'ದೇವರ' ಸಿನಿಮಾ ನೋಡಿ ಸತ್ತು ಹೋಗ್ತೀನಿ"; ಜ್ಯೂ. ಎನ್ಟಿಆರ್ ಅಭಿಮಾನಿ ಕೊನೆ ಆಸೆ!
ಜ್ಯೂ. ಎನ್ಟಿಆರ್ ನಟನೆಯ 'ದೇವರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸೆಪ್ಟೆಂಬರ್ 27ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ತೆಲುಗು ಜೊತೆಗೆ ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ 'ದೇವರ' ಸಿನಿಮಾ ನಿರ್ಮಾಣವಾಗಿದೆ. ದ್ವಿಪಾತ್ರದಲ್ಲಿ ತಾರಕ್ ನಟಿಸಿದ್ದು ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಬಾಲಿವುಡ್ ನಟ ಸೈಫ್ ಅಲಿಖಾನ್ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. 35 ಮಿಲಿಯನ್ಗೂ ಅಧಿಕ ವೀವ್ಸ್ ಸಾಧಿಸಿ ಟ್ರೈಲರ್ ಧೂಳೆಬ್ಬಸಿದೆ. ಅಭಿಮಾನಿಗಳು ಫಸ್ಟ್ ಡೇ ಸಿನಿಮಾ ನೋಡಲು ಕಾಯುವಂತಾಗಿದೆ.

'ದೇವರ' ಚಿತ್ರವನ್ನು ನೋಡುವವರೆಗೂ ನನ್ನನ್ನು ಬದುಕಿಸಿ ಎಂದು ತಾರಕ್ ಅಭಿಮಾನಿಯೊಬ್ಬ ವೈದ್ಯರಲ್ಲಿ ಮನವಿ ಮಾಡುತ್ತಿದ್ದಾನೆ. ಇತ್ತೀಚೆಗೆ ಆತನ ಪೋಷಕರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದಾರೆ. ಆಂಧ್ರದ ಕೌಶಿಕ್(19) ಎಂಬ ಯುವಕ ಕೆಲ ದಿನಗಳಿಂದ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಸದ್ಯ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
"ನನ್ನ ಮಗ ಜ್ಯೂ. ಎನ್ಟಿಆರ್ ವೀರಾಭಿಮಾನಿ. 'ದೇವರ' ಸಿನಿಮಾ ನೋಡಿ ಸತ್ತು ಹೋಗುತ್ತೇನೆ. ಸೆಪ್ಟೆಂಬರ್ 27ರ ತನಕ ನನ್ನನ್ನು ಬದುಕಿಸಿ ಎಂದು ವೈದ್ಯರಲ್ಲಿ ಅವನು ಬೇಡಿಕೊಳ್ಳುತ್ತಿದ್ದಾನೆ" ಎಂದು ಕೌಶಿಕ್ ತಾಯಿ ಸರಸ್ವತಿ ಹೇಳಿದ್ದಾರೆ. ಸರಸ್ವತಿ ಅವರ ಪತಿ ಶ್ರೀನಿವಾಸುಲು ಟಿಟಿಡಿಯಲ್ಲಿ ಕಾಂಟ್ರ್ಯಾಕ್ಟ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಶ್ರೀನಿವಾಸುಲು ಹಾಗೂ ಸರಸ್ವತಿ ದಂಪತಿಯ ಹಿರಿಯ ಮಗ ಕೌಶಿಕ್ ಕಳೆದ 2 ವರ್ಷಗಳಿಂದ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಬೋನ್ ಮಾರ್ರೊ ಚಿಕಿತ್ಸೆಗ 60 ಲಕ್ಷ ರೂ. ಖರ್ಚಾಗುತ್ತದೆ. "ಅಮ್ಮ ನಾನು ಬದುಕುವುದಿಲ್ಲ ಎಂದು ಗೊತ್ತು. ನನಗಾಗಿ ಕಷ್ಟಪಡಬೇಡಿ. 'ದೇವರ' ಸಿನಿಮಾ ನೋಡುವುದು ನನ್ನ ಕೊನೆ ಆಸೆ. ಅಲ್ಲಿಯವರೆಗೂ ನನ್ನನ್ನು ಬದುಕಿಸಿ" ಎಂದು ಮಗ ಹೇಳುತ್ತಿರುವುದಾಗಿ ತಾಯಿ ಹೇಳಿದ್ದಾರೆ.
ಮೊದಲಿಗೆ ಸಾಮಾನ್ಯ ಜ್ವರ ಎಂದು ಮಗನನ್ನು ಕರೆದುಕೊಂಡು ಸಾಕಷ್ಟು ಆಸ್ಪತ್ರೆಗಳಿಗೆ ಹೋಗಿದ್ದೆವು. ಕೌಶಿಕ್ಗೆ ಎದ್ದು ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ ಚಿಕಿತ್ಸೆ ಪಡೆದ ವಾರಕ್ಕೆ ನಿಧಾನವಾಗಿ ನಡೆಯಲು ಆರಂಭಿಸಿದ. ನಂತರ ಮತ್ತೆ ಮಲಗಿಬಿಟ್ಟ. ಒಂದು ಇಂಜೆಕ್ಷನ್ 3 ಲಕ್ಷ ರೂ. ಅಂತಹ 12 ಇಂಜೆಕ್ಷನ್ ಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ಬೋನ್ ಮಾರ್ರೋ ಚಿಕಿತ್ಸೆ ನೀಡಿದರೆ ಬದುಕುತ್ತಾನೆ ಎನ್ನುತ್ತಿದ್ದಾರೆ ಎಂದು ಸರಸ್ವತಿ ಮಾಹಿತಿ ನೀಡಿದ್ದಾರೆ.
ಮಗನ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಕೈಚಾಚಿದ್ದಾರೆ. ಅಭಿಮಾನಿಗಳು ಈ ವೀಡಿಯೋವನ್ನು ಜ್ಯೂ. ಎನ್ಟಿಆರ್ಗೆ ಟ್ಯಾಗ್ ಮಾಡುತ್ತಿದ್ದಾರೆ. ತಾರಕ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾರಾ? ಕಾದು ನೋಡಬೇಕಿದೆ. ಕೊರಟಾಲ ಶಿವ 'ದೇವರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎನ್ಟಿಆರ್ ಆರ್ಟ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಈಗಾಗಲೇ 'ದೇವರ' ಸಿನಿಮಾ ಸೆನ್ಸಾರ್ ಮುಗಿಸಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು ಚಿತ್ರದ ರನ್ಟೈಮ್ 2 ಗಂಟೆ 57 ನಿಮಿಷ ಎನ್ನುವುದು ರಿವೀಲ್ ಆಗಿದೆ. 'RRR' ಬಳಿಕ ತಾರಕ್ ನಟಿಸಿರುವ ಸಿನಿಮಾ ಇದು. 'ದೇವರ' ಬಳಿಕ ಬಾಲಿವುಡ್ 'ವಾರ್-2' ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ.
ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇತ್ತೀಚೆಗೆ ಕರ್ನಾಟಕದ ಕರಾವಳಿಗೆ ಫ್ಯಾಮಿಲಿ ಸಮೇತ ಭೇಟಿ ನೀಡಿದ್ದರು. ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಜೊತೆ ಉಡುಪಿ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.


Click it and Unblock the Notifications











