ನಟಿ ಪ್ರತ್ಯುಷಾ ಸಾವು ಪ್ರಕರಣ; ಮೇಲ್ಮನವಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
23 ವರ್ಷಗಳ ಹಿಂದೆ ತೆಲುಗು ನಟಿ ಪ್ರತ್ಯುಷಾ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಫೆಬ್ರವರಿ 23, 2002 ರಂದು ನಟಿ ಪ್ರತ್ಯುಷಾ ತಮ್ಮ ಸ್ನೇಹಿತ ಸಿದ್ಧಾರ್ಥ್ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಪ್ರಾಣ ಬಿಟ್ಟಿದ್ದಾಗಿ ಹೇಳಲಾಗಿತ್ತು. ಆದರೆ ಇದು ಆತ್ಮಹತ್ಯೆ ಅಲ್ಲ, ಕೊಲೆ ಎನ್ನುವ ಆರೋಪ ಕೇಳಿಬಂದಿತ್ತು.
ನಟಿ ಪ್ರತ್ಯುಷಾ ಪ್ರಿಯಕರ ಸಿದ್ದಾರ್ಥ್ ಮೇಲೆ ಅನುಮಾನ ಮೂಡಿತ್ತು. ಕೈಯಿಂದ ಕತ್ತು ಹಿಸುಕಿ ಉಸಿರುಗಟ್ಟುವಿಕೆ ಕಾರಣದಿಂದ ಆಕೆ ಮೃತಪಟ್ಟಿರುವುದಾಗಿ ಪೋಸ್ಟ್ಮಾರ್ಟಂ ರಿಪೋರ್ಟ್ ಬಂದಿತ್ತು. ನಂತರ ವೈದ್ಯರ ವರದಿ ದೋಷಪೂರಿತವಾಗಿದೆ ಎಂದು ಹೇಳಲಾಗಿತ್ತು.ತಮ್ಮ ಮಗಳನ್ನು ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂದು ಆಕೆಯ ತಾಯಿ ಆರೋಪಿಸಿದ್ದರು. ಆದರೆ ಪ್ರತ್ಯುಷಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಸಿದ್ದಾರ್ಥ್ಗೆ ಹೈದರಾಬಾದ್ ಮೆಟ್ರೋಪಾಲಿಟನ್ ಕೋರ್ಟ್ 5 ವರ್ಷಗಳ ಜೈಲು ಶಿಕ್ಷೆ ಹಾಗೂ 6 ಸಾವಿರ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಿದ್ದಾರ್ಥ್ ಹೈಕೋರ್ಟ್ ಮೆಟ್ಟಿಲೇರಿದ್ದರು.

2011 ರಲ್ಲಿ ಸಿದ್ದಾರ್ಥ್ ಜೈಲು ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿ 50,000 ರೂ. ದಂಡ ಹೆಚ್ಚಿಸಿತ್ತು. ಆದರೆ ಈ ಸಂಬಂಧ ಮೃತ ನಟಿ ಪ್ರತ್ಯುಷಾ ಅವರ ತಾಯಿ ಸರೋಜಿನಿ ದೇವಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಇತ್ತೀಚೆಗೆ ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆದು ಎರಡೂ ಕಡೆ ವಾದ ಆಲಿಸಿ ನಂತರ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಸುಪ್ರೀಂ ಪೀಠವು ತೀರ್ಪನ್ನು ಕಾಯ್ದಿರಿಸಿರುವುದಾಗಿ ಬುಧವಾರ(ನವೆಂಬರ್ 19) ಹೇಳಿದೆ.
ಕಾಲೇಜು ದಿನಗಳಲ್ಲೇ ನಟಿ ಪ್ರತ್ಯುಷಾ ಹಾಗೂ ಸಿದ್ದಾರ್ಥ್ ಪ್ರೀತಿಸುತ್ತಿದ್ದಾರೆ. ಆಕೆ ಚಿತ್ರರಂಗಕ್ಕೆ ಬಂದ ಬಳಿಕ ಸಿದ್ದಾರ್ಥ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದ. ಪೋಷಕರು ತಮ್ಮ ಮದುವೆಗೆ ಒಪ್ಪುತ್ತಿಲ್ಲ ಎಂದು ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಲಾಗಿತ್ತು. ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದರೂ ನಟಿ ಪ್ರತ್ಯುಷಾ ಸಾವನ್ನಪ್ಪಿದ್ದರು. ಸಿದ್ದಾರ್ಥ್ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.

