ನೂರಾರು ಜನರ ಮುಂದೆ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿಗೆ ಭಾರೀ ಅವಮಾನ!
ಟಾಲಿವುಡ್ ನಟ ಚಿರಂಜೀವಿ ದೇಶ ವಿದೇಶಗಳಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ದಕ್ಷಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮರೆದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಎನ್ಟಿಆರ್ ಬಳಿಕ ಆ ಮಟ್ಟಿಗೆ ಸ್ಟಾರ್ಡಮ್ ಸಂಪಾದಿಸಿದವರು ಚಿರಂಜೀವಿ. ಸಿನಿಮಾ ಅಷ್ಟೇ ಅಲ್ಲ ರಾಜಕೀಯರಂಗದಲ್ಲೂ ಚಿರು ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದರು.
ರಾಜಕೀಯರಂಗದಲ್ಲಿ ಅಷ್ಟಾಗಿ ಗೆಲುವು ಸಾಧಿಸದ ಚಿರಂಜೀವಿ ಈಗ ಮತ್ತೆ ಚಿತ್ರರಂಗದಲ್ಲೇ ಮೆರೆಯುತ್ತಿದ್ದಾರೆ. ವಯಸ್ಸು 60 ದಾಟಿದರೂ ಇವತ್ತಿಗೂ ಹೊಸ ನಟರಿಗೂ ಪೈಪೋಟಿ ಕೊಡುತ್ತಿದ್ದಾರೆ. ಕಾನ್ಸ್ಟೇಬಲ್ ಮಗನಾಗ ಕೋನಿದೇಲ ಶಿವಶಂಕರ ಪ್ರಸಾದ್ ಮೆಗಾಸ್ಟಾರ್ ಆಗಿ ಬೆಳೆದಿದ್ದು ನಿಜಕ್ಕೂ ಸ್ಫೂರ್ತಿದಾಯಕ. ಸಿನಿಮಾ ಮಾತ್ರವಲ್ಲ ತಮ್ಮ ಸಾಮಾಜಿಕ ಕೆಲಸಗಳಿಂದಲೂ ಚಿರು ಜನರಿಗೆ ಹೆಚ್ಚು ಹತ್ತಿರವಾಗಿದ್ದಾರೆ.

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದ ಚಿರಂಜೀವಿ ತಮ್ಮ ಪರಿಶ್ರಮದಿಂದಲೇ ಗೆದ್ದವರು. ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರಬದುಕು ಆರಂಭಿಸಿ ಬಳಿಕ ಹೀರೋ ಆಗಿ ಗೆದ್ದರು. ಈ ಹಾದಿಯಲ್ಲಿ ಸಾಕಷ್ಟು ಅವಮಾನ, ನೋವು ಅನುಭವಿಸಿದ್ದಾರೆ. ಒಮ್ಮೆ ನೂರಾರು ಜನರ ನಡುವೆ ಸೆಟ್ನಲ್ಲಿ ತಮಗೆ ನಿರ್ಮಾಪಕರು ಅವಮಾನ ಮಾಡಿದ್ದರು. ಆದರೆ ಅದನ್ನು ನಾನು ತಪ್ಪಾಗಿ ಪರಿಗಣಿಸಲಿಲ್ಲ. ಅದನ್ನು ನನ್ನ ಬೆಳವಣಿಗೆಗೆ ಇಂಧನವಾಗಿ ಬಳಸಿಕೊಂಡೆ. ಅದರಿಂದ ಸಾಧಿಸಬೇಕು ಎನ್ನುವ ಕಿಚ್ಚು ನನ್ನಲ್ಲಿ ಹೆಚ್ಚಾಯಿತು ಎಂದು ಚಿರಂಜೀವಿ ಹೇಳಿದ್ದಾರೆ.
