Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲಂಗಾಣ ಹೈಕೋರ್ಟ್ ಆದೇಶದಿಂದ ತೆಲುಗು ಚಿತ್ರರಂಗ ನಿರಾಳ
ಭಾರಿ ಬಜೆಟ್ ಸಿನಿಮಾಗಳನ್ನು ಮಡಿಲಲ್ಲಿಟ್ಟು ಕುಳಿತಿರುವ ತೆಲುಗು ಚಿತ್ರರಂಗಕ್ಕೆ ಚಿತ್ರಮಂದಿರಗಳ ಟಿಕೆಟ್ ಬೆಲೆ ಮತ್ತು ಅದರ ಸುತ್ತಣ ರಾಜಕೀಯದಿಂದ ತೀವ್ರ ಆತಂಕ ಎದುರಾಗಿತ್ತು. ಆದರೆ ತೆಲಂಗಾಣ ಹೈಕೋರ್ಟ್ ನೀಡಿರುವ ಆದೇಶ ಚಿತ್ರರಂಗ ತುಸು ನಿರಾಳಗೊಳ್ಳುವಂತೆ ಮಾಡಿದೆ.
ಚಿತ್ರಮಂದಿರಗಳ ಟಿಕೆಟ್ ಬೆಲೆಯನ್ನು ಏರಿಸಬೇಕು ಎಂದು ತೆಲುಗು ಚಿತ್ರರಂಗ ಗಣ್ಯರು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸಿಎಂ ಅವರಲ್ಲಿ ಮನವಿ ಮಾಡಿದ್ದರು. ಆದರೆ ಆಂಧ್ರ ಪ್ರದೇಶದಲ್ಲಿ ಈ ಮನವಿಯು ರಾಜಕೀಯ ತಿರುವು ಪಡೆದುಕೊಂಡಿತು. ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ನೀಡದ ಸಿಎಂ ಜಗನ್ ಮೋಹನ್ ರೆಡ್ಡಿ, ಸರ್ಕಾರವೇ ಇನ್ನು ಮುಂದೆ ಟಿಕೆಟ್ ಮಾರಾಟ ಮಾಡುತ್ತದೆ ಎಂದಿದ್ದರು. ಇದು ಚಿತ್ರರಂಗ ಹಾಗೂ ಸರ್ಕಾರದ ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು.
ಇನ್ನು ತೆಲಂಗಾಣದ ಸಿಎಂ ಕೆಸಿಆರ್, ಚಿತ್ರರಂಗದ ಮನವಿ ಕುರಿತಂತೆ ನಿರ್ಲಿಪ್ತ ಧೋರಣೆ ತಳೆದಿದ್ದರು. ನಂತರ ಚಿತ್ರಮಂದಿರ ಮಾಲೀಕರು ತಾವುಗಳು ಬಿಗ್ ಬಜೆಟ್ ಸಿನಿಮಾಗಳಿಗೆ ಚಿತ್ರಮಂದಿರ ಟಿಕೆಟ್ ದರ ಹೆಚ್ಚಿಸುತ್ತೇವೆ ಎಂದಿದ್ದರು. ಅದಕ್ಕೂ ಸರ್ಕಾರ ಪ್ರತಿಕ್ರಿಯಿಸಿರಲಿಲ್ಲ. ಹಾಗಾಗಿ ಚಿತ್ರಮಂದಿರ ಮಾಲೀಕರ ಸಂಘವು ಹೈಕೋರ್ಟ್ ಮೊರೆ ಹೋಗಿತ್ತು.
ಚಿತ್ರಮಂದಿರ ಮಾಲೀಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ತೆಲಂಗಾಣ ಹೈಕೋರ್ಟ್ ಬಿಡುಗಡೆ ಆಗಲಿರುವ ಹೊಸ ಸಿನಿಮಾಗಳಿಗೆ ಚಿತ್ರಮಂದಿರಗಳ ಟಿಕೆಟ್ ದರವನ್ನು ಹೆಚ್ಚಳ ಮಾಡಲು ಅನುಮತಿ ನೀಡಿದೆ. ಚಿತ್ರಮಂದಿರಗಳ ಎಲ್ಲ ಕ್ಲಾಸ್ಗಳ ಟಿಕೆಟ್ ದರವನ್ನು ಪ್ರತಿ ಟಿಕೆಟ್ಗೆ ರುಪಾಯಿ 50ರ ವರೆಗೆ ಹೆಚ್ಚಳ ಮಾಡಬಹುದಾಗಿದೆ. ಹೆಚ್ಚಳ ಮಾಡುವ ದರ ರು 50 ಅನ್ನು ದಾಟುವಂತಿಲ್ಲ.
ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಟಿಕೆಟ್ ದರವನ್ನು ಸರ್ಕಾರವೇ ನಿರ್ಧರಿಸುತ್ತದೆ. ಟಿಕೆಟ್ ವಿತರಣೆ ಅಷ್ಟೆ ಚಿತ್ರಮಂದಿರಗಳ ಕೆಲಸವಾಗಿರುತ್ತದೆ. ಹೈಕೋರ್ಟ್ನಲ್ಲಿ ಚಿತ್ರಮಂದಿರ ಮಾಲೀಕರ ಪರವಾಗಿ ವಾದ ಮಂಡಿಸಿದ ವಕೀಲ ದುರ್ಗಾ ಪ್ರಸಾದ್, ''2017 ರಲ್ಲಿ ಹೊರಡಿಸಲಾಗಿರುವ ಸರ್ಕಾರಿ ಆದೇಶ 75 ಜಾರಿ ಆಗದೇ ಇರುವ ಕಾರಣದಿಂದ ಚಿತ್ರಮಂದಿರಗಳು ಟಿಕೆಟ್ ದರ ಹೆಚ್ಚಳ ಮಾಡಲು ಸಾಧ್ಯವಾಗಿಲ್ಲ. ಚಿತ್ರಮಂದಿರಗಳ ಲಾಭ-ನಷ್ಟ ಬಹಳಷ್ಟು ವ್ಯತ್ಯಾಸ ಆಗುತ್ತಿರುವ ಕಾರಣ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ'' ಎಂದು ಮನವಿ ಮಾಡಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಕೀಲ ಜಿ.ಎಲ್.ನರಸಿಂಹ ರಾವ್, ''ವಿಚಾರಣೆಯ ಆದೇಶ ನೀಡುವ ಮೊದಲು ಸಿನಿಮಾ ಪ್ರೇಕ್ಷಕರ ಪರವಾಗಿ ನಾನು ಸಲ್ಲಿಸಿರುವ ಪಿಟಿಶನ್ ಅನ್ನು ಪರಿಗಣಿಸಬೇಕು'' ಎಂದು ಒತ್ತಾಯಿಸಿದರು. ಆದರೆ ನ್ಯಾಯಾಲಯವು ಇದಕ್ಕೆ ಸಮ್ಮತಿ ಸೂಚಿಸಲಿಲ್ಲ. ಬದಲಿಗೆ ನಿಮ್ಮ ಪಿಟಿಶನ್ ಅನ್ನು ಮುಂದಿನ ದಿನಗಳಲ್ಲಿ ವಿಚಾರಣೆ ಮಾಡಬಹುದು ಎಂದಿತು. ಜೊತೆಗೆ ಟಿಕೆಟ್ ದರ ಏರಿಸುವ ಚಿತ್ರಮಂದಿರಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿತು. ಅಲ್ಲದೆ ಪೊಲೀಸರು ಹಾಗೂ ರಾಜ್ಯ ಸರ್ಕಾರವು, ಚಿತ್ರಮಂದಿರಗಳು ಟಿಕೆಟ್ ದರ ಏರಿಸುವಲ್ಲಿ ಸಹಕರಿಸಬೇಕು ಎಂದರು.
ಆದರೆ ತೆಲಂಗಾಣ ರಾಜ್ಯದಲ್ಲಿ ಮಾತ್ರವೇ ಟಿಕೆಟ್ ದರ ಏರಿಸಲು ಚಿತ್ರಮಂದಿರಗಳಿಗೆ ಅನುಮತಿ ದೊರೆತಿದೆ. ಆಂಧ್ರ ಪ್ರದೇಶದಲ್ಲಿ ಈ ಅನುಮತಿ ಸಿಕ್ಕಿಲ್ಲ. ಅಲ್ಲಿ ಈ ಹಿಂದಿನ ದರಕ್ಕೆ ಟಿಕೆಟ್ಗಳು ಬಿಕರಿಯಾಗುತ್ತವೆ. ಜಗನ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರಮಂದಿರದ ಟಿಕೆಟ್ಗಳನ್ನು ಆನ್ಲೈನ್ ವ್ಯವಸ್ಥೆ ಮೂಲಕ ತಾನೇ ವಿತರಣೆ ಮಾಡಲು ಮುಂದಾಗಿದೆ. ಇದಕ್ಕೆ ಚಿತ್ರರಂಗ ಹಾಗೂ ಚಿತ್ರಮಂದಿರಗಳ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.