ಸಂಕ್ರಾಂತಿಗೆ ಬರ್ತಿರೋ 'ರಾಜಾಸಾಬ್', 'ವರಪ್ರಸಾದ್' ಚಿತ್ರಗಳಿಗೆ ತೆಲಂಗಾಣ ಹೈಕೋರ್ಟ್ ರಿಲೀಫ್
ಸುಗ್ಗಿ ಸಂಭ್ರಮದಲ್ಲಿ ಈ ಬಾರಿ ತೆಲುಗಿನ 2 ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿದೆ. 'ದಿ ರಾಜಾಸಾಬ್' ಆಗಿ ಪ್ರಭಾಸ್ ಬರ್ತಿದ್ದಾರೆ. 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ಮೂಲಕ ಚಿರಂಜೀವಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಟಿಕೆಟ್ ದರ ಹೆಚ್ಚಳಕ್ಕೆ ಆಗ್ರಹಿಸಿ ಎರಡೂ ಚಿತ್ರತಂಡ ಕೂಡ ಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ಟಿಕೆಟ್ ದರ ಹೆಚ್ಚಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿಸಲು ಅಷ್ಟು ಸುಲಭವಾಗಿ ಅನುಮತಿ ಸಿಗಲ್ಲ. ಆದರೆ ದೊಡ್ಡ ಸಿನಿಮಾಗಳು ಬಂದಾಗ ಟಿಕೆಟ್ ದರ ಹೆಚ್ಚಿಸಲು, ಪ್ರೀಮಿಯರ್ ಶೋ ಆಯೋಜಿಸಲು ಸರ್ಕಾರಗಳ ಅನುಮತಿ ಪಡೆಯಬೇಕು. ಆಂಧ್ರ ಸರ್ಕಾರ ಸುಲಭವಾಗಿ ಅನುಮತಿ ಕೊಡುತ್ತದೆ. ಆದರೆ ಟಿಕೆಟ್ ದರ ಹೆಚ್ಚಳದ ಕುರಿತಂತೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಅದರ ವಿಚಾರಣೆ ನಡೆಸಿ, ಟಿಕೆಟ್ ದರ ಹೆಚ್ಚಳ ಮಾಡದಂತೆ ಆದೇಶಿಸಿತ್ತು. ಇದು 'ದಿ ರಾಜಾಸಾಬ್' ಹಾಗೂ 'ಮನ ಶಂಕರವರಪ್ರಸಾದ್ ಗಾರು' ಚಿತ್ರಗಳಿಗೆ ಅಡ್ಡಗಾಲಾಗಿ ಪರಿಣಮಿಸಿತ್ತು.

ಭಾರೀ ಬಜೆಟ್ ಸಿನಿಮಾಗಳಾಗಿರುವುರಿಂದ ಟಿಕೆಟ್ ದರ ಹೆಚ್ಚಿಸಲು, ಪ್ರೀಮಿಯರ್ ಶೋ ಆಯೋಜಿಸಲು ಅನುಮತಿ ಬೇಕು ಎಂದು ಎರಡೂ ಚಿತ್ರತಂಡಗಳು ಕೋರ್ಟ್ ಮೆಟ್ಟಿಲೇರಿದ್ದವು. ಹೆಚ್ಚು ಬಜೆಟ್ ಹಾಕಿದ್ದೇವೆ. ಸಾಮಾನ್ಯ ಟಿಕೆಟ್ ದರದಲ್ಲಿ ಸಿನಿಮಾ ಪ್ರದರ್ಶನ ಮಾಡಿದರೆ ನಷ್ಟವಾಗುತ್ತದೆ ಎಂದು ಆಗ್ರಹ ವ್ಯಕ್ತಪಡಿಸಿದ್ದರು. ಸದ್ಯ ಅರ್ಜಿಯ ವಿಚಾರಣೆ ನಡೆಸಿ ಕೋರ್ಟ್ ರಿಲೀಫ್ ಕೊಟ್ಟಿದೆ. ಎರಡೂ ಸಿನಿಮಾಗಳು ಟಿಕೆಟ್ ದರ ಹೆಚ್ಚಿಸಲು, ಫ್ಯಾನ್ಸ್ ಶೋ ಏರ್ಪಡಿಸಲು ಅನುಮತಿ ಸಿಕ್ಕಿದೆ.
