Pratyusha Case: ನಟಿ ಪ್ರತ್ಯೂಷಾ ಸಾವು ಪ್ರಕರಣ; ಸಿದ್ದಾರ್ಥ್ ರೆಡ್ಡಿ ಶರಣಾಗುವಂತೆ 24 ವರ್ಷಗಳ ಬಳಿಕ ಸುಪ್ರೀಂ ತೀರ್ಪು
ಖ್ಯಾತ ನಟಿ ಪ್ರತ್ಯೂಷಾ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ 24 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಪ್ರಕರಣದ ಆರೋಪಿ ಸಿದ್ದಾರ್ಥ್ ರೆಡ್ಡಿ 4 ವಾರಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಸಿದ್ಧಾರ್ಥ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ(ಫೆಬ್ರವರಿ 12) ವಜಾಗೊಳಿಸಿದೆ.
ಪ್ರಕರಣ ಸಂಬಂಧ ಈ ಹಿಂದೆ ಹೈಕೋರ್ಟ್ ಆರೋಪಿಗೆ ನೀಡಿದ್ದ ಶಿಕ್ಷೆಯನ್ನು ಇದೀಗ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ತೆಲಂಗಾಣದ ಭುವನಗಿರಿಯಲ್ಲಿ ಜನಿಸಿದ ಪ್ರತ್ಯೂಷಾ ಬಣ್ಣದಲೋಕಕ್ಕೆ ಪರಿಚಿತರಾಗಿದ್ದರು. ಕೆಲ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಆಕೆ ತನ್ನ ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದರು. ಫೆಬ್ರವರಿ 23, 2002 ರಂದು ಆತ್ಮಹತ್ಯೆ ಯತ್ನದಲ್ಲಿ ಆಕೆ ಕೊನೆಯುಸಿರೆಳೆದಿದ್ದರು. ಆದರೆ ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಚಿಕಿತ್ಸೆ ಪಡೆದು ಬದುಕುಳಿದಿದ್ದ.

ತನ್ನ ಮಗಳ ಸಾವಿಗೆ ಸಿದ್ದಾರ್ಥ್ ರೆಡ್ಡಿ ಕಾರಣ. ಮಗಳ ಮೇಲೆ ಅತ್ಯಾ*ಚಾರ ನಡೆದಿದೆ. ಇದು ಆತ್ಮಹತ್ಯೆ ಅಲ್ಲ, ಸಂಚುರೂಪಿಸಿ ಮಾಡಿರುವ ಕೊ*ಲೆ ಎಂದು ನಟಿ ಪ್ರತ್ಯೂಷಾ ತಾಯಿ ಸರೋಜಿನಿ ದೂರು ನೀಡಿದ್ದರು. ಸರೋಜಿನಿ ಅವರ ಕಾನೂನು ಹೋರಾಟಕ್ಕೆ ಅಂತಿಮವಾಗಿ ಜಯ ಸಿಕ್ಕಂತಾಗಿದೆ.ಪ್ರತ್ಯುಷಾ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಸಿದ್ದಾರ್ಥ್ ರೆಡ್ಡಿಗೆ ಹೈದರಾಬಾದ್ ಮೆಟ್ರೋಪಾಲಿಟನ್ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಸಿದ್ದಾರ್ಥ್ ಹೈಕೋರ್ಟ್ ಕದ ತಟ್ಟಿದ್ದರು. ಹಾಗಾಗಿ 2011ರಲ್ಲಿ ಸಿದ್ದಾರ್ಥ್ ಜೈಲು ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ 2012ರಲ್ಲಿ ಪ್ರತ್ಯೂಷಾ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 14 ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇತ್ತು. ಕಳೆದ ನವೆಂಬರ್ನಲ್ಲಿ ವಿಚಾರಣೆ ನಡೆದು ಸುಪ್ರೀಂ ಫೆಬ್ರವರಿ 17ಕ್ಕೆ ತೀರ್ಪು ಕಾಯ್ದಿರಿಸಿತ್ತು. ನಟಿ ಪ್ರತ್ಯೂಷಾ ಹಾಗೂ ಆರೋಪಿ ಸಿದ್ದಾರ್ಥ್ ಕಾಲೇಜು ದಿನಗಳಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಆಕೆ ಚಿತ್ರರಂಗದತ್ತ ಮುಖ ಮಾಡುತ್ತಿದ್ದಂತೆ ಸಿದ್ದಾರ್ಥ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಆರಂಭಿಸಿದ್ದ. ಬಳಿಕ ಕೂಡ ಇಬ್ಬರ ಒಡನಾಟ ಮುಂದುವರೆದಿತ್ತು.
ಕೂಲ್ಡ್ರಿಂಕ್ಸ್ನಲ್ಲಿ ವಿಷ ಬೆರಸಿ ಅಂದು ಸಿದ್ದಾರ್ಥ್ ರೆಡ್ಡಿ ಹಾಗೂ ಪ್ರತ್ಯೂಷಾ ಇಬ್ಬರೂ ಕುಡಿದಿದ್ದರು. ಆರ್ಗನೋಫಾಸ್ಫೇಟ್ ಕಾರಣದಿಂದ ಆಕೆ ಮೃತಪಟ್ಟಿರುವುದಾಗಿ ಸರ್ಕಾರ ನಿಯೋಜಿಸಿದ್ದ ಮೂವರು ವೈದ್ಯರ ತಂಡ ವರದಿ ನೀಡಿತ್ತು. ಆಕೆಯ ಮೇಲೆ ಅತ್ಯಾಚಾರ ಪ್ರಯತ್ನ, ಆಕೆಯನ್ನು ಸಾಯಿಸಲು ಉಸಿರುಕಟ್ಟಿಸುವಂತ ಪ್ರಯತ್ನ ಕೂಡ ನಡೆದಿಲ್ಲ ಎಂದು ತಿಳಿಸಿದ್ದರು. ಈ ವರದಿ ಆಧರಿಸಿ ಸಿಬಿಐ 306(ಆತ್ಮಹತ್ಯೆಗೆ ಪ್ರಚೋದನೆ), 309(ಆತ್ಮಹತ್ಯೆ ಯತ್ನ) ಸೆಕ್ಷನ್ ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು. ಬಳಿಕ ಹೈದರಾಬಾದ್ ಮೆಟ್ರೋಪಾಲಿಟನ್ ಕೋರ್ಟ್ ಆರೋಪಿಗೆ ಶಿಕ್ಷೆ ವಿಧಿಸಿತ್ತು.
1998ರಲ್ಲಿ 'ರಾಯುಡು' ಎಂಬ ತೆಲುಗು ಸಿನಿಮಾದಲ್ಲಿ ಪ್ರತ್ಯೂಷಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಳಿಕ ಕೆಲ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಆದರೆ ದಿಢೀರನೆ ಬಾರದಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಸೌಂದರ್ಯ ರೀತಿ ಪಕ್ಕದ್ಮನೆ ಹುಡುಗಿ ರೀತಿಯ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದರು. ಒಂದು ಕನ್ನಡ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು.
ಮರುದಿನ ಕನ್ನಡ ಸಿನಿಮಾ ಬಗ್ಗೆ ಚರ್ಚೆಗೆ ಬೆಂಗಳೂರಿಗೆ ಹೋಗಬೇಕಿತ್ತು. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಕಸೀನ್ ಸಿರಿ ಜೊತೆ ಬ್ಯೂಟಿ ಪಾರ್ಲರ್ಗೆ ಹೋಗಿದ್ದ ಪ್ರತ್ಯೂಷಾ ಕಣ್ಮರೆ ಆಗಿದ್ದಳು ಎಂದು ತಾಯಿ ಸರೋಜಿನಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಆಕೆ ಪಾರ್ಲರ್ನಲ್ಲಿ ಇದ್ದಾಗಲೇ ಸಿದ್ದಾರ್ಥ್ ರೆಡ್ಡಿ ಅಲ್ಲಿಗೆ ಬಂದಿದ್ದಾನೆ. 10 ನಿಮಿಷ ಆತನ ಜೊತೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಸಿರಿಗೆ ಹೇಳಿ ಹೋಗಿದ್ದಾರೆ. ಕೆಲ ನಿಮಿಷಗಳ ಬಳಿಕ ನನಗೆ ಫೋನ್ ಮಾಡಿ "ಜಯಂ ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ಸಿಕ್ಕಿದೆ. ನಿರ್ದೇಶಕ ತೇಜಾ ಕಚೇರಿಗೆ ಹೋಗಿಬರ್ತಿನಿ ಅಂದ್ಲು. ಅದೇ ನನಗೆ ಆಕೆ ಮಾಡಿದ ಕೊನೆಯ ಕರೆ, ಮಾತು.. ಆದರೆ ಪ್ರತ್ಯೂಷಾ ಅಸಲಿಗೆ ನಿರ್ದೇಶಕ ತೇಜಾ ಅವರ ಕಚೇರಿಗೆ ಹೋಗಿರಲಿಲ್ಲ. ಬಳಿಕ ಕರೆ ಮಾಡಿದ್ರು ಆಕೆ ತೆಗೆಯಲಿಲ್ಲ. ಬಳಿಕ ಏನಾಯ್ತೋ ಗೊತ್ತಿಲ್ಲ" ಎಂದಿದ್ದರು.


Click it and Unblock the Notifications











