ನಾನು ಗರ್ಭಿಣಿ ಆಗಿದ್ದಾಗ ಹಾರರ್ ಸಿನಿಮಾ ನೋಡಿ ಅಬಾರ್ಷನ್ ಆಗಿತ್ತು.. ಖ್ಯಾತ ನಟಿ ಭಾವುಕ
ಮಹಿಳೆಯರಿಗೆ ತಾಯ್ತನ ಹಂಬಲ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭಧಾರಣೆ ಎನ್ನುವುದು ಸವಾಲಿನ ಸಂಗತಿಯಾಗಿಬಿಟ್ಟಿದೆ. ಕನಸು ನನಸಾಗುತ್ತಿದೆ ಎನ್ನುವ ಸಮಯದಲ್ಲಿ ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಗರ್ಭಪಾತವಾಗುತ್ತದೆ. ಆಗ ಮಹಿಳೆಗೆ ಆಗುವ ಮಾನಸಿಕ ನೋವು, ಸಂಕಷ್ಟ ಅಷ್ಟಿಷ್ಟಲ್ಲ. ಕೆಲ ನಟಿಯರು ಕೂಡ ಇಂತಹ ನೋವಿನಿಂದ ನರಳಿದ್ದಾರೆ. ಆ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ತೆಲುಗು ನಿರೂಪಕಿ ಹಾಗೂ ನಟಿ ಉದಯಭಾನು ಅವಳಿ ಮಕ್ಕಳ ತಾಯಿ. ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದರೆ ಮೊದಲ ಬಾರಿ ಗರ್ಭಧರಿಸಿ ಬಳಿಕ ಗರ್ಭಪಾತವಾದಾಗ ಎದುರಿಸಿದ ಆಘಾತ, ನಂತರ ಖಿನ್ನತೆಗೆ ಜಾರಿದ್ದ ಬಗ್ಗೆ ಸಾಕ್ಷಿ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಹಾರರ್ ಸಿನಿಮಾ ನೋಡಿ ಎಡವಟ್ಟು ಆಗಿತ್ತು ಎಂದು ಆ ಬೇಸರದ ಸಂಗತಿ ಬಿಚ್ಚಿಟ್ಟಿದ್ದಾರೆ. ಅಂದಹಾಗೆ ಉದಯಭಾನು ಒಂದು ಕನ್ನಡ ಸಿನಿಮಾದಲ್ಲಿ ಕೂಡ ಆಕೆ ನಟಿಸಿದ್ದಾರೆ.

ಮೊದಲ ಬಾರಿ ಗರ್ಭಿಣಿ ಆಗಿದ್ದಾಗ ನಾನು ವಿದೇಶಕ್ಕೆ ತೆರಳಬೇಕಿತ್ತು. ವಿಮಾನ ಪ್ರಯಾಣಕ್ಕೂ ಮುನ್ನ ಅನುಮಾನ ಬಂದು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದೆ. ನಾನು ಗರ್ಭಿಣಿ ಎನ್ನುವ ವಿಷಯ ಗೊತ್ತಾಯಿತು. ವೈದ್ಯರ ಬಳಿ ವಿಚಾರಿಸಿದೆ. ಈ ಸಮಯದಲ್ಲಿ ವಿಮಾನ ಪ್ರಯಾಣ ಪರವಾಗಿಲ್ಲವೇ ಎಂದು ಕೇಳಿದ್ದೆ. ಪರವಾಗಿಲ್ಲ, ಗಗನ ಸಖಿಯರು ಕೂಡ ಗರ್ಭಿಣಿಯಾಗಿದ್ದಾಗ ಕೆಲಸ ಮಾಡುತ್ತಾರೆ. ಹಾಗಾಗಿ ವಿಮಾನ ಪ್ರಯಾಣ ಸಮಸ್ಯೆ ಏನಿಲ್ಲ ಎಂದು ಸಲಹೆ ನೀಡಿದರು. ಸರಿ ಎಂದು ನಾನು ಹೋಗಿದ್ದೆ. ಬಹಳ ಕೆಲಸ ಇತ್ತು. ಸುಸ್ತಾಗಿದ್ದೆ. ಅಲ್ಲಿ ಪರೀಕ್ಷೆ ಮಾಡಿಸಿದಾಗ ಕೂಡ ಎಲ್ಲಾವೂ ನಾರ್ಮಲ್ ಆಗಿದೆ ಎಂದರು. ಖುಷಿಯಾಯಿತು ಎಂದು ಉದಯಭಾನು ನೆನಪಿಸಿಕೊಂಡಿದ್ದಾರೆ.
ನನಗೆ ಫೋಬಿಯಾ ಇದೆ. ಹಾರರ್ ಸಿನಿಮಾ, ಕ್ರೈಂ ಸನ್ನಿವೇಶಗಳನ್ನು ನೋಡಲ್ಲ. ನೋಡಿದರೆ ಭಯವಾಗುತ್ತದೆ. ಹಾಗಾಗಿ ಚಿಕ್ಕಂದಿನಿಂದ ಅಂತಹ ಸಾಹಸ ಮಾಡಲ್ಲ ಎಂದು ಉದಯಭಾನು ತಿಳಿಸಿದ್ದಾರೆ. "ಅವತ್ತು ನಮ್ಮ ಕಜೀನ್ಸ್ ಎಲ್ಲರೂ ಸಿನಿಮಾ ನೋಡ್ತಿದ್ರು. ಆಗ ಅಪ್ಪಿತಪ್ಪಿ ನಾನು ಒಂದು ಭಯಾನಕ ದೃಶ್ಯವನ್ನು ನೋಡಿಬಿಟ್ಟೆ. ಕೂಡಲೇ ಹ್ಞಾಂ.. ಎಂದು ನಿಟ್ಟುಸಿರು ಬಿಟ್ಟೆ.. ಮೈ ನಡುಗಿದಂತಾಯಿತು.. ಬಳಿಕ ನನ್ನ ದೇಹದಿಂದ ಏನೋ ಹೊರಗೆ ಹೋಗುತ್ತಿರುವಂತೆ ಭಾಸವಾಯಿತು. ಅನುಮಾನ ಬಂದು ಕೂಡಲೇ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದೆವು. ಎರಡು ಗಂಟೆ ವೈದ್ಯರು ಏನೇನೊ ಪರೀಕ್ಷೆ ಮಾಡಿದ್ರು, ಏನು ಹೇಳಲಿಲ್ಲ. ಫ್ಲೋರ್, ಬಾತ್ರೂಂ ತುಂಬಾ ರಕ್ತ. ಅಂದರೆ ಅಬಾರ್ಷನ್ ಆಗಿತ್ತು. ಒಂದು ವರ್ಷ ಖಿನ್ನತೆಗೆ ಜಾರಿದ್ದೆ" ಎಂದು ಉದಯಭಾನು ಎಮೋಷನಲ್ ಆಗಿದ್ದಾರೆ.

