ತೆಲುಗು ನಟ ನಂದಮೂರಿ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್ ನೋಟಿಸ್!
ಟಾಲಿವುಡ್ ನಟ ನಟಸಿಂಹ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನಟ ಬಾಲಯ್ಯ ಜೊತೆಗೆ ಆಂಧ್ರ, ತೆಲಂಗಾಣ ಸರ್ಕಾರಗಳಿಗೂ ನೋಟಿಸ್ ನೀಡಿರುವುದು ಶಾಕ್ ತಂದಿದೆ. ಬಾಲಕೃಷ್ಣ ನಟನೆಯ 'ಗೌತಮಿ ಪುತ್ರ ಶಾತಕರ್ಣಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದರೂ ಟಿಕೆಟ್ ದರ ಇಳಿಸದೇ ಹಣವನ್ನು ಗುಳುಂ ಮಾಡಿದ್ದಾರೆ ಎಂದು ಮೂವಿ ವೀವರ್ಸ್ ಅಸೋಸಿಯೇಷನ್(MVA) ಕೋರ್ಟ್ ಮೆಟ್ಟಿಲೇರಿತ್ತು.
'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾ ಮಾತ್ರವಲ್ಲದೇ ಅನುಷ್ಕಾ ಶೆಟ್ಟಿ ನಟನೆಯ 'ರುದ್ರಮದೇವಿ' ಸಿನಿಮಾ ನಿರ್ಮಾಣ ಸಂಸ್ಥೆಗಳಿಗೆ ಕೋರ್ಟ್ ನೋಟಿಸ್ ನೀಡಿದೆ. ಎರಡು ಕೂಡ ಐತಿಹಾಸಿಕ ಕಥಾಹಂದರದ ಸಿನಿಮಾಗಳು ಅನ್ನುವ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. 'ಗೌತಮಿ ಪುತ್ರ ಶಾತಕರ್ಣಿ' ಚಿತ್ರ ಆಂಧ್ರ, ತೆಲಂಗಾಣ ಎರಡೂ ಸರ್ಕಾರಗಳಿಂದ ತೆರಿಗೆ ವಿನಾಯಿತಿ ಪಡೆದರೆ, 'ರುದ್ರಮದೇವಿ' ಸಿನಿಮಾ ತೆಲಂಗಾಣ ಸರ್ಕಾರದಿಂದ ಮಾತ್ರ ತೆರೆಗೆ ವಿನಾಯಿತಿ ಪಡೆದುಕೊಂಡಿತ್ತು. ಆ ತೆರಿಗೆ ವಿನಾಯಿತಿ ಹಣವನ್ನು ನಿರ್ಮಾಪಕರಿಂದ ವಾಪಸ್ ಪಡೆಯುವಂತೆ ಪಿಟಿಷನ್ನಲ್ಲಿ ಆಗ್ರಹಿಸಿಲಾಗಿತ್ತು.

ಮೂವಿ ವೀವರ್ಸ್ ಅಸೋಸಿಯೇಷನ್ ನೀಡಿದ ಪಿಟಿಷನ್ ವಿಚಾರಣೆಯನ್ನು ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ನೇತೃತ್ವದ ಪೀಠ ಕೈಗೆತ್ತಿಕೊಂಡಿತ್ತು. ವಿಚಾರಣೆಯ ಬಳಿಕ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾ ನಿರ್ಮಿಸಿದ ಫಸ್ಟ್ ಫ್ರೇಮ್ ಎಂಟರ್ಟೈನ್ಮೆಂಟ್ಸ್ ಹಾಗೂ 'ರುದ್ರಮದೇವಿ' ಚಿತ್ರಕ್ಕೆ ಬಂಡವಾಳ ಹೂಡಿದ ಗುಣ ಟೀಂ ವರ್ಕ್ಸ್ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಸುಪ್ರೀಂ ಕೋರ್ಟ್ ನೋಟಿಸ್ ಬಗ್ಗೆ ನಮಗೇನು ಗೊತ್ತಿಲ್ಲ ಎಂದು ಎರಡೂ ಸಿನಿಮಾ ನಿರ್ಮಾಣ ಸಂಸ್ಥೆಗಳು ಹೇಳುತ್ತಿವೆ. ಸದ್ಯ ನಟ ಬಾಲಕೃಷ್ಣ ಟರ್ಕಿಯಲ್ಲಿ ನಡೆಯುತ್ತಿರುವ ಹೊಸ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಬಾಲಕೃಷ್ಣ ಸಿನಿಬದುಕಿನ 100ನೇ ಸಿನಿಮಾ 'ಗೌತಮಿ ಪುತ್ರ ಶಾತಕರ್ಣಿ'. 2017ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಹಾಡೊಂದರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. 2ನೇ ಶತಮಾನದ ಶಾತವಾಹನ ಸಾಮ್ರಾಜ್ಯದ ರಾಜ ಶಾತಕರ್ಣಿಯ ಕಥೆಯನ್ನು ನಿರ್ದೇಶಕ ಕ್ರಿಶ್ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದರು. ಗುಣಶೇಖರ್ ನಿರ್ದೇಶನದ 'ರುದ್ರಮದೇವಿ' ಅನುಷ್ಕಾ ಶೆಟ್ಟಿ ರಾಣಿಯ ಪಾತ್ರದಲ್ಲಿ ಬಣ್ಣ ಹಚ್ಚಿ ನಟಿಸಿದ್ದರು. ಎರಡೂ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ್ದವು.


Click it and Unblock the Notifications











