ವಿಕ್ರಮ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಜತೆ ಪ್ರಭಾಸ್ ಚಿತ್ರ?

ಬಾಹುಬಲಿ ಚಿತ್ರ ಸರಣಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡ ನಟ ರೆಬೆಲ್ ಸ್ಟಾರ್ ಪ್ರಭಾಸ್ ನಂತರ ಅಭಿನಯಿಸಿದ ಚಿತ್ರಗಳಲ್ಲಿ ಬಾಹುಬಲಿ ಚಿತ್ರದ ಮೂಲಕ ಪಡೆದ ಮಟ್ಟಿಗಿನ ಯಶಸ್ಸನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೌದು, ಪ್ರಭಾಸ್ ಅಭಿನಯದ ಸಾಹೋ, ರಾಧೆ ಶ್ಯಾಮ್ ಚಿತ್ರಗಳು ನಿರೀಕ್ಷೆಯನ್ನು ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ.
ಇನ್ನು ಈ ಚಿತ್ರಗಳ ಬಳಿಕ ತಯಾರಾಗಿದ್ದ ಆದಿಪುರುಷ್ ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ಟೀಕೆಗೆ ಒಳಗಾಗಿದೆ. ಈ ಚಿತ್ರದ ಟೀಸರ್ ಬಿಡುಗಡೆಗೊಂಡಾಗ ನೆಟ್ಟಿಗರು ಟೀಸರ್ ಗುಣಮಟ್ಟ ಸರಿ ಇಲ್ಲ ಎಂದು ಕಿಡಿಕಾರಿದ್ದರು. ಹೀಗಾಗಿ ಇದೇ ವರ್ಷ ತೆರೆ ಕಾಣಬೇಕಿದ್ದ ಆದಿಪುರುಷ್ ಚಿತ್ರ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದು, ಚಿತ್ರದ ವಿಎಫ್ಎಕ್ಸ್ ಕೆಲಸಗಳು ಬಾಕಿ ಉಳಿದಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.
ಈ ಮೂಲಕ ಆದಿಪುರುಷ್ ಇಲ್ಲದ ಕಾರಣ ಸಲಾರ್ ಒಂದೇ ಈ ವರ್ಷ ಬಿಡುಗಡೆಗೊಳ್ಳಲಿರುವ ಪ್ರಭಾಸ್ ಅಭಿನಯದ ಚಿತ್ರವಾಗಲಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿರುವುದು ಚಿತ್ರ ಗೆಲ್ಲಲಿದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನು ಸಲಾರ್ ಬಳಿಕ ಪ್ರಭಾಸ್ಗೆ ಮತ್ತೋರ್ವ ಸಕ್ಸಸ್ಫುಲ್ ನಿರ್ದೇಶಕ ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಹಿಂದೆ ತಮಿಳಿನಲ್ಲಿ ಮಾನಗರಮ್, ಖೈದಿ, ಮಾಸ್ಟರ್ ಹಾಗೂ ವಿಕ್ರಮ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಲೋಕೇಶ್ ಕನಗರಾಜ್ ಪ್ರಭಾಸ್ ಮುಂದಿನ ಸಿನಿಮಾದ ನಿರ್ದೇಶಕ ಎನ್ನಲಾಗುತ್ತಿದೆ.
ಇನ್ನು ಹಲವಾರು ಸಿನಿಮಾ ಪರಿಣಿತರು ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, ಈ ಕುರಿತ ಯಾವುದೇ ಅಧಿಕೃತ ಮಾಹಿತಿ ಇನ್ನೂ ಸಹ ಹೊರಬಿದ್ದಿಲ್ಲ.


Click it and Unblock the Notifications











