ಪರಭಾಷೆಯಲ್ಲಿ ವಿಲನ್ ಪಾತ್ರ ಮಾಡಲಾರೆ: ಉಪೇಂದ್ರ
ನಾಲ್ಕು ವರ್ಷಗಳ ಹಿಂದೆ ತಮಿಳಿನ 'ಸತ್ಯಂ' ಚಿತ್ರದಲ್ಲಿ ಉಪೇಂದ್ರ ಖಳನಟರಾಗಿದ್ದರು. ವಿಶಾಲ್, ನಯನತಾರಾ ಜೋಡಿಯ ಈ ಚಿತ್ರದಲ್ಲಿ ಉಪೇಂದ್ರ ವಿಲನ್ ಪಾತ್ರದಲ್ಲೇ ಸಖತ್ ಆಗಿಯೇ ಮಿಂಚಿದ್ದರು. ಆದರೆ ನಂತರ ಯಾವುದೇ ಚಿತ್ರದಲ್ಲಿ ಉಪೇಂದ್ರ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ.
ಸುದೀಪ್, ತೆಲುಗು 'ಈಗ' ಚಿತ್ರದ ಮೂಲಕ ಮಿಂಚುತ್ತಿರುವ ಈ ವೇಳೆಯಲ್ಲಿ ಸಹಜವಾಗಿ ಗಾಡ್ ಫಾದರ್ ಉಪ್ಪಿಗೆ ಈ ಪ್ರಶ್ನೆ ಕೇಳಲಾಗಿದೆ. ಉಪ್ಪಿ ಕೊಟ್ಟ ಉತ್ತರವನ್ನು ಅವರ ಮಾತುಗಳಲ್ಲೇ ಓದಿ... ""2008ರಲ್ಲಿ ಬಿಡುಗಡೆಯಾಗಿದ್ದ ವಿಶಾಲ್, ನಯನತಾರಾ ಜೋಡಿಯ 'ಸತ್ಯಂ' ಚಿತ್ರದಲ್ಲಿ ನಾನು ವಿಲನ್ ರೋಲ್ ಮಾಡಿದ್ದೆ. ಪಾತ್ರ ಸಖತ್ತಾಗಿತ್ತು. ಆದರೆ ನಿರೀಕ್ಷಿಸಿದ ಯಶಸ್ಸು ಸಿಕ್ಕಿರಲಿಲ್ಲ.
ಒಂದು ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ಮಾತ್ರಕ್ಕೆ ಮತ್ತೆ ಮತ್ತೆ ಅಂತಹ ಪಾತ್ರಗಳಲ್ಲೇ ಕಾಣಿಸಿಕೊಳ್ಳಬೇಕೆಂಬ ನಿಯಮವಿಲ್ಲ. ಸದ್ಯಕ್ಕೆ ನಾನು ಪರಭಾಷೆಗಳಲ್ಲಿ ವಿಲನ್ ಪಾತ್ರ ಮಾಡುವ ಯಾವುದೇ ಯೋಚನೆ ಮಾಡಿಲ್ಲ. ವಿಲನ್ ಯಾಕೆ ಹೀರೋ ಆಗಿ ಕಾಣಿಸಿಕೊಳ್ಳು ಸಂಭವವೂ ಕಡಿಮೆ. ಸದ್ಯಕ್ಕೆ ನಾನು ಒಪ್ಪಿಕೊಂಡಿರುವ ಕನ್ನಡ ಚಿತ್ರಗಳೇ ಸಾಕಷ್ಟಿವೆ. ಅವು ಮುಗಿಯುವವರೆಗೆ ಈ ಬಗ್ಗೆ ಏನೂ ಹೇಳಲಾರೆ" ಎಂದಿದ್ದಾರೆ.
ಉಪೇಂದ್ರ ಅಭಿನಯದ ಗಾಡ್ ಫಾದರ್ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಸದ್ಯದಲ್ಲೇ 'ಕಲ್ಪನಾ' ಬಿಡುಗಡೆಗೆ ಸಜ್ಜಾಗುತ್ತಿದೆ. ಆನಂತರ 'ಟೋಪಿವಾಲಾ' ಬರಲಿದೆ. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಉಪೇಂದ್ರ ನಟನೆಯ 'ತ್ರಿವಿಕ್ರಮ' ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಇವೆಲ್ಲ ಕಮಿಟ್ ಮೆಂಟ್ ನಂತರ ಹೋಮ್ ಬ್ಯಾನರ್ ಚಿತ್ರವನ್ನು ಉಪ್ಪಿ ಮಾಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












