ಮಾಲ್ಡೀವ್ಸ್ ಪ್ರವಾಸದ ಟಿಕೆಟ್ ಕ್ಯಾನ್ಸಲ್ ಮಾಡಿದ ನಾಗಾರ್ಜುನ: ನನಗೆ ಯಾರ ಭಯವೂ ಇಲ್ಲ ಎಂದ ನಟ
ಟಾಲಿವುಡ್ನಲ್ಲಿ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ಸ್ಟಾರ್ ನಟರ ದೊಡ್ಡದೊಡ್ಡ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ನಾಗಾರ್ಜುನ ನಟನೆಯ 'ನಾ ಸಾಮಿ ರಂಗ' ಸಿನಿಮಾ ಕೂಡ ಒಂದು. ಮಲಯಾಳಂ ರೀಮೆಕ್ ಆಗಿರುವ ಈ ಹಳ್ಳಿ ಸೊಗಡಿನ ಚಿತ್ರದಲ್ಲಿ ಕನ್ನಡ ನಟಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ.
'ನಾ ಸಾಮಿ ರಂಗ' ಚಿತ್ರಕ್ಕೆ ಪ್ರೇಕ್ಷಕರಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದೆಲ್ಲದರ ನಡುವೆ ನಟ ನಾಗಾರ್ಜುನ ನಿಗದಿಯಾಗಿದ್ದ ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ನಡೀತಿದೆ. ಲಕ್ಷದ್ವೀಪದ ಬಗ್ಗೆ ನಮ್ಮ ದೇಶದ ಪ್ರಧಾನಿ ಮೋದಿಯವರ ಪೋಸ್ಟ್ಗೆ ಮಾಲ್ಡೀವ್ಸ್ ಸಚಿವರು ಕುಹಕವಾಡಿದ್ದರು. ಈ ಬಗ್ಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಸಾಕಷ್ಟು ಜನ ಇನ್ನುಮುಂದೆ ನಾವು ಮಾಲ್ಡೀವ್ಸ್ಗೆ ಕಾಲಿಡುವುದಿಲ್ಲ ಎನ್ನುತ್ತಿದ್ದಾರೆ. ಪ್ರವಾಸಕ್ಕಾಗಿ ಬುಕ್ ಮಾಡಿದ ಫ್ಲೈಟ್ ಟಿಕೆಟ್ಗಳನ್ನು ರದ್ದು ಪಡಿಸಿದ್ದಾರೆ. ಇತ್ತೀಚೆಗೆ ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಲು ಪ್ರಧಾನಿ ಮೋದಿ ಅಲ್ಲಿಗೆ ಪ್ರವಾಸ ಕೈಗೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದರು. ಮೋದಿ ಲಕ್ಷದ್ವೀಪ ಪ್ರವಾಸವನ್ನು ಮಾಲ್ಡೀವ್ಸ್ ಸಚಿವರು ಟೀಕಿಸಿದ್ದರು.
ಭಾರತ ಮಾಲ್ಡೀವ್ಸ್ ಅನ್ನು ಟಾರ್ಗೆಟ್ ಮಾಡುತ್ತಿದೆ ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್ ಆರೋಪಿಸಿದ್ದರು. ಮಾಲ್ಡೀವ್ಸ್ನ ಬೀಚ್ ಜೊತೆ ಸ್ಪರ್ಧಿಸಲು ಭಾರತಕ್ಕೆ ಅಷ್ಟು ಸುಲಭವಲ್ಲ. ಭಾರತದ ಬೀಚ್ಗಳು ಕೊಳಕಾಗಿವೆ ಎಂದು ಅಣಕವಾಡಿದ್ದರು. ಸಚಿವೆ ಮರಿಯಮ್ ಶಿಯುನಾ ಕೂಡ ಪ್ರಧಾನಿ ಮೋದಿ ಬಗ್ಗೆ ಅವಹೇಳಕಾರಿ ಪೋಸ್ಟ್ ಮಾಡಿದ್ದರು.
ಮೋದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಮೂವರು ಸಚಿವರನ್ನು ಅಲ್ಲಿನ ಸರ್ಕಾರ ಅಮಾನತು ಮಾಡಿದೆ. ಇನ್ನು ಅಲ್ಲಿನ ಸಚಿವರ ಹೇಳಿಕೆಯನ್ನು ಖಂಡಿಸಿ, ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ನಡೀತಿದೆ. ಸಾಮಾನ್ಯರು ಮಾತ್ರವಲ್ಲ ಸೆಲೆಬ್ರೆಟಿಗಳು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಂಗೀತ ಇರ್ದೇಶಕ ಕೀರವಾಣಿ ಮಾತನಾಡುತ್ತಾ " ನಾ ಸಾಮಿರಂಗ ಚಿತ್ರದಲ್ಲಿ ರಾಮೇಶ್ವರಂ ಮತ್ತು ಕಾಶಿ ತೀರ್ಥಯಾತ್ರೆಗೆ ಎಂಬ ಹಾಡನ್ನು ಚಿತ್ರದಲ್ಲಿ ಸೇರಿಸಿದ್ದೆವು. ನೀವು ಪ್ರವಾಸಕ್ಕೆ ಮಾಲ್ಡೀವ್ಸ್ಗೆ ಹೋಗುತ್ತೀರಾ"? ಎಂದು ಕೇಳಿದ್ದಾರೆ. ಕೂಡಲೇ ನಾಗಾರ್ಜುನ "ನಿಜ ಹೇಳಬೇಕು ಅಂದ್ರೆ ಇದೇ 17ಕ್ಕೆ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೆ. ಅದನ್ನು ರದ್ದು ಪಡಿಸಿದ್ದೀನಿ" ಎಂದಿದ್ದಾರೆ.

'ಬಿಗ್ ಬಾಸ್', 'ನಾ ಸಾಮಿ ರಂಗ' ಶೂಟಿಂಗ್ ಕಾರಣ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಆಗಲಿಲ್ಲ. ಹಾಗಾಗಿ ಮಾಲ್ಡೀವ್ಸ್ಗೆ ಕೆಲವು ದಿನ ರಜೆಯ ಮೇಲೆ ಹೋಗಬೇಕು ಎಂದುಕೊಂಡೆ. ಆದರೆ ಈಗ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಯಾರು ಏನು ಹೇಳುತ್ತಾರೋ ಎಂಬ ಭಯದಿಂದ ನಾನು ಪ್ರವಾಸ ರದ್ದು ಮಾಡಲಿಲ್ಲ. ಮಾಲ್ಡೀವ್ಸ್ ನಾಯಕರು ನೀಡಿದ ಹೇಳಿಕೆ ನನಗೆ ತುಂಬಾ ತಪ್ಪಾಗಿ ಕಂಡವು. ಕೋಟಿಗಟ್ಟಲೆ ಜನರನ್ನು ಆಳುವ ಪ್ರಧಾನಿ ವಿರುದ್ಧ ಅವರ ಕಾಮೆಂಟ್ಗಳು, ಟ್ವೀಟ್ಗಳು ಮತ್ತು ಹೇಳಿಕೆಗಳು ಸರಿಯಾಗಿಲ್ಲ. ಅದರ ದುಷ್ಪರಿಣಾಮವನ್ನು ಎದುರಿಸುತ್ತಿದ್ದಾರೆ. ಮಾಲ್ಡೀವ್ಸ್ಗಿಂತ ಲಕ್ಷದ್ವೀಪಕ್ಕೆ ಹೋಗುವುದಕ್ಕೆ ಇಷ್ಟಪಡುತ್ತೇನೆ" ಎಂದಿದ್ದಾರೆ.


Click it and Unblock the Notifications