ನಾನು ತಮಾಷೆ ಮಾಡುತ್ತಾ ಎಲ್ಲರನ್ನು ರಂಜಿಸುತ್ತಿದ್ದೆ. ಆದರೆ ಅಂತರಾಳದಲ್ಲಿ ಬಹಳ ನೋವು ಅನುಭವಿಸುತ್ತಿದ್ದೆ. "ದೇವರ ಜೊತೆ ಅಕ್ಷರಶಃ ಜಗಳ ಮಾಡುತ್ತಿದ್ದೆ. ಯಾಕೆ ಹೀಗೆ ಮಾಡಿಬಿಟ್ಟೆ, ಕೊಟ್ಟಂತೆ ಕೊಟ್ಟು ಕಿತ್ತುಕೊಂಡುಬಿಟ್ಟೆ, ನನಗೆ ನನ್ನ ಮಗು ಬೇಕೇಬೇಕು ಎಂದು ಕೇಳುತ್ತಿದ್ದೆ.. ಒಂದು ವರ್ಷದ ಬಳಿಕ ಮತ್ತೆ ಗರ್ಭಿಣಿ ಆಗಿದ್ದೆ. ಪರೀಕ್ಷೆ ಮಾಡಿಸಿದ್ರೆ ಅವಳಿ ಮಕ್ಕಳು ಎಂದು ಗೊತ್ತಾಯ್ತು.. ದೇವರಿಗೆ ನಾನು ಎಷ್ಟು ಇಷ್ಟ ನೋಡಿ. ಕಳೆದುಕೊಂಡ ಮಗುವನ್ನು ಮರಳಿ ಕೊಟ್ಟುಬಿಟ್ಟ. ಒಂದು ಎಕ್ಸ್ಟ್ರಾ ಕೊಟ್ಟ" ಎಂದು ಉದಯಭಾನು ವಿವರಿಸಿದ್ದಾರೆ.
ತೆಲಂಗಾಣ ಮೂಲದ ನಟಿ ಉದಯಭಾನು 1994ರಲ್ಲಿ ಬಂದಿದ್ದ 'ಎರ್ರಸೈನ್ಯಂ' ಚಿತ್ರದಲ್ಲಿ ಮೊದಲಬಾರಿಗೆ ನಟಿಸಿದ್ದರು. 'ಅಳಿಯ ಅಲ್ಲ ಮಗಳ ಗಂಡ' ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಬಣ್ಣ ಹಚ್ಚಿದ್ದರು. 'ಲೀಡರ್', 'ಜುಲಾಯಿ', 'ಮಧುಮತಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.


Click it and Unblock the Notifications