ತೆಲುಗು ಡಿಜಿಟಲ್ ಕ್ರಿಯೇಟರ್ಸ್ ಮೀಟ್ ವೇದಿಕೆಯಲ್ಲಿ ನಟ ಚಿರಂಜೀವಿ ಇತ್ತೀಚೆಗೆ ಮಾತನಾಡಿದರು. ಈ ವೇಳೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. "ನ್ಯಾಯಂ ಕಾವಾಲಿ ಎನ್ನುವ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆ ಚಿತ್ರದ ಕೋರ್ಟ್ ಸನ್ನಿವೇಶವನ್ನು ಅಂದು ಸೆರೆಹಿಡಿಯುತ್ತಿದ್ದರು. ನೂರಾರು ಜನರನ್ನು ಸೇರಿಸಿ ದೊಡ್ಡದಾಗಿ ಶೂಟಿಂಗ್ ಮಾಡುತ್ತಿದ್ದರು. ಅಂದು ಒಂದು ಘಟನೆ ನಡೆಯಿತು"
"ಕೋರ್ಟ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದಾಗ ಸಹಾಯಕ ನಿರ್ದೇಶಕರು ನನ್ನನ್ನು ಕರೆದು ಕಟಕಟ್ಟೆಯಲ್ಲಿ ನಿಲ್ಲುವಂತೆ ಹೇಳಿದರು. ಅಲ್ಲಿ ಸುತ್ತಾ 300, 400 ಜನ ಇದ್ದರು. ಎಲ್ಲರ ಮುಂದೆ ಅವತ್ತು ನಿರ್ಮಾಪಕ ಕ್ರಾಂತಿ ಕುಮಾರ್, ಏನ್ರೀ ನಿಮ್ಮನ್ನು ಬಂದು ಕರೆಯಬೇಕಾ? ಇಲ್ಲಿ ಬಿದ್ದಿರೋಕೆ ಆಗಲ್ವಾ? ನೀವೇನು ದೊಡ್ಡ ಸೂಪರ್ ಸ್ಟಾರ್ ಅಂದುಕೊಂಡ್ರಾ? ಎಂದು ಕೂಗಾಡಿದರು. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಯಿತು"

"ಎಲ್ಲರ ಮುಂದೆ ನಿರ್ಮಾಪಕರು ಹೀಗೆ ಹೇಳಿದ್ದು ನನ್ನಿಂದ ಸಹಿಸಲು ಸಾಧ್ಯವಾಗಲಿಲ್ಲ. ಅವತ್ತು ಮಧ್ಯಾಹ್ನ ಊಟ ಕೂಡ ಮಾಡಲಿಲ್ಲ. ಬಳಿಕ ಸಂಜೆ ಕ್ರಾಂತಿ ಕುಮಾರ್ ಫೋನ್ ಮಾಡಿ ಸ್ಪಷ್ಟನೆ ನೀಡಿದರು. ನಟಿ ಶಾರದಾ ಅವರ ಮೇಲಿನ ಕೋಪದಿಂದ ನನ್ನ ಮೇಲೆ ಕೂಗಾಡಿದ್ದಾಗಿ ಹೇಳಿದರು. ಎಲ್ಲಾ ಸರಿ, ಅಷ್ಟು ಜನರ ಮುಂದೆ ಆ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ನಾನು ಅವರಿಗೆ ಹೇಳಿದ್ದೆ"
"ಅಂದು ನಿರ್ಮಾಪಕರು ಮಾಡಿದ ಅವಮಾನದಿಂದಲೇ ನನ್ನಲ್ಲಿ ಸಾಧಿಸಬೇಕು, ಸೂಪರ್ ಸ್ಟಾರ್ ಆಗಬೇಕು ಎನ್ನುವ ಕಿಚ್ಚು ಹೆಚ್ಚಾಯಿತು. ನೀನೇನು ಸೂಪರ್ ಸ್ಟಾರಾ? ಎಂದು ಹೇಳಿದ್ದು ನನ್ನ ಮನಸ್ಸಿನಲ್ಲಿ ಉಳಿದುಬಿಡ್ತು. ಆ ಅವಮಾನವನ್ನು ನನ್ನ ಬೆಳವಣಿಗೆಗೆ ಮೆಟ್ಟಿಲಾಗಿ ಬಳಸಿಕೊಂಡೆ. ಆ ಬಳಿಕ ಕೂಡ ಇಂತಹ ಘಟನೆಗಳು ನನ್ನ ಜೀವನದಲ್ಲಿ ಸಾಕಷ್ಟು ನಡೀತು. ಅದನ್ನೆಲ್ಲಾ ಎದುರಿಸಿ ನಾನು ಇಂದು ಈ ಸ್ಥಾನದಲ್ಲಿದ್ದೀನಿ" ಎಂದು ಚಿರಂಜೀವಿ ಹೇಳಿದ್ದಾರೆ. ಮೆಗಾಸ್ಟಾರ್ ಕಾಮೆಂಟ್ಸ್ ವೈರಲ್ ಆಗುತ್ತಿದೆ.
ಚಿರಂಜೀವಿ ನಟಿಸಿದ 'ಭೋಳಾ ಶಂಕರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಸದ್ಯ 'ವಿಶ್ವಂಭರ' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸೋಷಿಯೋ ಫ್ಯಾಂಟಸಿ ಸಿನಿಮಾ ಮೂಡಿ ಬರಲಿದೆ. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











