ಕೊರಿಯೋಗ್ರಫರ್ ಜಾನಿ ಮಾಸ್ಟರ್ಗೆ ಬಿಗ್ ರಿಲೀಫ್
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿದ್ದ ಜಾನಿ ಮಾಸ್ಟರ್ಗೆ ಜಾಮೀನು ಮಂಜೂರಾಗಿದೆ. ತೆಲಂಗಾಣ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. ಜಾನಿ ಮಾಸ್ಟರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಡ್ಯಾನ್ಸರ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಸಂತ್ರಸ್ತ ಯುವತಿ ನೀಡಿದ ದೂರಿನ ಅನ್ವಯ ಸೆಪ್ಟೆಂಬರ್ 16ರಂದು ನರಸಿಂಗಿ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಸೆಕ್ಷನ್ 376, 506 ಮತ್ತು 323ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಗೋವಾದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ದೌರ್ಜನ್ಯ ಎಸಗಿದ್ದ ಆರೋಪ ಹಿನ್ನೆಲೆ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಪ್ರಕರಣ ಕೂಡ ದಾಖಲಾಗಿದೆ.

ಬಂಧನದ ಬಳಿಕ ಜಾನಿ ಮಾಸ್ಟರ್ನ ಚಂಚಲಗೂಡ್ ಜೈಲಿಗೆ ರಿಮ್ಯಾಂಡ್ ಮಾಡಿದ್ದರು. 2 ವರ್ಷಗಳ ಹಿಂದೆ ಬಂದ ತಮಿಳಿನ 'ತಿರುಚಿತ್ರಾಂಬಲಂ' ಚಿತ್ರದ ಕೊರಿಯೋಗ್ರಫಿಗಾಗಿ ಜಾನಿ ಮಾಸ್ಟರ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿ ಸ್ವೀಕರಿಸಲು ಅಕ್ಟೋಬರ್ 6ರಿಂದ 9ರವರೆಗೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದರು.
ಲೈಂಗಿಕ ದೌರ್ಜನ್ಯ ಆರೋಪ ಇರುವುದರಿಂದ ಜಾನಿ ಮಾಸ್ಟರ್ಗೆ ರಾಷ್ಟ್ರಪ್ರಶಸ್ತಿ ನೀಡಬಾರದು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಹಾಗಾಗಿ ಪ್ರಶಸ್ತಿ ರದ್ದು ಮಾಡಿ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ ಮತ್ತೆ ಜಾನಿ ಮಾಸ್ಟರ್ ಜೈಲಿಗೆ ಹೋಗಿದ್ದರು.
ಜಾನಿ ಮಾಸ್ಟರ್ ಡ್ಯಾನ್ಸ್ ತಂಡದಲ್ಲೇ ಇದ್ದ ಯುವತಿ ಆತನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಳು. ಸಾಕಷ್ಟು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಳು. ಸಿನಿಮಾ ಸೆಟ್ನಲ್ಲಿ ಕೂಡ ತರಲೆ ಮಾಡುತ್ತಿದ್ದ, ಕ್ಯಾರವಾನ್ನಲ್ಲಿಯೂ ಕಿರುಕುಳ ನೀಡಿದ್ದ, ತಾನು ಅಪ್ರಾಪ್ತೆ ಆಗಿದ್ದಾಗಲೇ ನನ್ನ ಮೇಲೆ ದೌರ್ಜನ್ಯ ಎಸಗಿದ್ದ ಎಂದು ಸಂತ್ರಸ್ತ ಯುವತಿ ಹೇಳಿಕೊಂಡಿದ್ದಳು.
ಲೈಂಗಿಕ ಕಿರುಕುಳ ನೀಡಿದ್ದು ಮಾತ್ರವಲ್ಲದೇ ತನನ್ನು ಮದುವೆಯಾಗುವಂತೆ ಜಾನಿ ಮಾಸ್ಟರ್ ಪೀಡಿಸುತ್ತಿದ್ದ. ಅದಕ್ಕಾಗಿ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದ ಎಂದು ಪೊಲೀಸರ ಮುಂದೆ ಯುವತಿ ಹೇಳಿಕೆ ನೀಡಿದ್ದಳು. ಜಾನಿ ಮಾಸ್ಟರ್ ಪತ್ನಿ ಆಯೇಷಾ ಮೇಲೆಯೂ ಯುವತಿ ಆರೋಪ ಮಾಡಿದ್ದರು. ಗಂಡನಿಗೆ ಪತ್ನಿಯೇ ಬೆಂಬಲವಾಗಿ ನಿಂತಿದ್ದಳು, ಆಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಳು ಎಂದು ಆರೋಪಿಸಿದ್ದಾಳೆ.
ಯುವತಿ ಆರೋಪಗಳನ್ನು ಜಾನಿ ಮಾಸ್ಟರ್ ಪತ್ನಿ ಆಯೇಷಾ ಅಲ್ಲಗಳೆದಿದ್ದರು. ಸದ್ಯ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ನಾಳೆ(ಅಕ್ಟೋಬರ್ 25) ಜಾನಿ ಮಾಸ್ಟರ್ ಚಂಚಲಗೂಡ್ ಜೈಲಿನಿಂದ ಹೊರ ಬರುವ ನಿರೀಕ್ಷೆಯಿದೆ.


Click it and Unblock the Notifications











