ಮಾ ಭವನದಲ್ಲಿ ಮತ್ತೆ ಗಲಾಟೆ: ಚಪ್ಪಲಿಯಲ್ಲಿ ಹೊಡೆಯುತ್ತೇನೆಂದ ನಟಿ!
ತೆಲುಗು ಚಿತ್ರರಂಗದ ಕಲಾವಿದರ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆ ಆರೋಪ-ಪ್ರತ್ಯಾರೋಪಗಳಿಗೆ, ವೈಯಕ್ತಿಕ ನಿಂದನೆಗೆ, ದೂಷಣೆಗೆ, ಪ್ರಾದೇಶಿಕತೆಗೆ ವೇದಿಕೆ ಒದಗಿಸಿತ್ತು. ಹಲವು ವಾದ-ವಿವಾದಗಳ ಬಳಿಕ ಚುನಾವಣೆ ಮುಗಿದಿದ್ದು, ಪ್ರಕಾಶ್ ರೈ ಎದುರು ಗೆದ್ದ ಮಂಚು ವಿಷ್ಣು ಮಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚುನಾವಣೆ ಮುಗಿದ ಬಳಿಕ ಮಾ ವಿವಾದಗಳು ಮುಗಿಯುತ್ತವೆ ಎನ್ನಲಾಗಿತ್ತು, ಆದರೆ ಹಾಗಾಗಿಲ್ಲ. ಈಗಲೂ ವಿವಾದಗಳು, ಪರಸ್ಪರ ದೂಷಣೆಗಳು, ಕಾಲೆಳೆತಗಳು ಜಾರಿಯಲ್ಲಿವೆ. ಮೋಹನ್ ಬಾಬು ಅಂಥ ಹಿರಿಯ ನಟರೇ ಚುನಾವಣಾ ದ್ವೇಷವನ್ನು ಮುಂದುವರೆಸುವ ಮಾತುಗಳನ್ನಾಡಿದ್ದಾರೆ.
ಮಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಮಂಚು ವಿಷ್ಣು ಆಯೋಜಿಸಿದ್ದರು. ಈ ವೇಳೆ ಮಾ ಕಚೇರಿಗೆ ನುಗ್ಗಿದ ನಟಿ ಶ್ರೀನಿಜ ಮಂಚು ವಿಷ್ಣು, ಮೋಹನ್ ಬಾಬು ಹಾಗೂ ಮಾ ಮಾಜಿ ಅಧ್ಯಕ್ಷ ನರೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋಹನ್ ಬಾಬು ಬಾರೋ ಕೆಳಗೆ: ಶ್ರೀನಿಜಾ ಸವಾಲ್
ಮಂಚು ವಿಷ್ಣು ಪ್ರಮಾಣ ವಚನ ಕಾರ್ಯಕ್ರಮದ ವೇದಿಕೆ ಬಳಿ ತೆರಳಿ, ಹಿರಿಯ ನಟ ಮೋಹನ್ ಬಾಬುಗೆ ನೇರವಾಗಿ ಆವಾಜ್ ಹೊಡೆದ ನಟಿ ಶ್ರೀನಿಜ, ''ಏಯ್ ಮೋಹನ್ ಬಾಬು, ಬಾರೋ ಕೆಳಗೆ, ಕಾಳಿಯಂತೆ ಬಂದಿದ್ದೀನಿ, ನಿನಗೆ ಚಾಲೆಂಜ್ ಮಾಡ್ತೀನಿ, ನನ್ನನ್ನು ಎದುರಿಸು, ಮಹಿಳೆಯರೆಂದರೆ ನಿನಗೆ ಗೌರವ ಇಲ್ಲವಾ? ಪ್ರಶ್ನೆ ಮಾಡಿದವರನ್ನು ಕೆಟ್ಟ ಭಾಷೆಯಲ್ಲಿ ಬೈಯ್ಯುತ್ತೀಯ, ಹೊಡೆಯಲು ಬರುತ್ತೀಯ? ನನ್ನ ವಿಷಯ ನನಗೆ ಗೊತ್ತಿಲ್ಲ, ನಿನ್ನ ಆಟಗಳು ನನ್ನ ಬಳಿ ನಡೆಯುವುದಿಲ್ಲ. ಪವನ್ ಕಲ್ಯಾಣ್ ಅನ್ನು ರಾಜಕೀಯವಾಗಿ ಎದುರಿಸಲು ಆಗದೆ ಮಾ ಮೂಲಕ ರಾಜಕೀಯ ಮಾಡುತ್ತಿದ್ದೀಯ? ಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದಾರೆ.

