ಮದುವೆಗೆ 3 ದಿನ ಬಾಕಿ ಇರುವಾಗ ನಟ ಶರ್ವಾನಂದ್ ಕಾರು ಅಪಘಾತ: ಗಾಯಗೊಂಡ ಯುವನಟ
ತೆಲುಗು ಯುವನಟ ಶರ್ವಾನಂದ್ ಕಾರು ಅಪಘಾತಕ್ಕೀಡಾಗಿರುವುದಾಗಿ ವರದಿ ಆಗಿದೆ. ಹೈದರಾಬಾದ್ನ ಫಿಲ್ಮ್ ನಗರ್ ಜಂಕ್ಷನ್ ಬಳಿ ಶರ್ವಾನಂದ್ ಅವರ ರೇಂಜ್ ರೋವರ್ ಕಾರು ಪಲ್ಟಿಯಾಗಿದೆ. ಅಪಘಾತ ಸ್ಥಳದಿಂದ ಶರ್ವಾನಂದ್ ಅವರ ಕಾರನ್ನು ಕುಟುಂಬ ಸದಸ್ಯರು ತೆಗೆದುಕೊಂಡು ಹೋಗಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ನಟ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್ 2ರಂದು ಶರ್ವಾನಂದ್ ಮದುವೆ ನಿಶ್ಚಯವಾಗಿದೆ.
ಮೊದಲಿಗೆ ಅಪಘಾತದ ವೇಳೆ ಶರ್ವಾನಂದ್ ಕಾರಿನಲ್ಲಿ ಇರಲಿಲ್ಲ ಎಂದು ಹೇಳಲಾಗಿತ್ತು. ಆದರೆ ಅವರು ಕಾರಿನಲ್ಲೇ ಇದ್ದರು, ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತವಾದ ತಕ್ಷಣ ಕುಟುಂಬಸ್ಥರು ಅಲ್ಲಿಗೆ ಬಂದು ಶರ್ವಾನಂದ್ನ ಆಸ್ಪತ್ರೆಗೆ ಕರೆದೊಯ್ದರು ಎನ್ನುವ ಮಾಹಿತಿ ಈಗ ಸಿಗುತ್ತಿದೆ. ಅಪಘಾತದ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ. ಶರ್ವಾನಂದ್ ಟಾಲಿವುಡ್ನಲ್ಲಿ ಭರವಸೆಯ ಯುವನಟನಾಗಿ ಹೊರಹೊಮ್ಮುತ್ತಿದ್ದಾರೆ. ಹಿಟ್, ಫ್ಲಾಪ್ಗಳನ್ನು ಲೆಕ್ಕಿಸದೇ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ರಕ್ಷಿತಾ ರೆಡ್ಡಿ ಜೊತೆ ಶರ್ವಾನಂದ್ ನಿಶ್ಚಿತಾರ್ಥ ನೆರವೇರಿತ್ತು. ಹೈದರಾಬಾದ್ನ ಖಾಸಗಿ ಹೋಟೆಲ್ನಲ್ಲಿ ಈ ಕಾರ್ಯಕ್ರಮ ನಡೆದಿದ್ದು ವಿಶೇಷ. ರಾಜಸ್ಥಾನದ ಜೈಪುರದಲ್ಲಿರುವ ಲೀಲಾ ಪ್ಯಾಲೇಸ್ನಲ್ಲಿ ಜೂನ್ 2 ಮತ್ತು 3 ರಂದು ಇಬ್ಬರ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ. ಶರ್ವಾನಂದ್ ಕಾರಿಗೆ ಅಪಘಾತವಾಗಿದೆ ಎಂದು ತಿಳಿದು ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕುಟುಂಬಸ್ಥರ ಸ್ಪಷ್ಟನೆ
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಡ್ರೈವರ್ ಜೊತೆ ಶರ್ವಾನಂದ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದದ್ದಾಗೆ ಹೇಳಲಾಗ್ತಿದೆ. ಆ ಸಮಯದಲ್ಲೇ ಕಾರು ನಿಯಂತ್ರಣ ತಪ್ಪಿ ಜೂಬ್ಲಿ ಹಿಲ್ಸ್ ನಂ. 45 ರಸ್ತೆಯ ವಿಭಜಕ್ಕೆ ಗುದ್ದಿದೆ. ಐಷಾರಾಮಿ ಕಾರು ಆಗಿದ್ದು ಎಲ್ಲಾ ಸುರಕ್ಷತೆ ಇದ್ದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎನ್ನಲಾಗ್ತಿದೆ. ಇನ್ನು "ಎಲ್ಲರೂ ಕ್ಷೇಮವಾಗಿ ಇರುವುದಾಗಿ, ಯಾರು ಆತಂಕಪಡುವ ಅಗತ್ಯ ಇಲ್ಲ" ಎಂದು ಶರ್ವಾನಂದ್ ತಂಡ ಸ್ಪಷ್ಟನೆ ನೀಡಿದೆ.
ಲವ್ ಮ್ಯಾರೇಜ್
ಅಂದಹಾಗೆ ಶರ್ವಾನಂದ್ ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ. ಸಾಫ್ಟ್ವೇರ್ ಇಂಜಿನಿಯರ್ ಆಗಿ ಆಕೆ ಕೆಲಸ ಮಾಡುತ್ತಿದ್ದು ತಂದೆ ಮಧುಸೂದನ ರೆಡ್ಡಿ ತೆಲಂಗಾಣ ಹೈಕೋರ್ಟ್ನಲ್ಲಿ ವಕೀಲರಾಗಿದ್ದಾರೆ. ಕಾಮನ್ ಫ್ರೆಂಡ್ ಮೂಲಕ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಪರಿಚಯವಾಗಿತ್ತು. ಆ ಪರಿಚಯ ಮುಂದೆ ಸ್ನೇಹಕ್ಕೆ ತಿರುಗಿ ಅದು ಮುಂದೆ ಪ್ರೀತಿಯಾಗಿ ಮಾರ್ಪಟ್ಟಿತ್ತು. ಪೋಷಕರು ಕೂಡ ಒಪ್ಪಿಗೆ ನೀಡಿದ್ದರಿಂದ ಜೋಡಿ ಉಂಗುರ ಬದಲಿಸಿಕೊಂಡಿತ್ತು.
ಹಲವು ಸಿನಿಮಾಗಳಲ್ಲಿ ನಟನೆ
'ಎದೋ ತೀರಕು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಟ ಶರ್ವಾನಂದ್ ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ನಂತರ ಹೀರೊ ಆಗಿ ಪರಿಚಿತರಾದರು. 'ಎಂಗೆಯುಂ ಎಪ್ಪೊದುಂ' ಸಿನಿಮಾ ಮೂಲಕ ಕಾಲಿವುಡ್ಗೂ ಕಾಲಿಟ್ಟರು. 'ರನ್ ರಾಜಾ ರನ್' , 'ಜಾನು' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಶರ್ವಾನಂದ್ ಹೀರೊ ಆಗಿ ಗಮನ ಸೆಳೆದಿದ್ದಾರೆ. ಸದ್ಯ ಇನ್ನು ಹೆಸರಿಡದ ಶ್ರೀರಾಮ್ ಆದಿತ್ಯ ನಿರ್ದೇಶನದ ಚಿತ್ರದಲ್ಲಿ ನಟಿಸ್ತಿದ್ದಾರೆ.


Click it and Unblock the Notifications











