ಅವತ್ತು ಅಲ್ಲು ಅರ್ಜುನ್ ಹಂಗಾಮಾ ಮಾಡಿದ್ದಕ್ಕೆ ಇಷ್ಟೆಲ್ಲಾ ಆಯ್ತು; ತೆಲಂಗಾಣ ಸಿಎಂ ಪ್ರತಿಕ್ರಿಯೆ
ತೆಲುಗು ನಟ ಅಲ್ಲು ಅರ್ಜುನ್ ಬಂಧನವಾಗಿ ಒಂದು ದಿನ ಜೈಲು ಸೇರಿ ಬಳಿಕ ಮಧ್ಯಂತರ ಜಾಮೀನು ಪಡೆದು ಬಿಡುಗಡೆ ಆಗಿದ್ದಾರೆ. ಡಿಸೆಂಬರ್ 4ರಂದು ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಈ ಸಂಕಷ್ಟ ಎದುರಾಗಿತ್ತು. ಅಂದು ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಮಗ ಗಾಯಗೊಂಡಿದ್ದಾನೆ.
ಅಲ್ಲು ಅರ್ಜುನ್ ಬಂಧನ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದೆ. ಬೇಕೆಂದೇ ನಟನನ್ನು ಈ ಪ್ರಕರಣದಲ್ಲಿ ಬಂಧಿಸುವ ಮಟ್ಟಿಗೆ ಹೋಗಿದ್ದಾರೆ ಎಂದು ತೆಲಂಗಾಣ ಸರ್ಕಾರದ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ವಿರೋಧ ಪಕ್ಷದ ನಾಯಕರು ದೂಷಿಸುತ್ತಿದ್ದಾರೆ. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಹೋಗಿದ್ದಾರೆ. ಅಲ್ಲಿ ಕಾಲ್ತುಳಿತವಾಗಿ ಮಹಿಳೆ ಮೃತಪಟ್ಟಿದ್ದು ಬೇಸರದ ಸಂಗತಿ. ಆದರೂ ಎ11 ಅಲ್ಲು ಅರ್ಜುನ್ ಅವರನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ಯುವ ಅವಶ್ಯಕತೆ ಇರಲಿಲ್ಲ. ಅದು ಕೂಡ ಮನೆಯ ಬೆಡ್ರೂಮ್ವರೆಗೂ ಪೊಲೀಸರು ಹೋಗುವುದು ಬೇಕಿರಲಿಲ್ಲ. ಇದರಲ್ಲಿ ವೈಯಕ್ತಿಕ ದ್ವೇಷ ಕಾಣುತ್ತಿದೆ ಎನ್ನುವ ಚರ್ಚೆ ನಡೀತಿದೆ.
ಸದ್ಯ ಅಲ್ಲು ಅರ್ಜುನ್ ಬಂಧನದ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಅಲ್ಲು ಅರ್ಜುನ್ ಬಗ್ಗೆ ನನಗೆ ಯಾಕೆ ದ್ವೇಷ? ಅವರ ಮಾವ ಚಿರಂಜೀವಿ ಕೂಡ ನಮ್ಮ ಕಾಂಗ್ರೆಸ್ ಪಕ್ಷದಲ್ಲೇ ಗುರ್ತಿಸಿಕೊಂಡಿದ್ದಾರೆ. ಅಂದು ಚಿತ್ರಮಂದಿರದಲ್ಲಿ ಅಲ್ಲು ಅರ್ಜುನ್ ಹಂಗಾಮಾ ಮಾಡದೇ ಇದ್ದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದಿದ್ದಾರೆ.
"ಈ ದೇಶದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್ ಯಾಕೆ ಬಂಧನವಾಗಿದ್ದರು, ಈ ದೇಶದಲ್ಲಿ ಸಾಮಾನ್ಯ ಪ್ರಜೆಯಿಂದ ಪ್ರಧಾನಿವರೆಗೆ ಕಾನೂನು ಎಲ್ಲರಿಗೂ ಒಂದೇ. 'ಪುಷ್ಪ-2' ಚಿತ್ರಕ್ಕೆ ಬೆನಿಫಿಟ್ ಶೋ ಜೊತೆಗೆ ಟಿಕೆಟ್ ದರ ಹೆಚ್ಚಿಸಲು ನಾವೇ ಅನುಮತಿ ಕೊಟ್ಟಿದ್ದೆವು. ಆದರೆ ಪ್ರೀಮಿಯರ್ ಶೋಗೆ ಯಾವುದೇ ಮಾಹಿತಿ ನೀಡದೇ ಅಲ್ಲು ಅರ್ಜುನ್ ಬಂದರು. ಆಗ ಕಾಲ್ತುಳಿಯ ಉಂಟಾಗಿ ಮಹಿಳೆ ಮೃತಪಟ್ಟಿದ್ದಾರೆ. ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ" ಎಂದಿದ್ದಾರೆ.
"ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿ, 11 ದಿನಗಳ ಬಳಿಕ ಅಲ್ಲು ಅರ್ಜುನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ಬೇಲ್ ಸಹ ಸಿಕ್ಕಿದೆ. ಆದರೆ ಬೇಕಂತಲೇ ಬಂಧಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆತನ ನಟನಾ? ರಾಜಕೀಯ ವ್ಯಕ್ತಿನಾ? ಎನ್ನುವುದಲ್ಲ, ತಪ್ಪು ಯಾರು ಮಾಡಿದ್ದಾರೆ ಎನ್ನುವುದನ್ನು ನೋಡುತ್ತೇವೆ. ಅವತ್ತು ಅಲ್ಲು ಅರ್ಜುನ್ ಸುಮ್ಮನೆ ಸಿನಿಮಾ ನೋಡಿ ಹೋಗಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ" ಎಂದು ತಿಳಿಸಿದ್ದಾರೆ.
"ಅಲ್ಲು ಅರ್ಜುನ್ ಅವತ್ತು ಸುಮ್ಮನೆ ಬಂದು ಸಿನಿಮಾ ನೋಡಿ ಹೋಗಬೇಕಿತ್ತು. ಅದು ಬಿಟ್ಟು ಕಾರ್ ಏರಿ ಅಭಿಮಾನಿಗಳ ಕಡೆ ಕೈಬೀಸುತ್ತಾ ರ್ಯಾಲಿ ರೀತಿ ಸನ್ನಿವೇಶ ಸೃಷ್ಟಿಸಿದ್ದರು. ಈ ಹಂಗಾಮಾದಿಂದಲೇ ಕಾಲ್ತುಳಿತ ಉಂಟಾಗಿ ಒಬ್ಬ ಮಹಿಳೆ ಪ್ರಾಣಬಿಟ್ರು. ಅಲ್ಲು ಅರ್ಜುನ್ ಸಿನಿಮಾ ನೋಡಬೇಕು ಎಂದುಕೊಂಡಿದ್ದರೆ ಯಾವುದಾದರೂ ಸ್ಟುಡಿಯೋದಲ್ಲೋ, ತಮ್ಮ ಮನೆಯಲ್ಲೋ ನೋಡಬಹುದಿತ್ತು. ಕೊನೆ ಪಕ್ಷ ಚಿತ್ರಮಂದಿರಕ್ಕೆ ಹೋಗುವಂತಿದ್ದರೆ ಪೊಲೀಸ್ ಭದ್ರತೆ ಪಡೆಯಬೇಕಿತ್ತು. ಅಲ್ಲು ಅರ್ಜುನ್ ಚಿಕ್ಕಂದಿನಿಂದ ನನಗೆ ಗೊತ್ತು. ಸುಖಾ ಸುಮ್ಮನೆ ಯಾಕೆ ಬಂಧಿಸುತ್ತಾರೆ ಹೇಳಿ" ಎಂದು ರೇವಂತ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆ ಅಲ್ಲು ಅರ್ಜುನ್ ಚಂಚಲಗೂಡ್ ಜೈಲಿನಲ್ಲಿ ಒಂದು ರಾತ್ರಿ ಕಳೆದು ಬಿಡುಗಡೆ ಆಗಿದ್ದಾರೆ. ಅಲ್ಲು ಅರ್ಜುನ್ಗೆ 7697 ಖೈದಿ ಸಂಖ್ಯೆ ನೀಡಲಾಗಿತ್ತು. ಸದ್ಯ ತಮ್ಮ ಗೀತಾ ಆರ್ಟ್ಸ್ ಕಛೇರಿಗೆ ತೆರಳಿರುವ ಅಲ್ಲು ಅರ್ಜುನ್ ಅಲ್ಲಿಂದ ಮಾವನ ಮನೆಗೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