ಸುಪ್ರೀಂ ಕೋರ್ಟ್ನಲ್ಲಿ ಸಿಬಿಐ ಪರ ಹಿರಿಯ ವಕೀಲ ನಚಿಕೇತ ಜೋಶಿ ವಾದ ಮಂಡಿಸಿದರು. ಪ್ರತ್ಯೂಷಾಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೆಕ್ಷನ್ 302ರ ಅಡಿಯಲ್ಲಿ ಶಿಕ್ಷೆ ವಿಧಿಸಿ, ಸಾಧ್ಯವಾಗದಿದ್ದರೆ, ಸೆಕ್ಷನ್ 306ರ ಅಡಿ ಗರಿಷ್ಠ ಶಿಕ್ಷೆ ವಿಧಿಸಿ ಎಂದು ಆಗ್ರಹಿಸಿದ್ದಾರೆ. ಆರೋಪಿಗಳ ಪರ ವಕೀಲರಾದ ನಾಗಮುತ್ತು ಮತ್ತು ಎಲ್. ನರಸಿಂಹ ರೆಡ್ಡಿ ವಾದ ಮಾಡಿ ಮೃತ ಪ್ರತ್ಯೂಷಾ ಹಾಗೂ ಸಿದ್ದಾರ್ಥ್ ಇಬ್ಬರೂ ಒಟ್ಟಿಗೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಹಾಗಾಗಿ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತೆ ಆಗುವುದಿಲ್ಲ ಎಂದು ವಾದಿಸಿದ್ದಾರೆ.
ಈಗಿನ ತೆಲಂಗಾಣದ ಭುವನಗಿರಿ ಎಂಬಲ್ಲಿ ಹುಟ್ಟಿ ಬೆಳೆದ ನಟಿ ಪ್ರತ್ಯೂಷಾ 1998ರಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. 'ರಾಯುಡು' ಆಕೆ ನಟಿಸಿದ ಚೊಚ್ಚಲ ಸಿನಿಮಾ. ಬಳಿಕ ಏಳೆಂಟು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಡಿ ಗ್ಲಾಮರಸ್ ರೋಲ್ಗಳಲ್ಲಿ ಪಕ್ಕದಮನೆ ಹುಡುಗಿ ರೀತಿ ತೆರೆಮೇಲೆ ಕಾಣಿಸಿಕೊಂಡು ಗಮನ ಸೆಳೆದಿದ್ದರು. ತಮಿಳಿನ ಸೌಂಡ್ ಪಾರ್ಟಿ ಎಂಬ ಸಿನಿಮಾ ಆಕೆ ನಿಧನದ ನಂತರ ತೆರೆಗೆ ಬಂದಿತ್ತು. ಹೀಗೆ ಮಿಂಚಿ ಹಾಗೆ ಮರೆಯಾದ ಪ್ರತ್ಯೂಷಾ ಸಾವಿನ ಪ್ರಕರಣ 23 ವರ್ಷಗಳ ಹಿಂದೆ ಭಾರೀ ಸುದ್ದಿ ಆಗಿತ್ತು.
'ಸಮುದ್ರಂ', 'ಸೂಪರ್ ಕುಟುಂಬಂ', 'ಸ್ನೇಹಮಂಟೆ ಇದೇರಾ', 'ತವಸಿ', '''ಕಲುಕುಕೊವಾಲನಿ' ಪ್ರತ್ಯೂಷಾ ನಟಿಸಿದ ಮತ್ತಷ್ಟು ಸಿನಿಮಾಗಳು. ಒಂದು ಕನ್ನಡ ಚಿತ್ರಕ್ಕೆ ಕೂಡ ಆಕೆ ಸಹಿ ಮಾಡಿದ್ದರು. ಆದರೆ ಆ ಸಿನಿಮಾ ಶುರುವಾಗುವ ಮುನ್ನ ಕೊನೆಯುಸಿರೆಳೆದುಬಿಟ್ಟರು.


Click it and Unblock the Notifications











