ ಇದ್ದಾಗಲೇ ಗೊತ್ತಾಗಿತ್ತಾ?
5. ರೇವತಿ ಅವರು ಮೃತಪಟ್ಟ ವಿಚಾರ ನಾನು ಚಿತ್ರಮಂದಿರಲ್ಲಿ ಇದ್ದಾಗ ಗೊತ್ತಿರಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದೇಕೆ?
6. ಯಾವುದೇ ಅನುಮತಿ ಇಲ್ಲದೇ ರೋಡ್ಶೋ ನಡೆಸಿದ್ದು ಯಾಕೆ?
7. ನೀವು ರೋಡ್ ಶೋ ನಡೆಸಲು ಅನುಮತಿ ಪಡೆದಿದ್ರಾ? ಇಲ್ವಾ?
8. ನಿಮ್ಮೊಟ್ಟಿಗೆ ಕುಟುಂಬ ಸದಸ್ಯರು ಯಾರೆಲ್ಲಾ ಅಂದು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದರು?
9. ನಿಮ್ಮ ಜೊತೆ ಅಂದು ಬಂದಿದ್ದ ಬೌನ್ಸರ್ಸ್ ಯಾವ ಏಜೆನ್ಸಿಯವರು?
10. ನೀವು ಎಷ್ಟು ಮಂದಿ ಬೌನ್ಸರ್ಸ್ ಅನ್ನು ನಿಯೋಜಿಸಿಕೊಂಡಿದ್ದೀರಾ?
ಹೀಗೆ ಘಟನೆ ಸಂಬಂಧ ಪೊಲೀಸರು ಸಾಕಷ್ಟು ಪ್ರಶ್ನೆಗಳನ್ನು ನಟ ಅಲ್ಲು ಅರ್ಜುನ್ ಮುಂದೆ ಇಟ್ಟಿದ್ದಾರೆ. ತೆಲಂಗಾಣದಲ್ಲಿ ಈ ಕಾಲ್ತುಳಿತ ಪ್ರಕರಣದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲು ಅರ್ಜುನ್ ಸುದ್ದಿಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆ ಅಂದು ಚಿತ್ರಮಂದಿರಲ್ಲಿದ್ದ ಪೊಲೀಸರು ತಿರುಗೇಟು ನೀಡುತ್ತಿದ್ದಾರೆ.


Click it and Unblock the Notifications











