ಮಹೇಶ್ ಬಾಬು ಫ್ಯಾಮಿಲಿಯಿಂದ ಮತ್ತೊಬ್ಬ ಹೀರೊ ಚಿತ್ರರಂಗಕ್ಕೆ ಎಂಟ್ರಿ; ಯಾರೀತ?
ಸ್ಟಾರ್ ನಟರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗಕ್ಕೆ ಬರೋದು ಹೊಸದೇನು ಅಲ್ಲ. ನೆಪೊಟಿಸಂ ಎಂದು ಎಷ್ಟೇ ಚರ್ಚೆ ನಡೆದರೂ ತಾಕತ್ತು ಇರುವವರು ಗೆಲ್ತಾರೆ, ಇಲ್ಲದವರು ಹೋಗ್ತಾರೆ, ಚಿತ್ರರಂಗದ ಯಾರ ಸ್ವತ್ತು ಅಲ್ಲ. ಇಲ್ಲಿಗೆ ಯಾರು ಬೇಕಾದರೂ ಬರಬಹುದು. ನಟಿಸಿ ಗೆಲ್ಲಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿರುತ್ತದೆ.
ತೆಲುಗು ಚಿತ್ರರಂಗದಲ್ಲಿ ನಂದಮೂರಿ ಫ್ಯಾಮಿಲಿ ಎನ್ಟಿಆರ್ ಮಕ್ಕಳು ಮೊಮ್ಮಕ್ಕಳು, ಅಕ್ಕಿನೇನಿ ಫ್ಯಾಮಿಲಿಯಿಂದ ನಾಗೇಶ್ವರರಾವ್ ಮಕ್ಕಳು ಮೊಮ್ಮಕ್ಕಳು ಚಿತ್ರರಂಗಕ್ಕೆ ಬಂದು ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ಚಿರಂಜೀವಿ ಫ್ಯಾಮಿಲಿಯಿಂದ ಅರ್ಧ ಡಜನ್ಗೂ ಹೆಚ್ಚು ಹೀರೋಗಳು ಇವತ್ತಿಗೂ ನಟಿಸುತ್ತಿದ್ದಾರೆ. ಇನ್ನುಳಿದಂತೆ ಮೋಹನ್ ಬಾಬು ಮಕ್ಕಳು ತೆರೆಮೇಲೆ ಅಬ್ಬರಿಸಿದ್ದಾರೆ.

ಕೃಷ್ಣಂರಾಜು ಫ್ಯಾಮಿಲಿಯಿಂದ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇನ್ನು ಸೂಪರ್ ಸ್ಟಾರ್ ಘಟ್ಟಮನೇನಿ ಕೃಷ್ಣ ಪುತ್ರ ಮಹೇಶ್ ಬಾಬು ಕೂಡ ಸ್ಟಾರ್ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಅದೇ ಫ್ಯಾಮಿಲಿಯಿಂದ ಇದೀಗ ಮತ್ತೊಬ್ಬ ನಟರ ಸಿನಿ ಆರಂಗೇಟ್ರಂಗೆ ವೇದಿಕೆ ಸಿದ್ಧವಾಗುತ್ತಿದೆ. ಘಟ್ಟಮನೇನಿ ಕುಟುಂಬದಿಂದ ಮಹೇಶ್ ಬಾಬು ಮಾತ್ರವಲ್ಲ ಸುಧೀರ್ ಬಾಬು, ಮಂಜುಲ ಘಟ್ಟಮನೇನಿ ಕೂಡ ಬಣ್ಣ ಹಚ್ಚಿದ್ದಾರೆ.
'ಒನ್ ನೇನೊಕ್ಕಡಿನೆ' ಚಿತ್ರದಲ್ಲಿ ಮಹೇಶ್ ಬಾಬು ಮಗ ಗೌತಮ್ ಸಹ ಬಾಲನಟನಾಗಿ ನಟಿಸಿದ್ದ. ಮಗಳು ಸಿತಾರಾ ಈಗಾಗಲೇ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಮಹೇಶ್ ಬಾಬು ಸಹೋದರ ರಮೇಶ್ ಬಾಬು ಪುತ್ರ ಜಯಕೃಷ್ಣ ಘಟ್ಟಮನೇನಿ ಹೀರೊ ಆಗಿ ಚಿತ್ರರಂಗಕ್ಕೆ ಬರಲು ಮುಂದಾಗಿದ್ದಾರೆ. ಕೃಷ್ಣ, ಮಹೇಶ್ ಬಾಬು ಕಾರಣಕ್ಕೆ ಘಟ್ಟಮನೇನಿ ಫ್ಯಾಮಿಲಿ ಬಗ್ಗೆ ಟಾಲಿವುಡ್ನಲ್ಲಿ ಕ್ರೇಜ್ ಇದೆ.

