ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್: 'ವಕೀಲ್ ಸಾಬ್'ಗೆ ತೀವ್ರ ಸಂಕಷ್ಟ
ನಟ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ತೆಲುಗು ಸಿನಿಮಾ ಏಪ್ರಿಲ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮುನ್ನವೇ ಸಿನಿಮಾಕ್ಕೆ ಹಲವು ಸಂಕಷ್ಟಗಳು ಎದುರಾಗಿವೆ.
ಪವನ್ ಕಲ್ಯಾಣ್ಗೆ ಸಾಕಷ್ಟು ಅಭಿಮಾನಿಗಳಿರುವ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಬಂದ್ ಆಗಿದ್ದು ಮಹಾರಾಷ್ಟ್ರದ ಯಾವ ಚಿತ್ರಮಂದಿರದಲ್ಲಿಯೂ 'ವಕೀಲ್ ಸಾಬ್' ಬಿಡುಗಡೆ ಆಗುತ್ತಿಲ್ಲ.
ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮಾರುಕಟ್ಟೆಯನ್ನೇ ನಂಬಿ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆಗುತ್ತಿದ್ದು, ತೆಲಂಗಾಣದಲ್ಲಿ 'ವಕೀಲ್ ಸಾಬ್'ಗೆ ಭಾರಿ ಹಿನ್ನಡೆ ಆಗುವ ಸೂಚನೆ ಸಿಕ್ಕಿದೆ.
ತೆಲಂಗಾಣ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ತೆಲಂಗಾಣ ಹೈಕೋರ್ಟ್, 'ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರ್ಕಾರ ಏಕೆ ಕಣ್ಣು ಮುಚ್ಚಿ ಕೂತಿದೆ. ಚಿತ್ರಮಂದಿರಗಳು, ಬಾರು, ರೆಸ್ಟೊರೆಂಟುಗಳ ಮೇಲೆ ಏಕೆ ನಿರ್ಬಂಧ ಹೇರಿಲ್ಲ' ಎಂದು ಪ್ರಶ್ನೆ ಮಾಡಿದೆ. ಅಷ್ಟೇ ಅಲ್ಲದೆ 48 ಗಂಟೆಗಳ ಒಳಗಾಗಿ ಈ ಕುರಿತು ವರದಿ ಸಲ್ಲಿಸಲು ಸೂಚಿಸಿದೆ.

ಹೈಕೋರ್ಟ್ಗೆ ವರದಿ ಸಲ್ಲಿಸಲಿದೆ ತೆಲಂಗಾಣ ಸರ್ಕಾರ
ಹೈಕೋರ್ಟ್ ಸೂಚನೆಗೆ ಮನ್ನಣೆ ನೀಡಿ ತೆಲಂಗಾಣ ಸರ್ಕಾರವು ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿದಲ್ಲಿ 'ವಕೀಲ್ ಸಾಬ್'ಗೆ ಭಾರಿ ನಷ್ಟವಾಗಲಿದೆ. ಏಪ್ರಿಲ್ 9 ರಂದು 'ವಕೀಲ್ ಸಾಬ್' ಬಿಡುಗಡೆ ಆಗುತ್ತಿದ್ದು ಅದೇ ದಿನವೇ ತೆಲಂಗಾಣ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಹೈಕೋರ್ಟ್ಗೆ ವರದಿ ಸಲ್ಲಿಸಬೇಕಿದೆ.

ಏಪ್ರಿಲ್ 7 ರ ಕರ್ನಾಟಕದಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ?
ಇನ್ನು ಕರ್ನಾಟಕದಲ್ಲಿಯೂ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಏಪ್ರಿಲ್ 07 ರ ವರೆಗೆ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸರ್ಕಾರವು ಅನುಮತಿ ನೀಡಿತ್ತು, ಏಪ್ರಿಲ್ 07 ರ ನಂತರ ಹೊಸ ಮಾರ್ಗಸೂಚಿ ಹೊರಡಿಸುವುದಾಗಿ ಸರ್ಕಾರ ಹೇಳಿತ್ತು. ನಾಳೆಯಿಂದ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಅವಕಾಶ ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಹಾಗೇನಾದರೂ ಆದಲ್ಲಿ ಕರ್ನಾಟಕದಲ್ಲಿ 'ವಕೀಲ್ ಸಾಬ್'ಗೆ ನಿರೀಕ್ಷಿತ ಕಲೆಕ್ಷನ್ ಆಗುವುದಿಲ್ಲ.

ಮತದಾನದ ಬಳಿಕ ಚಿತ್ರಮಂದಿರಗಳ ಮೇಲೆ ನಿರ್ಬಂಧ ಸಾಧ್ಯತೆ
ಇನ್ನು ಕೇರಳದಲ್ಲಿಯೂ ಪವನ್ ಕಲ್ಯಾಣ್ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ ಅಲ್ಲಿಯೂ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ದಟ್ಟವಾಗಿದೆ. ಕೇರಳದಲ್ಲಿ ಚುನಾವಣೆ ನಡೆಯುತ್ತಿದ್ದು ಮತದಾನ ಮುಗಿದ ಬಳಿಕ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂಬ ಸುದ್ದಿ ಮುಂಚಿನಿಂದಲೂ ಹರಿದಾಡುತ್ತಲೇ ಇತ್ತು. ಇದೀಗ ನಿನ್ನೆಯಷ್ಟೆ (ಏಪ್ರಿಲ್ 06) ಮತದಾನ ಮುಗಿದಿದ್ದು, ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ದಟ್ಟ.
Recommended Video

ಮೂರು ವರ್ಷಗಳ ಬಳಿಕ ತೆರೆಮೇಲೆ ಕಾಣಿಸಿಕೊಳ್ಳಲಿರುವ ಪವನ್
ಪ್ರಸ್ತುತ ಆಂಧ್ರಪ್ರದೇಶದಲ್ಲಷ್ಟೆ 'ವಕೀಲ್ ಸಾಬ್' ಸಿನಿಮಾ ನಿರಾಳವಾಗಿ ಪ್ರದರ್ಶನ ಕಾಣಬಹುದಾಗಿದೆ. ಅಲ್ಲಿಯೂ ಯಾವ ಸಮಯದಲ್ಲಿ ಏನಾಗಬಹುದು ಊಹಿಸುವುದು ಕಷ್ಟ. ಇನ್ನು 'ವಕೀಲ್ ಸಾಬ್' ವಿಷಯಕ್ಕೆ ಮರಳುವುದಾದರೆ. ಈ ಸಿನಿಮಾ ಮೂಲಕ ಮೂರು ವರ್ಷಗಳ ನಂತರ ಪವನ್ ಕಲ್ಯಾಣ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾವನ್ನು ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











