ಮೌಳಿ ನಿರ್ದೇಶನದಲ್ಲಿ ನಟಿಸೋಕೆ ಒಲ್ಲೆ ಎಂದಿದ್ದ ಸೂರ್ಯ; ಛೇ.. ಯಾವುದು ಆ ಸಿನಿಮಾ?
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ. ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿರುವ ಮೌಳಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. 'RRR' ಬಳಿಕ ಮಹೇಶ್ ಬಾಬು ಕಾಂಬಿನೇಷನ್ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.
'ಸ್ಟೂಡೆಂಟ್ ನಂ. 1' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ರಾಜಮೌಳಿ ಪರಿಚಿತರಾದರು. ತಮ್ಮ ಅದ್ಭುತ ವಿಷನ್, ಮೇಕಿಂಗ್, ಕಥೆ ಹೇಳುವ ಶೈಲಿಯಿಂದ ಜಕ್ಕಣ್ಣ ಅಂತ್ಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. 'ಸಿಂಹಾದ್ರಿ', 'ಛತ್ರಪತಿ', 'ಮಗಧೀರ', 'ವಿಕ್ರಮಾರ್ಕುಡು', 'ಈಗ', 'ಬಾಹುಬಲಿ' ಹೀಗೆ ಅದ್ಭುತ ಸಿನಿಮಾಗಳನ್ನು ಮೌಳಿ ಕಟ್ಟಿಕೊಟ್ಟಿದ್ದಾರೆ. ಎಲ್ಲವೂ ತೆಲುಗು ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾಗಳೇ.

ಮೌಳಿ ನಿರ್ದೇಶನದಲ್ಲಿ ನಟಿಸೋಕೆ ಬಾಲಿವುಡ್ ಸ್ಟಾರ್ಗಳು ಕ್ಯೂ ನಿಂತಿದ್ದಾರೆ. ಜಕ್ಕಣ್ಣ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದರೂ ಸಾಕು ಎಂದುಕೊಳ್ಳುವವರು ಇದ್ದಾರೆ. ಆದರೆ ಮೌಳಿ ಮಾತ್ರ ತಮ್ಮ ಕಥೆಗೆ ಪಾತ್ರಕ್ಕೆ ತಕ್ಕಂತೆ ಕಲಾವಿದರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ಟಾರ್ ನಟರಿಗಾಗಿ ಸಿನಿಮಾ ಮಾಡುವವರಲ್ಲ. 'ಈಗ' ಚಿತ್ರದ ಸುದೀಪ್ ಪಾತ್ರವನ್ನು ಅವರು ಬಿಟ್ಟರೆ ಮತ್ಯಾರೂ ಮಾಡೋಕೆ ಸಾಧ್ಯವಿಲ್ಲ ಎಂದು ಖುದ್ದು ಮೌಳಿ ಹೇಳಿದ್ದರು.
ಬೇರೆ ಭಾಷೆಯ ಕಲಾವಿದರನ್ನು ಕರೆದು ತೆಲುಗು ಚಿತ್ರದಲ್ಲಿ ಮುಖ್ಯವಾದ ಪಾತ್ರಗಳನ್ನು ಕೊಟ್ಟಿದ್ದಾರೆ. ಅವರ ಸಿನಿಮಾಗಳಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಲಾವಿದರು ಕೂಡ ಮೌಳಿ ನಿರ್ದೇಶನದಲ್ಲಿ ನಟಿಸೋಕೆ ಇಷ್ಟಪಡುತ್ತಾರೆ. ಆದರೆ ತಮಿಳು ನಟ ಸೂರ್ಯ ಬಂಗಾರದಂತಹ ಒಂದು ಅವಕಾಶವನ್ನು ಕಳೆದುಕೊಂಡಿದ್ದರು. ತಮ್ಮ ಚಿತ್ರದ ನಾಯಕನ ಪಾತ್ರಕ್ಕೆ ಸೂರ್ಯರನ್ನು ಜಕ್ಕಣ್ಣ ಆಯ್ಕೆ ಮಾಡಿಕೊಂಡಿದ್ದರು. ಆದರೆ ಸೂರ್ಯ ಒಪ್ಪಿದೇ ಕೈಬಿಟ್ಟಿದ್ದರು.

ಒಮ್ಮೆ ವೇದಿಕೆಯಲ್ಲಿ ಖುದ್ದು ಸೂರ್ಯ ಈ ಬಗ್ಗೆ ಬಹಳ ಪಶ್ಚಾತ್ತಾಪ ಪಟ್ಟಿದ್ದರು. ಎಲ್ಲರೂ ಜೀವನದಲ್ಲಿ ತಪ್ಪು ಮಾಡುತ್ತಾರೆ. ನಾನು ಕೂಡ ಒಂದು ತಪ್ಪು ಮಾಡಿದ್ದೆ. ರಾಜಮೌಳಿ ಸರ್ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಒಪ್ಪದೇ ಹಿಂದೇಟು ಹಾಕಿದ್ದೆ. ಬಹಳ ದೊಡ್ಡ ತಪ್ಪು ಅದು. ಸರ್ ಮುಂದೆ ನಿಮ್ಮ ಸಿನಿಮಾದಲ್ಲಿ ಅವಕಾಶ ಇದ್ದರೆ ಹೇಳಿ ಮಾಡ್ತೀನಿ. 'ಬಾಹುಬಲಿ' ಚಿತ್ರದಲ್ಲಿ ಸಣ್ಣ ಪಾತ್ರ ಇದ್ದರೂ ಹೇಳಿ ನಟಿಸೋಕೆ ಸಿದ್ಧ ಎಂದಿದ್ದರು.
ಅಂದಹಾಗೆ ರಾಜಮೌಳಿ ನಿರ್ದೇಶನದಲ್ಲಿ ಸೂರ್ಯ ಕೈಬಿಟ್ಟ ಸಿನಿಮಾ 'ಸೈ'. ಬರೋಬ್ಬರಿ 20 ವರ್ಷಗಳ ಹಿಂದೆ ಈ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಬಂದಿತ್ತು. ನಿತಿನ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. 2004ರಲ್ಲಿ ಬಂದಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ರಗ್ಬಿ ಆಟದ ಸುತ್ತಾ ಸಿನಿಮಾ ಕಥೆ ಸುತ್ತಿತ್ತು. ಕಾಲೇಜ್ ಕ್ಯಾಂಪಸ್ ವಾರ್, ರಗ್ಬಿ, ಲವ್ ಹೀಗೆ ಸಾಕಷ್ಟು ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಾಗಿತ್ತು. ತೆಲುಗಿನಲ್ಲಿ ಮಾತ್ರ ಬಂದಿದ್ದ ಸಿನಿಮಾ ಗೆದ್ದಿತ್ತು.
ಹೀರೊ ನಿತಿನ್ಗೆ 'ಸೈ' ಸಿನಿಮಾ ಒಳ್ಳೆ ಬ್ರೇಕ್ ಕೊಟ್ಟಿತ್ತು. ಆಗಷ್ಟೇ ಹೀರೋ ಆಗಿ ತಮಿಳು ಸಿನಿಮಾಗಳಲ್ಲಿ ಬೆಳೆಯುತ್ತಿದ್ದ ಸೂರ್ಯ ಈ ಸಿನಿಮಾ ಮಾಡಬೇಕಿತ್ತು. ಆತನಿಗೆ ಈ ಕಥೆ ಸೂಕ್ತ ಎಂದು ರಾಜಮೌಳಿ ಕಥೆ ಹೇಳಿದ್ದರು. ಕಾರಣಾಂತರಗಳಿಂದ ಅವರು ಒಪ್ಪಿರಲಿಲ್ಲ. ಬಳಿಕ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ಸೂರ್ಯ ಪಶ್ಚಾತ್ತಾಪಪಡುವಂತಾಗಿತ್ತು.


Click it and Unblock the Notifications











