Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಕ್ರಾಂತಿಗಿಲ್ಲ ಕನ್ನಡದ ದೊಡ್ಡ ಚಿತ್ರ; ಬಳ್ಳಾರಿ to ಬೆಂಗಳೂರು ತೆಲುಗು - ತಮಿಳು ಚಿತ್ರಗಳ ಅಬ್ಬರ!
ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಸ್ಟಾರ್ ನಟರ ಕನಿಷ್ಟ ಯಾವುದಾದರೂ ಎರಡು ಚಿತ್ರಗಳಾದರೂ ಬಿಡುಗಡೆಯಾಗಲು ಸಜ್ಜಾಗಿ ಬಿಡುತ್ತವೆ. ಅದೇ ರೀತಿ ಈ ವರ್ಷವೂ ಸಹ ತೆಲುಗಿನಲ್ಲಿ ಎರಡು ಸ್ಟಾರ್ ನಟರ ಚಿತ್ರಗಳು ಹಾಗೂ ತಮಿಳಿನಲ್ಲಿ ಎರಡು ಸ್ಟಾರ್ ನಟರ ಚಿತ್ರಗಳು ಸಂಕ್ರಾಂತಿ ಪ್ರಯುಕ್ತ ತೆರೆಗೆ ಬರಲು ಸಜ್ಜಾಗಿವೆ.
ಇನ್ನು ತೆಲುಗು ರಾಜ್ಯಗಳು ಹಾಗೂ ತಮಿಳು ನಾಡಿನಲ್ಲಿ ಸಂಕ್ರಾಂತಿಯನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದರಿಂದ ಸಾಲು ಸಾಲು ರಜೆ ಇರುತ್ತೆ. ಈ ರಜೆಯನ್ನು ಸದುಪಯೋಗಪಡಿಸಿಕೊಂಡು ದೊಡ್ಡ ಕಲೆಕ್ಷನ್ ಮಾಡುವ ಸಲುವಾಗಿ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ ನಿರ್ಮಾಪಕರು. ಆದರೆ ಕನ್ನಡ ಚಿತ್ರರಂಗದವರು ಮಾತ್ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೊಡ್ಡ ಚಿತ್ರಗಳನ್ನು ಬಿಡುಗಡೆಗೊಳಿಸುವ ಸಾಹಸ ಮಾಡಲು ಮುಂದಾಗಲ್ಲ.
ಈ ವರ್ಷವೂ ಕೂಡ ಅದೇ ಕಥೆ ಮುಂದುವರಿದಿದೆ. ಇನ್ನು ಕನ್ನಡ ಚಿತ್ರರಂಗದವರ ಈ ನಡೆ ಕನ್ನಡ ಸಿನಿ ರಸಿಕರ ಬೇಸರಕ್ಕೂ ಕಾರಣವಾಗಿದೆ. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಿ ನಮ್ಮ ನೆಲದಲ್ಲೇ ತೆಲುಗು ಹಾಗೂ ತಮಿಳು ಚಿತ್ರಗಳು ಕೋಟಿ ಕೋಟಿ ಗಳಿಸುವಾಗ ಕನ್ನಡ ಸಿನಿಮಾ ಮಂದಿಯೇಕೆ ಸುಮ್ಮನೆ ಕೂರುತ್ತಾರೆ ಎಂಬುದು ಕನ್ನಡ ಸಿನಿ ರಸಿಕರ ಬೇಸರಕ್ಕೆ ಕಾರಣ. ಹೀಗೆ ಕನ್ನಡದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಾವುದೇ ಸ್ಟಾರ್ ಸಿನಿಮಾ ಬಿಡುಗಡೆಯಾಗದ ಕಾರಣ ರಾಜ್ಯಾದ್ಯಂತ ತೆಲುಗು ಹಾಗೂ ತಮಿಳು ಚಿತ್ರಗಳ ಅಬ್ಬರ ಜೋರಾಗಿದೆ. ಬಳ್ಳಾರಿ ಟು ಬೆಂಗಳೂರು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಲಿರುವ ಪರಭಾಷಾ ಚಿತ್ರಗಳು ಅಬ್ಬರಿಸಲು ಸಿದ್ಧವಾಗಿವೆ.
ಬಳ್ಳಾರಿಯ ಎಲ್ಲಾ ಮುಖ್ಯ ಚಿತ್ರಮಂದಿರಗಳಲ್ಲೂ ಪರಭಾಷಾ ಚಿತ್ರಗಳ ಬಿಡುಗಡೆ
ಬಳ್ಳಾರಿ ತೆಲುಗು ರಾಜ್ಯದ ಗಡಿ ಜಿಲ್ಲೆಯಾಗಿರುವುದರಿಂದ ಅಲ್ಲಿ ತೆಲುಗು ಚಿತ್ರಗಳು ಬಿಡುಗಡೆಯಾಗುವುದು ಕಾಮನ್. ಇನ್ನು ಈ ಸಂಕ್ರಾಂತಿಯಂದು ಬಿಡುಗಡೆಯಾಗಲಿರುವ ತೆಲುಗು ಚಿತ್ರಗಳ ಜತೆ ತಮಿಳು ಚಿತ್ರಗಳೂ ಸಹ ಬಳ್ಳಾರಿಯಲ್ಲಿ ಮುಖ್ಯ ಚಿತ್ರಮಂದಿರಗಳನ್ನು ಪಡೆದುಕೊಂಡಿವೆ. ಈ ಮೂಲಕ ಬಳ್ಳಾರಿಯ ಎಲ್ಲಾ ಪ್ರಮುಖ ಚಿತ್ರಮಂದಿರಗಳೂ ಪರಭಾಷಾ ಚಿತ್ರಗಳ ಪಾಲಾಗಿದ್ದು, ಸಂಕ್ರಾಂತಿ ಪ್ರಯುಕ್ತ ತೆರೆಗೆ ಬರುವ ಕನ್ನಡ ಚಿತ್ರಗಳಿಗೆ ಬಳ್ಳಾರಿ ನಗರದಲ್ಲಿ ಮುಖ್ಯ ಚಿತ್ರಮಂದಿರಗಳು ಲಭ್ಯವಿರುವುದಿಲ್ಲ. ಬಳ್ಳಾರಿಯ ಪ್ರಮುಖ ಚಿತ್ರಮಂದಿರಗಳಾದ ನಟರಾಜದಲ್ಲಿ ವಾಲ್ತೇರು ವೀರಯ್ಯ, ರಾಧಿಕಾ ಚಿತ್ರಮಂದಿರದಲ್ಲಿ ವೀರ ಸಿಂಹ ರೆಡ್ಡಿ, ರಾಘವೇಂದ್ರ ಚಿತ್ರಮಂದಿರದಲ್ಲಿ ವಾರಿಸು ಹಾಗೂ ಶಿವ ಚಿತ್ರಮಂದಿರದಲ್ಲಿ ತುನಿವು ತೆರೆಗೆ ಬರುತ್ತಿವೆ.
ಬೆಂಗಳೂರಿನಲ್ಲಿ ನಾಲ್ಕು ಗಂಟೆಯಿಂದಲೇ ಪ್ರದರ್ಶನ
ಇನ್ನು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಚಿತ್ರಗಳ ಪ್ರದರ್ಶನಗಳು ಆರಂಭವಾಗಲಿವೆ. ಚಿತ್ರಗಳ ಬಿಡುಗಡೆಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ತುನಿವು ಚಿತ್ರದ ಬೆಂಗಳೂರು ಬುಕಿಂಗ್ ಓಪನ್ ಆಗಿದ್ದು, ಮುಂಜಾನೆ ಪ್ರದರ್ಶನಗಳ ಟಿಕೆಟ್ಗಳು ವೇಗವಾಗಿ ಮಾರಾಟವಾಗುತ್ತಿವೆ.
ನಿರಾಸೆ ಮೂಡಿಸಿದ ಟ್ರೈಲರ್ಗಳು
ಒಂದೆಡೆ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಸಿನಿಮಾ ಪ್ರೇಮಿಗಳು ತುನಿವು ಹಾಗೂ ವಾರಿಸು ಎರಡೂ ಟ್ರೈಲರ್ಗಳೂ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತುನಿವು ಮನಿ ಹೈಸ್ಟ್ ಕುರಿತಾದ ಕಥೆಯನ್ನು ಹೊಂದಿದ್ದರೆ, ವಾರಿಸು ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿರಲಿದೆ. ಇನ್ನು ವೀರ ಸಿಂಹ ರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಟ್ರೈಲರ್ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸ್ಟಾರ್ ನಟರ ಚಿತ್ರಗಳಿಲ್ಲದ ಕಾರಣ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳದ್ದೇ ಅಬ್ಬರವಾಗಿಬಿಟ್ಟಿದೆ.