'ಈಗ'-2 ಮಾಡ್ತೀನಿ, ಆದ್ರೆ ನಿನ್ನ ಅವಶ್ಯಕತೆ ಇಲ್ಲ ಎಂದ್ರು ರಾಜಮೌಳಿ; ನಟ ನಾನಿ ಹೇಳಿಕೆ ವೈರಲ್
ರಾಜಮೌಳಿ ನಿರ್ದೇಶನದ 'ಈಗ'(ನೊಣ) ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಕೇವಲ ಒಂದು ನೊಣದ ಪಾತ್ರವನ್ನು ಬಳಸಿಕೊಂಡು ತೆರೆಮೇಲೆ ನಿರ್ದೇಶಕ ಜಕ್ಕಣ್ಣ ಚಮತ್ಕಾರ ಮಾಡಿದ್ದರು. ಈ ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಕೂಡ ಅಬ್ಬರಿಸಿದ್ದರು. ವಿಲನ್ ಆಗಿ ನಟಿಸಿದರೂ ಆ ಚಿತ್ರದ ನಿಜವಾದ ಹೀರೊ ಸುದೀಪ್ ಎನಿಸಿಕೊಂಡಿದ್ದರು.
'ಈಗ' ಚಿತ್ರದಲ್ಲಿ ನಟ ನಾನಿ ಹೀರೊ ಆಗಿ ಸಣ್ಣ ಪಾತ್ರದಲ್ಲಿ ಮಿಂಚಿದ್ದರು. ಆರಂಭದಲ್ಲೇ ಸಾಯುವ ಈ ಪಾತ್ರ ಬಳಿಕ ನೊಣದ ರೂಪದಲ್ಲಿ ಪುನರ್ಜನ್ಮ ಪಡೆದು ಬರುವ ಕಥೆ ಚಿತ್ರದಲ್ಲಿತ್ತು. ನಾಯಕಿಯಾಗಿ ಸಮಂತಾ ರುತ್ಪ್ರಭ್ ಮಿಂಚಿದ್ದರು. ಬಿಂದು ಎನ್ನುವ ಯುವತಿಯ ಮೋಹ ಪಾಶದಲ್ಲಿ ಸಿಲುಕುವ ಉದ್ಯಮಿ ಸುದೀಪ್ ಆಕೆಯ ಪ್ರಿಯಕರ ನಾನಿಯನ್ನು ಕೊಂದುಬಿಡುತ್ತಾನೆ. ಆತನ ವಿರುದ್ಧ ನೊಣದ ರೂಪದಲ್ಲಿ ನಾನಿ ಸೇಡು ತೀರಿಸಿಕೊಳ್ಳುವುದು ಇನ್ನುಳಿದ ಕಥೆ.

12 ವರ್ಷಗಳ ಹಿಂದೆ ತೆರೆಕಂಡಿದ್ದ 'ಈಗ' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಅಂದಾಜು 30-40 ಕೋಟಿ ರೂ. ಬಜೆಟ್ ಸಿನಿಮಾ ಬಾಕ್ಸಾಫೀಸ್ನಲ್ಲಿ 120 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ತೆಲುಗು ಮಾತ್ರವಲ್ಲದೇ ತಮಿಳು, ಹಿಂದಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲಿ ಚಿತ್ರ ಸಕ್ಸಸ್ ಕಂಡಿತ್ತು. ಇನ್ನು ಮೌಳಿ ವಿಷನ್, ಸಿನಿಮಾ ಮೇಕಿಂಗ್ ಕಂಡು ಬಾಲಿವುಡ್ ಮಂದಿ ಬೆರಗಾಗಿದ್ದರು.
ರಾಜಮೌಳಿ ಸಿನಿಕರಿಯರ್ನಲ್ಲಿ ಮೈಲಿಗಲ್ಲಾದ ಸಿನಿಮಾ ಇದು. ಗ್ರಾಫಿಕ್ಸ್ನಲ್ಲಿ ಒಂದು ನೊಣವನ್ನು ತೋರಿಸಿ ಮೋಡಿ ಮಾಡಿದ್ದರು. ಕನ್ನಡ ನಟ ಸುದೀಪ್ಗೂ ದೊಡ್ಡಮಟ್ಟದಲ್ಲಿ 'ಈಗ' ಸಿನಿಮಾ ಹೆಸರು ತಂದುಕೊಟ್ಟಿತ್ತು. ಅವರ ಅದ್ಭುತ ನಟನೆಗೆ ಅವಕಾಶ ಮಾಡಿಕೊಟ್ಟಿತ್ತು. ಸಿನಿರಸಿಕರು ಮಾತ್ರ 'ಈಗ' ಸಿನಿಮಾ ಮರೆಯೋಕೆ ಸಾಧ್ಯವಿಲ್ಲ. ಅದೇ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬರುತ್ತಾ? ಎಂದು ಪದೇ ಪದೆ ಕೇಳುತ್ತಿರುತ್ತಾರೆ.
'ಈಗ' ಸಿನಿಮಾ ಸೀಕ್ವೆಲ್ ಬಗ್ಗೆ ಇದೀಗ ನಟ ನಾನಿ ಮಾತನಾಡಿದ್ದಾರೆ. ಸದ್ಯ 'ಸರಿಪೋದ ಶನಿವಾರಂ' ಎನ್ನುವ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿಸ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಪಿಂಕ್ವಿಲ್ಲಾ ಸಂದರ್ಶನದಲ್ಲಿ 'ಈಗ'-2 ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆ ಬಗ್ಗೆ ನನಗೇನು ಗೊತ್ತಿಲ್ಲ. ಮುಂದೆ ನೋಡಬೇಕು ಎಂದಿದ್ದಾರೆ.