ವಿಚಾರಣೆಯಲ್ಲಿ ನಿರ್ಮಾಪಕರ ಪರ ವಕೀಲರು ಪ್ರಮುಖ ವಿಚಾರಗಳನ್ನು ಕೋರ್ಟ್ ಮುಂದಿಟ್ಟು ವಾದಿಸಿದ್ದರು. ಟಿಕೆಟ್ ದರ ಏರಿಕೆ ಮತ್ತು ಪ್ರೀಮಿಯರ್ ಶೋಗಳಿಗೆ ಅನುಮತಿ ನೀಡುವಂತೆ ರಾಜ್ಯ ಗೃಹ ಕಾರ್ಯದರ್ಶಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಸರ್ಕಾರವು ಆ ಅರ್ಜಿಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಆದೇಶಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಚಿತ್ರದ ಬಿಡುಗಡೆ ದಿನಾಂಕಗಳು ಸಮೀಪಿಸುತ್ತಿರುವುದರಿಂದ ಈ ಅರ್ಜಿಗಳನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ದರು.

ಟಿಕೆಟ್ ದರ ಹೆಚ್ಚಿಸುವುಕ್ಕೆ ಅವಕಾಶ ಇಲ್ಲ ಎಂದು ಈ ಹಿಂದೆ ಏಕ ಸದಸ್ಯ ಪೀಠ ನೀಡಿದ್ದ ಆದೇಶ ಈಗ ಬಿಡುಗಡೆಯಾಗುತ್ತಿರುವ ಚಿತ್ರಗಳಿಗೆ ಅನ್ವಯಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಹಾಗಾಗಿ ಚಿರಂಜೀವಿ ಹಾಗೂ ಪ್ರಭಾಸ್ ಸಿನಿಮಾಗಳಿಗೆ ಆನೆಬಲ ಬಂದಂತೆ ಆಗಿದೆ. ಜನವರಿ 9ರಂದು ಮಾರುತಿ ನಿರ್ದೇಶನದ 'ದಿ ರಾಜಾಸಾಬ್' ಸಿನಿಮಾ ತೆರೆಗೆ ಬರ್ತಿದೆ.
ಅನಿಲ್ ರಾವಿಪುಡಿ ನಿರ್ದೇಶನದ ಕಾಮಿಡಿ ಸಿನಿಮಾ 'ಮನ ಶಂಕರವರಪ್ರಸಾದ್ ಗಾರು' ಜನವರಿ 12ಕ್ಕೆ ಬಿಡುಗಡೆ ಆಗುತ್ತಿದೆ. ಎರಡೂ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಂಕ್ರಾಂತಿ ಹಬ್ಬದ 3 ದಿನಗಳ ರಜೆ ಸಮಯದಲ್ಲಿ ಜನ ದೊಡ್ಡಮಟ್ಟಕ್ಕೆ ಬಂದು ಸಿನಿಮಾ ನೋಡಿ ಗೆಲ್ಲಿಸುವ ಲೆಕ್ಕಾಚಾರ ಶುರುವಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ದಿ ರಾಜಾಸಾಬ್' ಸಿನಿಮಾ ಬಿಡುಗಡೆ ಆಗಲಿದೆ. ಈ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಸಂಜಯ್ ದತ್ ಕೂಡ ನಟಿಸಿದ್ದಾರೆ. ನಿಧಿ ಅಗರ್ವಾರ್, ಮಾಳವಿಕಾ ಮೋಹನನ್, ರಿದ್ದಿ ಕುಮಾರ್ ತಾರಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ.
'ಮನ ಶಂಕರವರಪ್ರಸಾದ್ ಗಾರು' ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಮಿಂಚಿದ್ದಾರೆ. ವಿಕ್ಟರಿ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಸಂಕ್ರಾಂತಿ ಅನಿಲ್ ರಾವಿಪುಡಿ ಹಿಟ್ ಸಿನಿಮಾ ಕೊಟ್ಟಿದ್ದರು. ಹಾಗಾಗಿ ಈ ಬಾರಿ ಕೂಡ ಅದೇ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications











