'ಪುಷ್ಪ' ಚಿತ್ರತಂಡಕ್ಕೆ ಬಂಪರ್ ಉಡುಗೊರೆ ಘೋಷಿಸಿದ ನಿರ್ದೇಶಕ
ಸುಕುಮಾರ್ ನಿರ್ದೇಶಿಸಿ ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 250 ಕೋಟಿ ದಾಟಿ ಹೋಗಿದೆ.
'ಪುಷ್ಪ' ಸಿನಿಮಾ ಯಶಸ್ವಿಯಾದ ಖುಷಿಯನ್ನು ಹಂಚಿಕೊಳ್ಳಲು 'ಥ್ಯಾಂಕ್ಸ್ ಗಿವಿಂಗ್' ಕಾರ್ಯಕ್ರಮವನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಸಿನಿಮಾಕ್ಕೆ ಬೆಂಬಲವಾಗಿ ನಿಂತ ಎಲ್ಲರಿಗೂ, ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.
ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಸುಕುಮಾರ್, 'ಪುಷ್ಪ' ಸಿನಿಮಾಕ್ಕೆ ಕೆಲಸ ಮಾಡಿದ ಎಲ್ಲರಿಗೂ ಭರ್ಜರಿ ಉಡುಗೊರೆ ಒಂದನ್ನು ಘೋಷಿಸಿದರು.

'ಪುಷ್ಪ' ಸಿನಿಮಾಕ್ಕೆ ಕೆಲಸ ಮಾಡಿದ ಲೈಟ್ ಬಾಯ್, ಕಾಸ್ಟೂಮ್ ಬಾಯ್, ಪ್ರೊಡಕ್ಷನ್ ಕೆಲಸಗಾರರು, ಸೆಟ್ ಮಾಡುವವರು, ಹೀಗೆ ಪ್ರತಿಯೊಬ್ಬರಿಗೂ ಒಂದು ಲಕ್ಷ ರುಪಾಯಿ ಹಣವನ್ನು ಉಡುಗೊರೆಯಾಗಿ ನೀಡುವುದಾಗಿ ಸುಕುಮಾರ್ ಘೋಷಣೆ ಮಾಡಿದರು. ಆ ಮೂಲಕ ಸಿನಿಮಾಕ್ಕಾಗಿ ದುಡಿದ ಕೆಳವರ್ಗದ ಸಿಬ್ಬಂದಿಗೆ ಅರ್ಥಪೂರ್ಣವಾಗಿ ಧನ್ಯವಾದ ಹೇಳಿದರು.
ಹೈದರಾಬಾದ್ನಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಕುಮಾರ್, ''ನಾನು ಏನೇ ಯಶಸ್ಸು ಇಂದು ಗಳಿಸಿದ್ದರೂ ಅದರಲ್ಲಿ ಅರ್ಧ ಪಾಲು ನನ್ನ ಪತ್ನಿಯದ್ದು'' ಎಂದು ಭಾವುಕರಾದರು. ಬಳಿಕ ಸಾವರಿಸಿಕೊಂಡು, ಸಿನಿಮಾಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದರು. ಅಲ್ಲು ಅರ್ಜುನ್ ಅವರೊಟ್ಟಿಗೆ ತಾವು ಹೊಂದಿರುವ ವಿಶೇಷ ಬಂಧದ ಬಗ್ಗೆ ಮಾತನಾಡಿದರು.
ಸಿನಿಮಾದ ನಿರ್ಮಾಪಕರನ್ನು ಹೊಗಳುತ್ತಾ, ''ಮೆಗಾಸ್ಟಾರ್ ಚಿರಂಜೀವಿ ಹೇಳುತ್ತಿದ್ದರು, ಈ ನಿರ್ಮಾಪಕರು ಅದೆಷ್ಟು ಧನಾತ್ಮಕ ಯೋಚನೆಯವರಾಗಿದ್ದಾರೆ ಎಂದು. ಹಾಗೆಯೇ ನಿರ್ಮಾಪಕರು ಸದಾ ನಮಗೆ ಬೆನ್ನೆಲುಬಾಗಿ ನಿಂತು ಇಂಥಹಾ ಒಂದು ಒಳ್ಳೆಯ ಸಿನಿಮಾ ಮೂಡಿಬರಲು ಸಹಕರಿಸಿದ್ದಾರೆ ಎಂದು ನಿರ್ಮಾಪಕರಿಗೆ ಧನ್ಯವಾದ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಅಲ್ಲು ಅರ್ಜುನ್ ಭಾವುಕರಾಗಿ ಕಣ್ಣೀರು ಹಾಕಿದರು. ಸುಕುಮಾರ್ ಇಲ್ಲದಿದ್ದರೆ ನನ್ನ ಜೀವನ ಹೀಗೆ ಇರುತ್ತಿರಲಿಲ್ಲ ನಾನು ಸ್ಟೈಲಿಶ್ ಸ್ಟಾರ್, ಐಕಾನಿಕ್ ಸ್ಟಾರ್ ಆಗುತ್ತಲೇ ಇರಲಿಲ್ಲ. ನಾನು ಸುಕುಮಾರ್ಗೆ ಬಹಳ ಋಣಿಯಾಗಿರುತ್ತೇನೆ ಎನ್ನುತ್ತಾ ಕಣ್ಣೀರು ಹಾಕಿದರು ನಟ ಅಲ್ಲು ಅರ್ಜುನ್.
ಅಲ್ಲು ಅರ್ಜುನ್ ಅನ್ನು ಸ್ಟಾರ್ ಮಾಡಿದ 'ಆರ್ಯ' ಸಿನಿಮಾವನ್ನು 2004 ರಲ್ಲಿ ಸುಕುಮಾರ್ ನಿರ್ದೇಶನ ಮಾಡಿದ್ದರು. ಸುಕುಮಾರ್ಗೆ ನಿರ್ದೇಶಕರಾಗಿ ಅದು ಮೊದಲ ಸಿನಿಮಾ ಆಗಿತ್ತು. ಆ ಸಿನಿಮಾದ ಬಳಿಕ ತೆಲುಗು ಚಿತ್ರರಂಗಕ್ಕೆ ಅಲ್ಲು ಅರ್ಜುನ್, ಸುಕುಮಾರ್ ಎಂಬ ಇಬ್ಬರು ಸ್ಟಾರ್ಗಳು ದೊರೆತರು.
'ಪುಷ್ಪ' ಸಿನಿಮಾ ಡಿಸೆಂಬರ್ 17ರಂದು ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ರಕ್ತ ಚಂದನ ಕತೆಯುಳ್ಳ ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ, ಡಾಲಿ ಧನಂಜಯ್ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಹಾಸ್ಯ ನಟ ಸುನಿಲ್, ಮಲಯಾಳಂ ನಟ ಫಹಾದ್ ಫಾಸಿಲ್ ವಿಲನ್ಗಳಾಗಿ ನಟಿಸಿದ್ದಾರೆ.


Click it and Unblock the Notifications











