Gaddar Death: ತೆಲಂಗಾಣದ ಕ್ರಾಂತಿಕಾರಿ ಗಾಯಕ ಗದ್ದರ್ ಇನ್ನಿಲ್ಲ: ಅಗಲಿದ ಧೀಮಂತನಿಗೆ ತಾರೆಯರ ಕಂಬನಿ!
ತೆಲುಗು ಚಿತ್ರರಂಗ ಮತ್ತೊಬ್ಬ ದಿಗ್ಗಜನನ್ನು ಕಳೆದುಕೊಂಡಿದೆ. ಹಾಡಿನ ಮೂಲಕ ಹೋರಾಟವನ್ನು ಮಾಡಿ ಯುವಕರನ್ನು ಬಡಿದೆಬ್ಬಿಸುತ್ತಿದ್ದ ಕ್ರಾಂತಿಕಾರಿ ಗಾಯಕ ಹಾಗೂ ಕವಿ ಗದ್ದರ್ ಉರ್ಫ್ ಗುಮ್ಮಡಿ ವಿಠ್ಠಲ ರಾವ್ ಅನಾರೋಗ್ಯದಿಂದ ಇಂದು (ಆಗಸ್ಟ್ 6) ಇಹಲೋಕ ತ್ಯಜಿಸಿದ್ದಾರೆ.
77 ವರ್ಷದ ಈ ಕ್ರಾಂತಿಕಾರಿ ಗಾಯಕ 70 ಹಾಗೂ 80 ದಶಕದಲ್ಲಿ ತೆಲುಗು ನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದರು. ಗದ್ದರ್ ಕ್ರಾಂತಿಕಾರಿ ಮಾತು, ಹಾಡುಗಳು ಹೋರಾಟದ ಕಿಚ್ಚನ್ನು ಹಚ್ಚುತ್ತಿದ್ದವು. ಗದ್ದರ್ ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕು ಅನ್ನುವ ಹೋರಾಟದಲ್ಲೂ ಸಕ್ರಿಯರಾಗಿದ್ದರು. ಸಾಮಾನ್ಯ ಜನರಪರ ಧ್ವನಿ ಎತ್ತುತ್ತಿದ್ದ ಗದ್ದರ್ ಅಂದಿನ ಬಿಸಿರಕ್ತದ ಯುವಕರಿಗೆ ಪ್ರೇರಣೆ.

ತಮ್ಮ ಕ್ರಾಂತಿಕಾರಿ ಹೋರಾಟವನ್ನು ವಿವಿಧ ಮಾಧ್ಯಮಗಳ ಮೂಲಕ ಗದ್ದರ್ ವ್ಯಕ್ತಪಡಿಸುತ್ತಿದ್ದರು. ಅದರಲ್ಲಿ ಸಿನಿಮಾ ಮಾಧ್ಯಮ ಕೂಡ ಒಂದು. ಹೀಗಾಗಿ ಟಾಲಿವುಡ್ ಮಂದಿ ಜೊತೆ ಗದ್ದರ್ ನಂಟು ಇತ್ತು. ತೆಲುಗು ಚಿತ್ರರಂಗದಲ್ಲಿ ಗಾಯಕನಾಗಿ, ಕವಿಯಾಗಿ ಹಾಗೂ ನಟನಾಗಿಯೂ ಗುರುತಿಸಿಕೊಂಡಿದ್ದರು.
ಗದ್ದರ್ ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ಹೃದಯ ಸಂಬಂಧಿ ಸಮಸ್ಯೆಯಿತ್ತು. ಇತ್ತೀಚೆಗೆ ತೀವ್ರ ಹೃದಯಾಘಾತವಾಗಿದ್ದರಿಂದ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಚೇತರಿಸಿಕೊಂಡಿದ್ದ ಗದ್ದರ್ ಅವರಿಗೆ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಮಾಡಲಾಗಿತ್ತು. ಈ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದರೂ, ಶ್ವಾಸಕೋಶ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಮತ್ತಷ್ಟು ಹದಗೆಟ್ಟಿತ್ತು. ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗದ್ದರ್ ಕೊನೆಯುಸಿರೆಳೆದಿದ್ದಾರೆ.
1949ರಲ್ಲಿ ಗದ್ದರ್ ಉರ್ಫ್ ಗುಮ್ಮಡಿ ವಿಠಲ್ ರಾವ್ ಮೇದಕ್ ಜಿಲ್ಲೆಯ ತುಪ್ರಾನ್ ಎಂಬ ಗ್ರಾಮದಲ್ಲಿ ಹುಟ್ಟಿದರು. ನಿಜಾಮಾಬಾದ್, ಮೆಹಬೂಬ್ ನಗರ ಹಾಗೂ ಹೈದರಾಬಾದ್ನಲ್ಲಿ ಶಿಕ್ಷಣವನ್ನು ಪಡೆದಿದ್ದರು. 1969ರ ತೆಲಂಗಾಣ ಚಳವಳಿಯಲ್ಲಿ ಗದ್ದರ್ ಚಳುವಳಿಯಲ್ಲಿ ಭಾಗವಹಿಸಿ, ತಮ್ಮ ಹಾಡುಗಳಿಂದ ಯುವಕರನ್ನು ಬಡಿದೆಬ್ಬಿಸಿದ್ದರು.
ಗದ್ದರ್ 'ಮಾಭೂಮಿ' ಅನ್ನೋ ತೆಲುಗು ಸಿನಿಮಾದಲ್ಲಿ ಸಶಸ್ತ್ರ ಹೋರಾಟಗಾರರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲದೇ 'ಒರೇ ರಿಕ್ಷಾ' ಸಿನಿಮಾದಲ್ಲಿ "ನೀ ಪದಂ ಮೇ ಪುಟ್ಟುಮಚ್ಚನೈ ಚೆಲ್ಲಮ್ಮ" ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡಿಗೆ ನಂದಿ ಪ್ರಶಸ್ತಿ ಬಂದಿತ್ತು. ಆದರೆ, ಗದ್ದರ್ ಆ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.
ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಗಣ್ಯರು ಗದ್ದರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. "ಗದ್ದರ್ ಅವರ ಧ್ವನಿ ಅಮರ. ಯಾವ ಹಾಡು ಹಾಡಿದರೂ ದನಿ ಎತ್ತಿ ಜನಹಿತಕ್ಕಾಗಿ ಹೋರಾಟ ಮಾಡಿದ್ದರು. 'ಪ್ರಜಾ ಯುದ್ಧನೌಕೆ' ಗದ್ದರಣ್ಣ ಎಂಬ ಗಾಯಕನಿಗೆ ಲಾಲ್ ಸಲಾಂ. ಸರಳವಾದ, ಅತ್ಯಂತ ಪರಿಣಾಮಕಾರಿ ಹಾಡಿನ ಮೂಲಕ ದಶಕಗಳ ಕಾಲ ಜನರಲ್ಲಿ ಸ್ಪೂರ್ತಿ ತುಂಬಿರೋ ಗದ್ದರಣ್ಣ ಇನ್ನಿಲ್ಲ ಎಂಬ ಸುದ್ದಿ ತೀವ್ರ ದು:ಖ ತರಿಸಿದೆ. ಇನ್ಮುಂದೆ ಹೋರಾಟಗಳಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುತ್ತೆ. ಆದರೆ, ಅವರ ಹಾಡು ಹಾಗೂ ಹೋರಾಟದಲ್ಲಿ ಆ ಧ್ವನಿ ಶ್ವಾಶ್ವತವಾಗಿ ಕಾಣುತ್ತೆ" ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
ಗದ್ದರ್ ನಿಧನಕ್ಕೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಎರಡೂ ರಾಜ್ಯದ ಗಣ್ಯರು ಕಂಬನಿ ಮಿಡಿದಿದ್ದಾರೆ. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











