ಈ ಬಟ್ಟೆ ಹಾಕ್ಕೊಂಡ್ ಬಾ, ನಿನ್ನ ಬಾಡಿ ನೋಡ್ಬೇಕು ಅಂದ್ರು ಮೂವರು- 'ಉತ್ತರಕಾಂಡ' ನಟಿ ಕಹಿ ಅನುಭವ
ಮಹಿಳೆಯರಿಗೆ ಕೆಲಸ ಮಾಡುವ ಸ್ಥಳಗಳಲ್ಲಿ ಸಾಕಷ್ಟು ಬಾರಿ ಕಹಿ ಅನುಭವಗಳಾಗಿರುತ್ತದೆ. ಅದರಲ್ಲೂ ಬಣ್ಣದ ಲೋಕದಲ್ಲಿ ನಟಿಯರಿಗೆ ಇಂತಹ ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತಿರುತ್ತವೆ. ಸಾಕಷ್ಟು ನಟಿಯರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದೀಗ ತಮಿಳು ನಟಿ ಐಶ್ವರ್ಯ ರಾಜೇಶ್ ತಾವು ಎದುರಿಸಿದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಇವತ್ತಿಗೂ ಆ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಚೆನ್ನೈನಲ್ಲಿ ಹುಟ್ಟಿ ಬೆಳೆದ ಐಶ್ವರ್ಯ ರಾಜೇಶ್ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಧನಂಜಯ್ ಹಾಗೂ ಶಿವಣ್ಣ ನಟನೆಯ 'ಉತ್ತರಕಾಂಡ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. 'ಧ್ರುವ ನಕ್ಷತ್ರಿರಂ', 'ಸಂಕ್ರಾಂತಿಗೆ ವಸ್ತುನ್ನಾಂ', 'ವಡ ಚೆನ್ನೈ' ಸೇರಿ ಕೆಲ ಹಿಟ್ ಸಿನಿಮಾಗಳಲ್ಲಿ ಐಶ್ವರ್ಯ ಮಿಂಚಿದ್ದಾರೆ.

ಈ ವರ್ಷ ಐಶ್ವರ್ಯ ನಟನೆಯ 3 ಸಿನಿಮಾಗಳು ತೆರೆಗೆ ಬರುವ ನಿರೀಕ್ಷೆಯಿದೆ. ನಿಖಿಲ್ ವಿಜಯೇಂದ್ರ ಸಿಂಹ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಐಶ್ವರ್ಯಾ ರಾಜೇಶ್ ಭಾಗಿ ಆಗಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಇದೇ ವೇಳೆ ತಾವು ಎದುರಿಸಿದ ಕಹಿ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಹೊಸದಾಗಿ ಬಣ್ಣದಲೋಕಕ್ಕೆ ಬರುವವರನ್ನು ಕೆಲವರು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಇಂತಹ ಕಾಮುಕರು ಎಲ್ಲಾ ಕಡೆಗಳಲ್ಲಿ ಇರುತ್ತಾರೆ. ಚಿತ್ರರಂಗದಲ್ಲಿ ಇವರ ಸಂಖ್ಯೆ ಹೆಚ್ಚಾಗಿರುತ್ತದೆ. ಇನ್ನು ಸಿನಿಮಾಗಳಲ್ಲಿ ನಟಿಸಲು ಆರಂಭಿಸುವ ಮುನ್ನ ಒಮ್ಮೆ ಫೋಟೊ ಶೂಟ್ ಎಂದು ಕರೆದು ತುಂಡು ಬಟ್ಟೆ ಧರಿಸಿ ಬರಲು ಹೇಳಿದ್ದರು ಎಂದು ಐಶ್ವರ್ಯ ಹೇಳಿದ್ದಾರೆ. ಮತ್ತೊಂದು ಸಂದರ್ಭದಲ್ಲಿ ನನ್ನದಲ್ಲದ ತಪ್ಪಿಗೆ ನಿರ್ದೇಶಕ ನನಗೆ ಅವಮಾನ ಮಾಡಿದ್ದರು ಎಂದು ತಿಳಿಸಿದ್ದಾರೆ.

ಐಶ್ವರ್ಯಾ ಮಾತನಾಡಿ "ನಾನು ಚಿತ್ರರಂಗಕ್ಕೆ ಬರುವ ಮುನ್ನ ನಮ್ಮ ಅಣ್ಣನ ಜೊತೆ ಒಂದು ಫೋಟೊಶೂಟ್ಗೆ ಹೋಗಿದ್ದೆ. ನಮ್ಮ ಅಣ್ಣನನ್ನು ಸ್ಟುಡಿಯೋದಿಂದ ಹೊರಗಡೆ ಕೂರಿಸಿ ನನಗೆ ಒಂದು ತುಂಟು ಬಟ್ಟೆ ಕೊಟ್ಟರು. ಇದನ್ನು ಹಾಕ್ಕೊಂಡು ಬಾ, ನಿನ್ನ ಬಾಡಿ ನೋಡಬೇಕು ಎಂದ್ರು. ಯಾವ ಆಂಗಲ್ನಲ್ಲಿ ಹೇಗೆ ಕಾಣ್ತಿಯಾ, ಹೇಗೆ ಫೋಟೊ ಹಿಡಿಯಬಹುದು ಅಂತೆಲ್ಲಾ ಹೇಳ್ತಿದ್ರು. ಮೂವರು ಆ ಬಟ್ಟೆ ಹಾಕಿಕೊಳ್ಳುವಂತೆ ನನ್ನ ಮನವೊಲಿಸುವ ಪ್ರಯತ್ನ ಮಾಡಿದ್ರು.. ನಾನು ಬಹುತೇಕ ಒಪ್ಪಿಕೊಳ್ಳುವ ಹಂತಕ್ಕೆ ಹೋಗಿಬಿಟ್ಟಿದ್ದೆ. ಐದು ನಿಮಿಷ ಇದ್ದಿದ್ದರೆ ಹಾಕಿಕೊಂಡುಬಿಡುತ್ತಿದ್ದೆ ಅನ್ನಿಸುತ್ತದೆ. ಅಷ್ಟರಲ್ಲಿ ನನಗೆ ಏನು ಅನ್ನಿಸಿತೋ ಗೊತ್ತಿಲ್ಲ. ನಮ್ಮ ಅಣ್ಣನ ಅನುಮತಿ ಕೇಳಬೇಕು ಎಂದು ಹೊರಗೆ ಬಂದುಬಿಟ್ಟೆ" ಎಂದಿದ್ದಾರೆ.
ಇದೇ ರೀತಿ ಎಷ್ಟು ಹೆಣ್ಣು ಮಕ್ಕಳಿಗೆ ಹೀಗೆ ನಡೆದಿದ್ಯೋ ಗೊತ್ತಿಲ್ಲ. ಆ ಘಟನೆಯನ್ನು ನನ್ನ ಮನಸ್ಸಿನಲ್ಲೇ ಉಳಿದುಬಿಟ್ಟಿದೆ. ಈ ಬಗ್ಗೆ ಸಾಕಷ್ಟು ಜನರಿಗೆ ಹೇಳಿ ಆ ಫೋಟೊ ಸ್ಟುಡಿಯೋ ಬಗ್ಗೆ ಕಂಪ್ಲೇಟ್ ಮಾಡಿದ್ದೆ ಎಂದು ಐಶ್ವರ್ಯ ವಿವರಿಸಿದ್ದಾರೆ. ಇದೇ ರೀತಿ ಒಮ್ಮೆ ಚಿತ್ರೀಕರಣಕ್ಕೆ ತಡವಾಗಿ ಬಂದಿದ್ದಕ್ಕೆ ನಿರ್ದೇಶಕರೊಬ್ಬರು ಬೈದಿದ್ದರು. ಆ ಘಟನೆಯನ್ನು ಕೂಡ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಬೆಳಗಿನ ಜಾವ 7 ಗಂಟೆ ಸುಮಾರು. ಅಂದು ಸೆಟ್ನಲ್ಲಿ 100 ಜನ ಸಹ ಕಲಾವಿದರಿದ್ದರು. 10 ನಿಮಿಷ ತಡವಾಗಿ ಬಂದಿದ್ದಕ್ಕೆ ನಿರ್ದೇಶಕ ಬೈದಿದ್ದರು. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಮತ್ತೊಬ್ಬ ನಟಿಯ ಜೊತೆ ಹೋಲಿಕೆ ಮಾಡಿ ಮಾತನಾಡಿದ್ದರು. ತಪ್ಪು ಮಾಡದೇ ಇದ್ದರೂ ಅಷ್ಟು ಜನರ ಮುಂದೆ ಬೈದಿದ್ದು ಬೇಸರ ತಂದಿತ್ತು ಎಂದು ಐಶ್ವರ್ಯ ತಿಳಿಸಿದ್ದಾರೆ. ಆಗ ಆಗಿದ್ದಕ್ಕೆ ಪರವಾಗಿಲ್ಲ, ಈಗ ಏನಾದರೂ ಅಂತಹ ಪ್ರಸಂಗ ಎದುರಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಆಕೆ ಹೇಳಿದ್ದಾರೆ.


Click it and Unblock the Notifications