ಒಂದಷ್ಟು ಸಿನಿಮಾಗಳಲ್ಲಿ ರಮೇಶ್ ಬಾಬು ಬಣ್ಣ ಹಚ್ಚಿ ನಟಿಸಿದ್ದರು. ಬಳಿಕ ನಿರ್ಮಾಪಕರಾಗಿ ಗುರ್ತಿಸಿಕೊಂಡಿದ್ದರು. 2 ವರ್ಷದ ಹಿಂದೆ ಅವರು ಲಿವರ್ ಸಂಬಂಧಿ ಸಮಸ್ಯೆಯಿಂದ ಅವರು ಕೊನೆಯುಸಿರೆಳೆದಿದ್ದರು. ಇದೀಗ ಅವರ ಪುತ್ರ ಜಯಕೃಷ್ಣ ನಟನೆ ಕಲಿತು ಹೀರೊ ಚಿತ್ರರಂಗಕ್ಕೆ ಬರಲು ತಯಾರಿ ನಡೆಸಿದ್ದಾರೆ. ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗ್ತಿದೆ. ಹೊಸ ಫೋಟೊಶೂಟ್ನಲ್ಲಿ ಜಯಕೃಷ್ಣ ಮಿಂಚಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗುತ್ತಿದೆ.
ಫೋಟೊಗಳನ್ನು ನೋಡಿದವರು ತಾತ ಕೃಷ್ಣ ಅವರನ್ನು ನೆನಪಿಸುವಂತೆ ಜಯಕೃಷ್ಣ ಕಾಣಿಸುತ್ತಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಘಟ್ಟಮನೇನಿ ಕೃಷ್ಣ ಹೀಗೆ ಇದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಘಟ್ಟಮನೇನಿ ಕುಟುಂಬದಿಂದ ಮತ್ತೊಬ್ಬ ವಾರಸ್ದಾರ ಬರ್ತಿದ್ದಾನೆ ಎಂದು ಚರ್ಚೆ ನಡೆಯುತ್ತಿದೆ.
ದಶಕಗಳ ಹಿಂದೆಯೇ ಟಾಲಿವುಡ್ ಸೂಪರ್ ಸ್ಟಾರ್ ಆಗಿ ಮೆರೆದವರು ಕೃಷ್ಣ. ಬಳಿಕ ಪುತ್ರ ಮಹೇಶ್ ಬಾಬು ತಂದೆಯ ಸಿನಿ ವಾರಸತ್ವ ಮುಂದುವರೆಸಿದ್ದರು. ಇದೀಗ ತೆಲುಗಿನ ನಂಬರ್-1 ಸ್ಟಾರ್ಗಳ ಲಿಸ್ಟ್ ಸೇರಿದ್ದಾರೆ. ಶೀಘ್ರದಲ್ಲೇ ರಾಜಮೌಳಿ ಜೊತೆ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಕೈ ಜೋಡಿಸುತ್ತಿದ್ದಾರೆ. ಮಹೇಶ್ ಬಾಬು ತಮ್ಮ ಮಗ ಗೌತಮ್ನನ್ನು ಚಿತ್ರರಂಗಕ್ಕೆ ಕರೆತರುವ ಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ಗೌತಮ್ಗೂ ಮುನ್ನ ಮಹೇಶ್ ಬಾಬು ಸಹೋದರನ ಮಗ ಜಯಕೃಷ್ಣ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಕೃಷ್ಣ ಮೊಮ್ಮಗ ಎನ್ನುವ ಕಾರಣಕ್ಕೆ ಸಹಜವಾಗಿಯೇ ನಿರೀಕ್ಷೆಗಳಿವೆ. ಶೀಘ್ರದಲ್ಲೇ ಜಯಕೃಷ್ಣ ಅಭಿನಯದ ಚೊಚ್ಚಲ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