ಮಾಧ್ಯಮಗಳ ಮುಂದೆ ಶ್ರೀನಿಜ ಫೈಯರ್
ಶ್ರೀನಿಜ ಅನ್ನು ಪೊಲೀಸರು ಅಲ್ಲಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶ್ರೀನಿಜ, ''ಸಾಲ ತೀರಿಸಿಕೊಳ್ಳಲು ಸಿಎಂ ಜಗನ್ ಮೋಹನ್ರೆಡ್ಡಿ ಬಳಿ ಹೋಗಿ ಆತನ ಕಾಲು ಹಿಡಿದು, ಪವನ್ ಕಲ್ಯಾಣ್ಗೆ ಮಾ ಸಂಘದಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡುತ್ತೇನೆ ಎಂದು ಹೇಳಿ ಕೋಟ್ಯಂತರ ರುಪಾಯಿ ಹಣ ತೆಗೆದುಕೊಂಡು ಬಂದಿದ್ದಾನೆ ಆ ಮೋಹನ್ ಬಾಬು. ಅವನು ಮತ್ತು ಅವನ ಕುಟುಂಬದವರು ಈ ಕೂಡಲೇ ಮಾ ಸಂಘ ಬಿಟ್ಟು ಹೊರಡಬೇಕು'' ಎಂದು ಶ್ರೀನಿಜ ಕೂಗಾಡಿದ್ದಾರೆ.

ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದ ಶ್ರೀನಿಜ
ಶ್ರೀನಿಜ ಮಾಧ್ಯಮದವರ ಬಳಿ ಮಾತನಾಡುವಾಗ ಅವರನ್ನು ಮೋಹನ್ ಬಾಬು ಕಡೆಯ ವ್ಯಕ್ತಿ ಅಲ್ಲಿಂದ ಕರೆದೊಯ್ಯಲು ಪ್ರಯತ್ನಿಸಿದ್ದಾನೆ. ಶ್ರೀನಿಜ, ಮೋಹನ್ಬಾಬು ಮೇಲೆ ವಾಗ್ದಾಳಿ ಮುಂದುವರೆಸಿದಾಗ ಮಾಧ್ಯಮಗಳ ಮುಂದೆಯೇ ಶ್ರೀನಿಜಾರನ್ನು ಉದ್ದೇಶಿಸಿ, 'ನಿನಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ' ಎಂದಿದ್ದಾನೆ ಆ ವ್ಯಕ್ತಿ. ಆಗ ಶ್ರೀನಿಜ ಸಹ ನಿನ್ನನ್ನು ಮೊದಲು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಜಗಳ ಆರಂಭಿಸಿದ್ದಾರೆ. ನಂತರ ಆ ವ್ಯಕ್ತಿಯನ್ನು ಅಲ್ಲಿಂದ ಕರೆದೊಯ್ಯಲಾಗಿದೆ.

ನರೇಶ್ ವಿರುದ್ಧ ತೀವ್ರ ವಾಗ್ದಾಳಿ
ಈ ಹಿಂದೆ ಮೋಹನ್ ಬಾಬು ಮಾ ಅಧ್ಯಕ್ಷನಾಗಿದ್ದಾಗ ಏನು ಮಾಡಲಿಲ್ಲ. ಈಗ ಮಂಚು ವಿಷ್ಣು ಸಹ ಏನೂ ಮಾಡುವುದಿಲ್ಲ. ಮಂಚು ಕುಟುಂಬದವರಿಂದ ಕಲಾವಿದರಿಗೆ ಒಳ್ಳೆಯದಾಗುವುದಿಲ್ಲ. ಪ್ರಕಾಶ್ ರಾಜ್ ಬಹಳ ಒಳ್ಳೆಯ ಮನುಷ್ಯ, ಆತ ಕಲಾವಿದರ ಉದ್ದಾರಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದ. ಆದರೆ ಆತನ ಸಾಲ, ಮನೆಯ ವಿಷಯ, ಹೆಂಡತಿ ವಿಷಯ, ಮಕ್ಕಳ ವಿಷಯಗಳನ್ನೆಲ್ಲ ಚುನಾವಣೆಗೆ ಎಳೆದು ತಂದು ಆತನನ್ನು ಅವಮಾನ ಮಾಡಿದರು. ಆತ ಮಾಧ್ಯಮಗಳ ಮುಂದೆ ಭಾವುಕರಾದಾಗ, ಅದನ್ನು ಸಹ ಮಾ ಮಾಜಿ ಅಧ್ಯಕ್ಷ ಬಹಳ ಕೆಟ್ಟ ಪದ ಬಳಸಿ ಗೇಲಿ ಮಾಡಿದ. (ವಿಧವೆಯರಿಗೆ ಬಳಸುವ ಪದವನ್ನು ಬೈಗುಳವಾಗಿ ನರೇಶ್ ಬಳಸಿದ್ದರು) ನಿನಗೆ ಮಹಿಳೆಯರೆಂದರೆ ಗೌರವ ಇಲ್ಲವಾ? ಮಹಿಳೆಯರ ಎದುರು ಇಟ್ಟುಕೊಳ್ಳಬೇಡ, ಮುಳುಗಿಸಿ ಬಿಡುತ್ತೇವೆ'' ಎಂದು ಎಚ್ಚರಿಕೆ ನೀಡಿದ್ದಾರೆ ಶ್ರೀನಿಜ.


Click it and Unblock the Notifications











