'RRR' ವಿರುದ್ಧ ವಿದ್ಯಾರ್ಥಿನಿ ದೂರು: ಅರ್ಜಿ ವಜಾ ಮಾಡಿದ ನ್ಯಾಯಾಲಯ
'RRR' ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿಯಬೇಕೆಂದು ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ವಜಾ ಮಾಡಿದೆ.
ತೆಲುಗು ರಾಜ್ಯಗಳ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರು ಬ್ರಿಟೀಷರ ಅಡಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಮೂಲಕ ಅಲ್ಲೂರಿ ಸೀತಾರಾಮ ರಾಜು ಅವರ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ. ಅವರ ವ್ಯಕ್ತಿತ್ವವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಹಾಗಾಗಿ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬಾಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ವಜಾ ಮಾಡಿದೆ.
'RRR' ಸಿನಿಮಾದ ವಿರುದ್ಧ ಈ ಹಿಂದೆಯೂ ಕೆಲವು ಆರೋಪಗಳು ದೂರುಗಳು ಕೇಳಿ ಬಂದಿದ್ದವು. ಈ ಸಿನಿಮಾವು ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳು ಜೀವನ ಆಧರಿಸಿದ್ದು, ಸಿನಿಮಾದಲ್ಲಿ ಕೋಮರಂ ಭೀಮ್ ಅನ್ನು ಮುಸ್ಲಿಂ ವ್ಯಕ್ತಿಯಾಗಿ ಚಿತ್ರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು.

ಬಳಿಕ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿ, ಪೂರ್ಣ ಸಿನಿಮಾ ನೋಡಿದ ಬಳಿಕ ಆರೋಪ ಮಾಡಿ ಎಂದು ಮನವಿ ಮಾಡಿತ್ತು. ಅಲ್ಲದೆ ಇದು ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ನಿಜ ಕತೆಯಲ್ಲ. ಇತಿಹಾಸ ಕೆದಕಿದರೆ ಕೆಲವು ವರ್ಷಗಳ ಇಬ್ಬರೂ ಮರೆಯಾಗಿದ್ದರು ಎಂಬ ಮಾಹಿತಿ ಸಿಗುತ್ತದೆ. ಇತಿಹಾಸ ದಾಖಲಿಸದ ಆ ಸಮಯದಲ್ಲಿ ಇವರಿಬ್ಬರ ಜೀವನದಲ್ಲಿ ಏನಾಗಿರಬಹುದು ಎಂಬ ಊಹೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂದು ಹೇಳಲಾಗಿದೆ.
RRR ಸಿನಿಮಾ ಬಿಡುಗಡೆಗೆ ಸರ್ವ ಸಜ್ಜಾಗಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾ ಒಂದು ಸೆಟ್ಟೇರಾಗುತ್ತಿದ್ದಂತೆ ಅದರ ಕಾಲೆಳೆಯಲು ಕೆಲವರು ತಯಾರಾಗಿರುತ್ತಾರೆ. ಕನ್ನಡದ 'ಕೆಜಿಎಫ್'ಗೂ ಇದೇ ಸಮಸ್ಯೆ ಎದುರಾಗಿತ್ತು.
ಕಳೆದ ತಿಂಗಳು ಬಿಡುಗಡೆ ಆಗಿದ್ದ ಬಾಲಿವುಡ್ನ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಮೇಲೂ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೂಡಿದ್ದರು. ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು. ಆದರೆ ಸಿನಿಮಾ ಬಿಡುಗಡೆಗೆ ತಡೆ ನೀಡಲು ನ್ಯಾಯಾಲಯವು ನಿರಾಕರಿಸಿತ್ತು.


Click it and Unblock the Notifications











