ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆಗೆ ವಿರೋಧ- ಕಾರಣವೇನು?
ಭಾರತೀಯ ಚಿತ್ರರಂಗದ ಸಂಗೀತ ಲೋಕದಲ್ಲಿ ಎಂದಿಗೂ ಮಾಸದ ಧ್ವನಿ ಎಂದರೆ ಅದು ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ. 40,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ, ಎಲ್ಲಾ ಭಾಷೆಗಳ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಈ ಶ್ರೇಷ್ಠ ಗಾಯಕರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸಾಧನೆಗೆ ಸಂದ ಗೌರವವಾಗಿ ಇತ್ತೀಚೆಗೆ ತೆಲಂಗಾಣ ಸರ್ಕಾರವು ಹೈದರಾಬಾದ್ನ ರವೀಂದ್ರ ಭಾರತಿಯಲ್ಲಿ ಎಸ್.ಪಿ.ಬಿ ಅವರ ಪ್ರತಿಮೆಯನ್ನು ಸ್ಥಾಪಿಸಿತು. ಇದು ನಿಜಕ್ಕೂ ಸಂಗೀತಪ್ರಿಯರಿಗೆ ಸಂತಸದ ವಿಷಯವಾಗಿತ್ತು.
ಆದರೆ ಈ ಸಂತೋಷ ಕೆಲವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಅತ್ಯಂತ ಅನಿರೀಕ್ಷಿತವಾಗಿ ಪ್ರತಿಭಟನಾಕಾರರ ಗುಂಪೊಂದು ಈ ಪ್ರತಿಮೆಯ ಸ್ಥಾಪನೆಯನ್ನು ತೀವ್ರವಾಗಿ ವಿರೋಧಿಸಿದೆ. ತಾವು ತೆಲಂಗಾಣ ಚಳವಳಿಯ ಕಾರ್ಯಕರ್ತರು ಎಂದು ಹೇಳಿಕೊಂಡ ಈ ಗುಂಪು ರವೀಂದ್ರ ಭಾರತಿಯಂತಹ ಪವಿತ್ರ ಸ್ಥಳದಲ್ಲಿ ಗದ್ದರ್ ಅಥವಾ ಅಂಡೆ ಶ್ರೀ ಅವರಂತಹ ಸ್ಥಳೀಯ ತೆಲಂಗಾಣ ಕಲಾವಿದರಿಗೆ ಮಾತ್ರ ಗೌರವ ನೀಡಬೇಕು ಎಂದು ವಾದಿಸಿದೆ.

'ಎಸ್.ಪಿ.ಬಿ ತೆಲಂಗಾಣದವರಲ್ಲ' - ಪ್ರತಿಭಟನಾಕಾರರ ಅಸಂಬದ್ಧ ವಾದ...
ಈ ಪ್ರತಿಭಟನಾಕಾರರ ಮುಖ್ಯ ವಾದವೇ ವಿಚಿತ್ರವಾಗಿತ್ತು. "ಎಸ್.ಪಿ.ಬಿ ತೆಲಂಗಾಣಕ್ಕೆ ಸೇರಿದವರಲ್ಲ. ಹಾಗಾಗಿ ಇಲ್ಲಿ ಅವರ ಪ್ರತಿಮೆ ಸ್ಥಾಪಿಸಬಾರದು" ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಒಬ್ಬ ವ್ಯಕ್ತಿ ತಾನು ತೆಲಂಗಾಣ ಕಾರ್ಯಕರ್ತನೆಂದು ಹೇಳಿಕೊಂಡ ಪೃಥ್ವಿರಾಜ್, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾನೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ.
ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಅನೇಕ ಜನರು ಈ ವಿರೋಧವನ್ನು ಬಲವಾಗಿ ಖಂಡಿಸಿದ್ದಾರೆ. ಎಸ್.ಪಿ.ಬಿ ಅವರು ಎರಡೂ ತೆಲುಗು ರಾಜ್ಯಗಳ ಹೆಮ್ಮೆ. ಅವರು ತೆಲುಗು ಸಂಗೀತಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದ ಮಹಾನ್ ಕಲಾವಿದ. ಇಂತಹ ದಿಗ್ಗಜನ ಹೆಸರಿನಲ್ಲಿ ಪ್ರಾದೇಶಿಕ ವಿಭಜನೆ ಸೃಷ್ಟಿಸುವುದು ಸರಿಯಲ್ಲ ಎಂದು ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳ ಆಕ್ರೋಶ: 'ಅನಕ್ಷರಸ್ಥ ದುರಹಂಕಾರಿ ಗೂಂಡಾಗಳ ಗುಂಪು'...
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ತೀಕ್ಷ್ಣವಾಗಿವೆ. ಒಬ್ಬ ಬಳಕೆದಾರರು, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಭಾರತದ ಜನರೂ ಎಸ್.ಪಿ.ಬಿ ಅವರನ್ನು ತಮ್ಮ ಹೆಮ್ಮೆಯ ಕಲಾವಿದ ಎಂದು ಆಚರಿಸುತ್ತಾರೆ. ಆದರೆ ಅವರ ಸ್ವಂತ ತೆಲುಗು ಪ್ರದೇಶದಲ್ಲಿ ಕೆಲವು ಮಂದಿ ಅವರನ್ನು ತಿರಸ್ಕರಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಪ್ರತಿಭಟನಾಕಾರರ ಗುಂಪನ್ನು "ಅನಕ್ಷರಸ್ಥ ದುರಹಂಕಾರಿ ಗೂಂಡಾಗಳ ಗುಂಪು" ಎಂದು ಕರೆದಿದ್ದಾರೆ.
ಸಂಗೀತಕ್ಕೆ ಗಡಿ, ಭಾಷೆಯ ಹಂಗಿಲ್ಲ. ಎಸ್.ಪಿ.ಬಿ ಭಾರತೀಯ ಸಂಗೀತದ ಕೊಂಡಿ. ಇಂತಹ ಮಹಾನ್ ಕಲಾವಿದನಿಗೆ ಅವರದೇ ನೆಲದಲ್ಲಿ ಈ ರೀತಿ ವಿರೋಧ ಎದುರಾಗಿರುವುದು ಸಾಂಸ್ಕೃತಿಕ ದುರಂತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಈ ಘಟನೆ ಸ್ಯಾಂಡಲ್ವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲ ಕಡೆಯ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications











