'ಬ್ರಹ್ಮಾ'ನಂದಂ ಸೃಷ್ಟಿಸಿದ ಸುಂದರ ಗಣೇಶ ಮೂರ್ತಿ; ಇಲ್ಲಿದೆ ವೀಡಿಯೋ
ತೆಲುಗು ಹಾಸ್ಯನಟ ಬ್ರಹ್ಮಾನಂದಂ ತಮ್ಮ ಕಾಮಿಡಿ ಟೈಮಿಂಗ್ನಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಸೂಪರ್ ಸ್ಟಾರ್ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡಿದ್ದಾರೆ. ಬಹುಮುಖ ಪ್ರತಿಭೆ ಬ್ರಹ್ಮಾನಂದಂ ಅವರೊಳಗೊಬ್ಬ ಅದ್ಭುತ ಚಿತ್ರಕಲೆಗಾರನಿದ್ದಾನೆ.
ಈ ಹಿಂದೆ ಬ್ರಹ್ಮಾನಂದಂ, ವೆಂಕಟೇಶ್ವರ ಸ್ವಾಮಿಯ ಚಿತ್ರ ಬಿಡಿಸಿದ್ದು ಭಾರೀ ವೈರಲ್ ಆಗಿತ್ತು. ಅವರ ಪ್ರತಿಭೆಗೆ ಜನ ಬಹುಪರಾಕ್ ಎಂದಿದ್ದರು. ಅಷ್ಟೇ ಅಲ್ಲ ಕೋವಿಡ್ ಸಮಯದಲ್ಲಿ ತಾವೇ ಮನೆಯಲ್ಲಿ ಗಣೇಶ ಮೂರ್ತಿ ತಯಾರಿಸಿ ಪೂಜೆ ಸಲ್ಲಿಸಿದ್ದರು. ಗಜಮುಖನ ಪುಟ್ಟ ಮೂರ್ತಿಯನ್ನು ಬಹಳ ಸೊಗಸಾಗಿ ಅವರು ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ಆಗ ವೈರಲ್ ಆಗಿತ್ತು. ಗಣೇಶ ಹಬ್ಬದ ಸಂಭ್ರಮದಲ್ಲಿ ಮತ್ತೆ ಆ ಫೋಟೊ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಾರೆ.

ಈಗ ಅಂಗಡಿಗಳಲ್ಲಿ ತರಹೇವಾರಿ ಗಣೇಶ ಮೂರ್ತಿಗಳು ಸಿಗುತ್ತವೆ. ಅರ್ಧ ಅಡಿಯಿಂದ ಹಿಡಿದು 20, 30 ಅಡಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಆಂಧ್ರ, ತೆಲಂಗಾಣದಲ್ಲಿ 50, 60 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಇದೆ. ಈ ಬಾರಿ ಖೈರತಾಬಾದ್ನಲ್ಲಿ 69 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಂಗಡಿಯಿಂದ ಎಷ್ಟೇ ಗಣೇಶಮೂರ್ತಿಯನ್ನು ತಂದು ಪೂಜೆ ಮಾಡಿದರೂ ಮನೆಯಲ್ಲೇ ತಮ್ಮ ಕೈಯಾರೆ ಗಣೇಶ ಮೂರ್ತಿ ತಯಾರಿಸಿ ಪೂಜಿಸುವುದು ಕೆಲವರಿಗೆ ಇಷ್ಟ.
ಕೆಲ ವರ್ಷಗಳ ಹಿಂದೆ ಹೀಗೆ ಮನೆಯಲ್ಲೇ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿ ಪೂಜೆ ಮಾಡುವುದನ್ನು ಜನ ರೂಢಿಸಿಕೊಂಡಿದ್ದರು. ಕೊವಿಡ್ ಸಮಯದಲ್ಲಿ ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ನೀಡಿರಲಿಲ್ಲ. ಆಗ ಕೆಲ ಸೆಲೆಬ್ರೆಟಿಗಳು ಹೀಗೆ ಮನೆಯಲ್ಲೇ ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಪೂಜೆ ಮಾಡಿದ್ದರು. ಪರಿಸರ ಸ್ನೇಹಿ ಗಣೇಶನ ಮೂರ್ತಿ ಬಗ್ಗೆ ಜಾಗೃತಿ ಹೆಚ್ಚಾದಂತೆ ಹೀಗೆ ಮನೆಗಳಲ್ಲಿ ಗಣೇಶ ಮೂರ್ತಿ ತಯಾರಿಸುವುದನ್ನು ಕೆಲರು ರೂಢಿಸಿಕೊಂಡಿದ್ದಾರೆ.
ಒಂದು ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯ ನಟ ಬ್ರಹ್ಮಾನಂದಂ ನಟಿಸಿದ್ದಾರೆ. ಈ ಮೂಲಕ ಗಿನ್ನಿಸ್ ಬುಕ್ನಲ್ಲಿ ಅವರ ಹೆಸರು ದಾಖಲಾಗಿದೆ. ಪದ್ಮಶ್ರೀ ಸೇರಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ನಟನಾಗಿ ಮಾತ್ರವಲ್ಲದೇ ಕಂಠದಾನ ಕಲಾವಿದನಾಗಿ ಗಾಯಕನಾಗಿಯೂ ಅವರು ಗುರ್ತಿಸಿಕೊಂಡಿದ್ದಾರೆ.
ತೆಲುಗು ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲಿ ಕೂಡ ಬ್ರಹ್ಮಾನಂದಂ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. 'ಜ್ಯೂನಿಯರ್' ಚಿತ್ರದ ಹಾಡಿನ ಝಲಕ್ನಲ್ಲಿ ಮಿಂಚಿದ್ದರು. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ 'ನಿನ್ನಿಂದಲೇ' ಹಾಗೂ ಉಪೇಂದ್ರ ನಟನೆಯ 'ಐ ಲವ್ ಯು' ಚಿತ್ರದಲ್ಲಿ ಬ್ರಹ್ಮಾನಂದಂ ಬಣ್ಣ ಹಚ್ಚಿದ್ದರು. ಒಂದೆರಡು ಹಿಂದಿ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಬರುವ ಮುನ್ನ ಬ್ರಹ್ಮಾನಂದಂ ತೆಲುಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಅದೇ ಸಮಯದಲ್ಲಿ ರಂಗಭೂಮಿ ಗೀಳು ಶುರುವಾಗಿತ್ತು. ನಟನೆಯ ಜೊತೆಗೆ ಮಿಮಿಕ್ರಿ ಮಾಡುತ್ತಿದ್ದರು. ಡಿಡಿ ತೆಲುಗು ವಾಹಿನಿಯ 'ಪಕಪಕಲು' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ನಿರ್ದೇಶಕ ಜಂದ್ಯಾಲ ಕಣ್ಣಿಗೆ ಬಿದ್ದು ಚಿತ್ರರಂಗ ಪ್ರವೇಶಿಸಿದ್ದರು. ಚಿರಂಜೀವಿ ಜೊತೆಗಿನ ಸಿನಿಮಾಗಳಲ್ಲಿ ಬ್ರಹ್ಮಾನಂದಂ ಕಾಮಿಡಿ ಹಿಟ್ ಆಗಿ ಮುಂದೆ ಬಹುಬೇಡಿಕೆಯ ಹಾಸ್ಯನಟನಾಗಿ ಬೆಳೆದರು.


Click it and Unblock the Notifications