ನಾಉ 'ಈಗ' ಸೀಕ್ವೆಲ್ ಮಾಡುವ ಬಗ್ಗೆ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರನ್ನು ಎಂದೂ ಕೇಳಲಿಲ್ಲ. ಆದರೆ, ನಾನು ಈ ಬಗ್ಗೆ ರಾಜಮೌಳಿ ಜೊತೆ ತಮಾಷೆಯಾಗಿ ಮಾತನಾಡಿದ್ದೇನೆ. 'ಈಗ -2' ಮಾಡೋಣ, ಅದರಲ್ಲಿ ನಾನು ವಾಪಸ್ ಬರ್ತೀನಿ ಅಂತ ಹೇಳಿದ್ರಿ ಅಲ್ವಾ? ಯಾವಾಗ ಶುರು ಮಾಡೋಣ ಎಂದು ಕೇಳಿದ್ದೆ. ಅದಕ್ಕೆ ಅವರು "ನಾವು 'ಈಗ-2' ಮಾಡಿದರೂ ನಿನ್ನ ಅವಶ್ಯಕತೆ ಇಲ್ಲ. ಒಂದು ನೊಣ ಇದ್ದರೆ ಸಾಕು. ಅದೇ ಸೀಕ್ವೆಲ್ನಲ್ಲಿ ವಾಪಸ್ ಬರುತ್ತದೆ" ಎಂದು ಮೌಳಿ ನಕ್ಕಿದ್ದಾಗಿ ನಾನಿ ಹೇಳಿದ್ದಾರೆ.
ನಿಜ ಹೇಳಬೇಕು ಅಂದ್ರೆ 'ಈಗ' ಸಿನಿಮಾ ಮಾಡುವ ಯೋಚನೆ ದೊಡ್ಡದು. ರಾಜಮೌಳಿ ಅವರ ಧೈರ್ಯವನ್ನು ಮೆಚ್ಚಲೇಬೇಕು. ಮುಂದಿನ ಭಾಗ ಮಾಡಬೇಕು ಎಂದಾಹ, ಅವರು ಖಂಡಿತವಾಗಿಯೂ ಅದರ ಬಗ್ಗೆ ಆಲೋಚಿಸುತ್ತಾರೆ. ಅದೇ ನಿಜವಾದರೇ ಮತ್ತೊಂದು ಅದ್ಭುತ ಸಿನಿಮಾ ಮೂಲಕ ಜಗತ್ತನ್ನು ಸೆಳೆಯುತ್ತಾರೆ" ಎಂದು ನಾನಿ ವಿವರಿಸಿದ್ದಾರೆ. ಅಂದಹಾಗೆ 'ಈಗ' ಸಿನಿಮಾ 2 ರಾಷ್ಟ್ರೀಯ ಪ್ರಶಸ್ತಿಗಳು, 3 ಸೈಮಾ ಪ್ರಶಸ್ತಿಗಳು ಮತ್ತು 5 ಸೌತ್ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದು ಸದ್ದು ಮಾಡಿತ್ತು.


Click it and Unblock the Notifications











